“ವೃಕ್ಷ ಸಂಪತ್ತು ವೃದ್ಧಿಯಾಗದೇ ಪರಿಸರ ಅಸಮತೋಲನ’
Team Udayavani, Sep 21, 2017, 11:42 AM IST
ನೆಲಮಂಗಲ: ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಉತ್ತಮ ಪರಿಸರ ನಿರ್ಮಾಣಕ್ಕೆ ವೃಕ್ಷ ಸಂಪತ್ತು ವೃದ್ಧಿಯಾಗದಿರುವುದು ಪರಿಸರ ಅಸಮತೋಲನಕ್ಕೆ ಕಾರಣವಾಗುವುದಲ್ಲದೇ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಿಸಬೆಕಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಪಾರ್ವತಿ ಹೇಳಿದರು.
ತಾಲೂಕಿನ ಸೋಂಪುರ ಹೋಬಳಿಯ ನರಸೀಪುರ ಗ್ರಾಮದಲ್ಲಿರುವ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಲಾಭದಾಯಕ ಪುಪ್ಪಕೃಷಿ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಉದ್ಘಾಟಿಸಿ ಅವರು
ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಾನವ ಪರಿಸರದಿಂದ ಎಲ್ಲವನ್ನು ಪಡೆಯುತ್ತಿದ್ದು, ಆದರೆ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ನಿರ್ಲಕ್ಷ್ಯ
ತೋರುತ್ತಿದ್ದಾನೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ಬೆಳೆಸಿ ನೀಡುವ ಬಗ್ಗೆ ಆಲೋಚಿಸದೆ ಸ್ವಾರ್ಥ ಪರವಾಗಿ ಪರಿಸರ ನಾಶಕ್ಕೆ ಮುಂದಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಹೇಳಿದರು.
ಉಪಯುಕ್ತ ಮಾಹಿತಿ : 35 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘವು ಅನೇಕ ಸಮಾಜಮುಖೀ ಕಾರ್ಯ
ಮಾಡಿಕೊಂಡು ಬರುತ್ತಿದೆ.ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾಜಮುಖೀ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ.
ಕೃಷಿಕರನ್ನು, ಸಣ್ಣ ಇಳುವರಿ ಮಾಡುವ ರೈತರನ್ನು ಒಗ್ಗೂಡಿಸಲು ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರಿಗೆ ಕೃಷಿ ಬಗ್ಗೆ ಅನೇಕ ಉಪಯುಕ್ತ ಮಾಹಿತಿ ನೀಡುತ್ತಾ ಅವರನ್ನು ಆರ್ಥಿಕ, ಸಾಮಾಜಿಕವಾಗಿ ಸಬಲೀಕರಣವಾಗಲು ಸಂಘ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ನಂಜುಂಡಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳು
ಬಡ ಜನರ ಅಭಿವೃದ್ಧಿಗೆ ಪೂರಕವಾಗಿವೆ. ಸ್ವತ್ಛತೆ ಬಗ್ಗೆ ಜನರು ಕಾಳಜಿ ವಹಿಸುವುದು. ಸ್ವ ಉದ್ಯೋಗ ಕೈಗೊಂಡು ಯಶಸ್ವಿಯಾಗಿ ನಡೆಸುವುದು. ಪ್ರತಿಯೊಬ್ಬ ಯುವಕ-ಯುವತಿಯರ ಕನಸಾಗಬೇಕು. ಅದಕ್ಕೆ ಪೂರಕವಾಗಿ ನಾವು ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಘವು ಸರ್ಕಾರಕ್ಕೆ ಸರಿ ಸಮಾನವಾದ ಸಂಘವಾಗಿದ್ದು, ಸರ್ಕಾರ ಮಾಡುವ ಜನಪರ ಕೆಲಸವನ್ನು ಮಾಡುತ್ತಿದೆ. ಕೃಷಿ ಜೊತೆಗೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಮಾಜಿಕ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.
ಬಮೂಲ್ ನಿರ್ದೇಶಕ ತಿಮ್ಮರಾಜು, ರೈತರಿಗೆ ಕೃಷಿಯಲ್ಲಿ ತಾನು ಬೆಳೆದ ಬೆಳೆಗೆ ನಿಗದಿತ ದರ ಸಿಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ನಿಂತರೆ ರೈತರು ನೆಮ್ಮದಿಯಾಗಿ ಬೆಳೆ ಬೆಳೆದು ಅಧಿಕ ಲಾಭ ಪಡೆಯಬಹುದು ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಘ ಪ್ರತಿವರ್ಷ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಹಾಲು ಉತ್ಪಾದಕರ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ರೂ.ಗಳ ಧನ ಸಹಾಯ ನೀಡುತ್ತಿರುವುದಕ್ಕೆ ನಾವೆಲ್ಲಾ ಅವರಿಗೆ ಕೃತಜ್ಞರಾಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನರಸೀಪುರ ಪಶು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಾಗಭೂಷಣ್, ನರಸೀಪುರ ಗ್ರಾಪಂ
ಸದಸ್ಯರಾದ ಮಹೇಶ್, ಚಂದ್ರಹಾಸ್, ನೆಲಮಂಗಲ ತಾಲೂಕು ಕೃಷಿ ಅಧಿಕಾರಿ ಉಮೇಶ್, ಸೋಂಪುರ ಹೋಬಳಿ
ಕೃಷಿ ಅಧಿಕಾರಿ ಗಂಗಾಧರ್, ಸಹಾಯಕ ತೋಟಗಾರಿಕ ನಿರ್ದೇಶಕರಾದ ರಾಮಮೂರ್ತಿಎನ್., ಜಿಲ್ಲಾ ಪಶು ವಿಜ್ಞನಿ ಆನಂದ್ ಮಣಿಗಲ್ ಜಿ., ಸೇವಾ ಪ್ರತಿನಿಧಿಗಳಾದ ಕಾಶಮ್ಮ, ವಸಂತಕುಮಾರಿ ಮತ್ತಿತರರಿದ್ದರು.