ಪೊರಕೆ ಹಿಡಿದು ತಾ.ಕಚೇರಿ ಸ್ವಚ್ಛಗೊಳಿಸಿದ ಡೀಸಿ
Team Udayavani, Dec 4, 2019, 11:33 AM IST
ನೆಲಮಂಗಲ: ಪಟ್ಟಣದ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಕಚೇರಿ ಆವರಣದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ಕಂಡು ಸ್ವತ: ಪೊರಕೆ ಹಿಡಿದು ಸ್ವಚ್ಛತೆ ಮಾಡಿದರು.
ತಾಲೂಕು ಕಚೇರಿಯ ಕಟ್ಟಡದ ಒಳ ಆವರಣದಲ್ಲಿ ಗಲೀಜು ಹಾಗೂ ಕಸದ ರಾಶಿ ಇದ್ದರೂ, ಕಚೇರಿಯಲ್ಲಿ ಕೆಲಸ ಮಾಡುವ ಯಾವುದೇ ಅಧಿಕಾರಿಗಳು ಸ್ವತ್ಛತೆ ಕಾರ್ಯ ಮಾಡಿಸದಿರುವ ಬಗ್ಗೆ ಗಮನಿಸಿದ ಜಿಲ್ಲಾಧಿಕಾರಿಗಳು ಜನರಿಗೆ ಜಾಗೃತಿ ಮೂಡಿಸುವ ಮೂಲಕ ಸ್ವಚ್ಛತೆ ಕಾಪಾಡಿ ಎನ್ನುವ ನಾವುಗಳು, ನಮ್ಮ ಕಚೇರಿಯಲ್ಲಿ ಕಸದರಾಶಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೂ, ಸುಮ್ಮನಿದ್ದೀರಾ, ನಿಮ್ಮ ಮನೆಗಳು ಈ ರೀತಿಯೇ ಇರುತ್ತವೆಯೇ, ಎಂದು ತರಾಟೆಗೆ ತೆಗೆದುಕೊಂಡು ಕೈಯಲ್ಲಿ ಪೊರಕೆ ಹಿಡಿದುಕೊಂಡು ತಾವೇ ಕಸಗೂಡಿಸಲು ಮುಂದಾದರು.
ಕಕ್ಕಾಬಿಕ್ಕಿಯಾದ ಅಧಿಕಾರಿಗಳು: ಜಿಲ್ಲಾಧಿಖಾರಿ ದಿಢೀರ್ ಭೇಟಿ ನೀಡಿದ್ದರಿಂದ ತಾ.ಕಚೇರಿ ಸಿಬ್ಬಂದಿ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ಡೀಸಿ ನಡೆಯಿಂದ ಅನಿವಾರ್ಯವಾಗಿ ಪೊರಕೆ ಹಿಡಿದು ಅವರ ಜೊತೆ ಸ್ವಚ್ಛತೆಗೆ ಮುಂದಾದರು.
ವಾರಕ್ಕೆ ಒಂದು ಭಾರಿ ಸ್ವಚ್ಛತೆ: ತಾಲೂಕು ಕಚೇರಿಗೆ ತಾಲೂಕಿನ ಸಾವಿರಾರು ಜನರು ಪ್ರತಿನಿತ್ಯ ಆಗಮಿಸುತ್ತಾರೆ. ಕಸದಿಂದ ತುಂಬಿದರೆ,ಅದರಿಂದ ಬರುವ ವಾಸನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂದು ಪ್ರಶ್ನಿಸಿದರು.ನಿಮ್ಮ ಕಚೇರಿಯ ಸ್ವತ್ಛತೆಯ ಬಗ್ಗೆ ಜವಾಬ್ದಾರಿ ಇರಬೇಕು ವಾರಕ್ಕೆ ಒಂದು ಬಾರಿ ಕಚೇರಿ ಆವರಣ ಸ್ವತ್ಛಗೊಳಿಸಲು ಆದ್ಯತೆ ನೀಡಿ ಎಂದು ತಹಶೀಲ್ದಾರ್ ಎಂ.ಶ್ರೀನಿವಾಸಯ್ಯಗೆ ಹೇಳಿದರು. ನೀಡುವ ಮೂಲಕ ವಾರಕ್ಕೆ ಒಂದು ಬಾರಿ ಎಲ್ಲಾ ಅಧಿಕಾರಿಗಳು ಕಚೇರಿಯ ಸ್ವತ್ಛ ಮಾಡಬೇಕು ಎಂದು ಆದೇಶ ಹೊರಡಿಸಿ ಎಂದು ತಹಸೀಲ್ದಾರ್ ಗೆ ಸೂಚಿಸಿದರು.
ಶೋಕಾಸ್ ನೋಟಿಸ್ : ತಾಲೂಕು ಕಚೇರಿಗೆ 10.30ರ ಸುಮಾರಿಗೆ ದಿಢೀರ್ ಭೇಟಿ ನೀಡಿದ ಡಿಸಿ ಒಂದು ಗಂಟೆಗಳ ಕಾಲ ಕಚೇರಿಯಲ್ಲಿದ್ದರೂ ಕೆಲಸಕ್ಕೆ ಗೈರಾಗಿದ್ದ ಹಾಗೂ ತಡವಾಗಿ ಬಂದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವುದರ ಜೊತೆಗೆ, ಸಂಬಳದಲ್ಲಿ ಒಂದು ದಿನದ ವೇತನ ಕಡಿತಗೊಳಿಸವುಂತೆ ತಹಶೀಲ್ದಾರ್ಗೆ ಸೂಚಿಸಿದರು. ಇದೇ ರೀತಿ ಮುಂದುವರೆದರೆ ಕೆಲಸದಿಂದ ವಜಾಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.