Banana: ಮಾರುಕಟ್ಟೆಯಲ್ಲಿ ದುಬಾರಿಯಾದ ಬಾಳೆಹಣ್ಣು
Team Udayavani, Aug 5, 2023, 1:50 PM IST
ದೇವನಹಳ್ಳಿ: ಜಿಲ್ಲಾದ್ಯಂತ ಮಳೆಯ ಕೊರತೆ ಜತೆಯಲ್ಲಿ ಸರಿಯಾದ ರೀತಿ ಸಮರ್ಪಕವಾಗಿ ಬಾಳೆಹಣ್ಣು ಬರದೇ ಇರುವುದರಿಂದ ಬಾಳೆಹಣ್ಣಿನ ಬೆಲೆ ಏರಿಕೆ ಹೆಚ್ಚಾಗಿದೆ.
ಇತ್ತೀಚಿನ ದಿನಗಳಲ್ಲಿ ಟೊಮೆಟೋ ಸೇರಿದಂತೆ ತರಕಾರಿ ಮತ್ತು ಹಣ್ಣುಗಳ ದರ ಹೆಚ್ಚಳದಿಂದ ಜನರ ಜೇಬಿಗೆ ಮತ್ತಷ್ಟು ಭಾರ ಆಗುವಂತೆ ಆಗಿದೆ. ಯಾವುದೇ ಪದಾರ್ಥ ಖರೀದಿಸಬೇಕಾದರೆ ಪ್ರತಿ ಯೊಂದು ವಸ್ತು ವಿನ ಬೆಲೆ ಹೆಚ್ಚಾಗಿದೆ. ಆಷಾಢ ಮತ್ತು ಅಧಿಕ ಶ್ರಾವಣ ದಲ್ಲೂ ಬಾಳೆಹಣ್ಣಿನ ಬೆಲೆ ಕಡಿಮೆ ಯಾಗಿಲ್ಲ. ಜಿಲ್ಲೆ ಯಲ್ಲಿ ಬಾಳೆ ಬೆಳೆಯುವ ರೈತರಿದ್ದು, ಮಳೆ ಯಥೇಚ್ಚವಾಗಿ ಬರುತ್ತಿರುವು ದರಿಂದ ಬಾಳೆ ಹಣ್ಣಿನ ಬೆಳೆಗೆ ಹೆಚ್ಚಿನ ಹಾನಿ ಉಂಟಾಗುತ್ತಿದೆ.
ಉತ್ತಮ ಆದಾಯ ಗಳಿಕೆ: ಮಾರು ಕಟ್ಟೆಗಳಲ್ಲಿ ಪಚ್ಚಬಾಳೆಹಣ್ಣು 20 ರಿಂದ 30ರೂ.ಗೆ ಸಿಗುತ್ತಿದ್ದಿದ್ದು ಬರೋಬ್ಬರಿ ಕೆ.ಜಿ.ಗೆ 50 ರೂ.ಆಗಿದೆ. ಸುಗಂಧ ಬಾಳೆಹಣ್ಣು 60ರೂ.ಗೆ ಸಿಗುತ್ತಿದ್ದಿದ್ದು ಈಗ 90 ರೂ.ಗೆ ದಾಟಿದೆ. ಜಿಲ್ಲೆಯಲ್ಲಿ ಪ್ರಮುಖ ಹಣ್ಣಿನ ಬೆಳೆಯಾದ ಮಾವು 8 ಸಾವಿರ ಹೆಕ್ಟೇರ್, ಏಲಕ್ಕಿ, ಪಚ್ಚಬಾಳೆ ಸೇರಿ 1,159 ಹೆಕ್ಟೇರ್ ಬಾಳೆ ಬೆಳೆಯಲಾಗುತ್ತಿದೆ. ಎರಡು ವಾರದಿಂದ 30ರಿಂದ 40 ರೂ.ಇದ್ದ ಬಾಳೆಹಣ್ಣಿನ ದರ ಈಗ 80ರಿಂದ 90ರೂ. ತಲುಪಿದೆ. ರೈತರು ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಹವಾಮಾನ ವೈಪರಿತ್ಯ: ರಾಜ್ಯದಲ್ಲಿ ಕೃಷಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಇದೀಗ ಬಾಳೆಯ ಸರದಿ ಬಂದಿದ್ದು, ಹೆಚ್ಚಾಗಿ ಬಾಳೆ ಬೆಳೆಯುವ ಬಯಲುಸೀಮೆಯಾದ ರಾಮನಗರ, ಬೆಂಗಳೂರು ಸೇರಿದಂತೆ ವಿವಿಧೆಡೆ ರೈತರು ಹವಾಮಾನ ವೈಪರಿತ್ಯ, ಮಳೆಯಿಂದ ಉಂಟಾಗುವ ಬೆಳೆ ಹಾನಿ, ಕಾಯಿಲೆಗಳಿಂದ ಫಸಲಿನ ಹಾನಿಯನ್ನು ತಪ್ಪಿಸಲು ಬಾಳೆ ಬೆಳೆಯುವ ಪ್ರದೇಶ ಇಳಿಮುಖ ಆಗುತ್ತಿದೆ ಎಂದು ರೈತರು ಹೇಳುತ್ತಾರೆ.
ವರಲಕ್ಷ್ಮೀ ಹಬ್ಬಕ್ಕೆ ಮತ್ತಷ್ಟು ಬೆಲೆ ಏರುವ ಸಾಧ್ಯತೆ ;
ಶ್ರಾವಣ ಮಾಸದಲ್ಲಿ ವರಲಕ್ಷ್ಮೀ ಹಬ್ಬ ಬರಲಿದ್ದು, ಆ ವೇಳೆಗೆ ಮತ್ತಷ್ಟು ಏರುವ ಸಾಧ್ಯತೆ ಕಂಡುಬರುತ್ತಿದೆ. ಮಾರುಕಟ್ಟೆ ದರಕ್ಕಿಂತ ಚಿಲ್ಲರೆ ಅಂಗಡಿಗಳಲ್ಲಿ ಬಾಳೆಹಣ್ಣು ದರ ಮತ್ತಷ್ಟು ಹೆಚ್ಚಾಗಲಿದ್ದು, ಗ್ರಾಹಕರಿಗೆ ದರದಲ್ಲಿ ಮತ್ತಷ್ಟು ಬಿಸಿ ನೀಡಲಿದೆ. ಪ್ರತಿವರ್ಷ ಮೇ ತಿಂಗಳಿನಿಂದ ಸುಮಾರು ಜುಲೈವರೆಗೆ ಜಿಲ್ಲೆಯಲ್ಲಿ ಮಾವು ಮತ್ತು ಹಲಸಿನ ಮಾರಾಟ ಹೆಚ್ಚಾಗಿರುತ್ತದೆ. ಈ ಬಾರಿ ತೇವಾಂಶ, ಅಕಾಲಿಕ ಮಳೆ ಸೇರಿದಂತೆ ಅನೇಕ ಕಾರಣಗಳಿಂದ ಮಾವು ಮತ್ತು ಹಲಸಿನ ಫಸಲು ಇಳಿಕೆಯಾಗಿರುತ್ತದೆ. ಬಾಳೆಹಣ್ಣು ಸೇರಿದಂತೆ ಇತರೆ ಹಣ್ಣುಗಳಿಗೆ ಬೇಡಿಕೆ ಬಂದಿದೆ. ಗ್ರಾಮಗಳಲ್ಲಿ ಜಾತ್ರಾಮಹೋತ್ಸವಗಳು ನಡೆಯುತ್ತಿದ್ದು, ಊಟಗಳಿಗೆ ಬಾಳೆಹಣ್ಣು ಇಡುತ್ತಾರೆ. ಪ್ರತಿ ಶುಭ ಕಾರ್ಯಗಳಿಗೆ ಬಾಳೆಹಣ್ಣನ್ನು ಹೆಚ್ಚು ಬಳಸುತ್ತಾರೆ. ಗೊನೆಗಟ್ಟಲೆ ಕೊಳ್ಳುವವರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವಂತಾಗಿದೆ.
ಈ ಬಾರಿ ಮಾವು, ಹಲಸು ಫಸಲು ಕಡಿಮೆಯಾದ ಹಿನ್ನೆಲೆ ಬಾಳೆಗೆ ಹೆಚ್ಚಿನ ಬೇಡಿಕೆಯಿದೆ. ದರದಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ನಮ್ಮ ಜಿಲ್ಲೆಯಲ್ಲಿ ಬಾಳೆ ಬೆಳೆಯುವವರ ಸಂಖ್ಯೆ ಕಡಿಮೆಯಿದೆ. ಜಿಲ್ಲೆಯಲ್ಲಿ 1,159 ಹೆಕ್ಟೇರ್ ಬಾಳೆ ಬೆಳೆಯಲಾಗುತ್ತಿದೆ. ಮಳೆ ಪ್ರಮಾಣ ಹೆಚ್ಚಳ ಆಗುವುದರಿಂದ ಬಾಳೆ ಬೆಳೆಗೆ ಕಾಂಡರೋಗ ಬರಲಿದ್ದು ರೈತರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.-ಗುಣವಂತ, ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ
ಮಳೆ ಜೋರಾಗಿ ಬರುತ್ತಿರುವುದ ರಿಂದ ಬಾಳೆ ಬೆಳೆಗೆ ರೋಗ ಬರು ತ್ತವೆ. ಬಾಳೆಹಣ್ಣು ಬೆಲೆ ಏರಿಕೆಯಾಗಿ ದ್ದರೂ ರೈತರಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಬಾಳೆಹಣ್ಣಿನ ಬೆಳೆಗೆ ಔಷಧ ಸಿಂಪಡಣೆ ಹಾಗೂ ಕೂಲಿಗಾರರಿಗೆ ಖರ್ಚು ಬರುವುದಿಲ್ಲ. -ಬಾಳೆಗೆ ಕಾಂಡ ರೋಗ ಬಂದು ಬೆಳೆ ನಾಶವಾಗುತ್ತಿವೆ. ಪುರುಷೋತ್ತಮ್, ಬಾಳೆ ಬೆಳೆಗಾರ
ಬಾಳೆಹಣ್ಣು ಬೆಲೆ ಏರಿಕೆ ದುಬಾರಿ ಯಾಗಿದೆ. ಆಂಧ್ರ ಮತ್ತು ತಮಿಳು ನಾಡುಗಳಿಂದ ಬಾಳೆಹಣ್ಣು ತರಿಸಿ ಮಾರಾಟ ಮಾಡಲಾಗುತ್ತಿದೆ. ಮಳೆ ಹೆಚ್ಚು ಬರುತ್ತಿರುವುದರಿಂದ ಸರಿಯಾದ ಸಮಯಕ್ಕೆ ಬಾಳೆಹಣ್ಣು ಮಾರುಕಟ್ಟೆಗೆ ಬರದೇ ಹಣ್ಣಿನ ದರದಲ್ಲಿ ಏರಿಕೆ ಕಂಡಿದೆ.– ಲಲಿತಮ್ಮ, ಬಾಳೆಹಣ್ಣು ವ್ಯಾಪಾರಸ್ಥರು