ಕುಟುಂಬಗಳ ನಡುವೆ ಮಾರಾಮಾರಿ
Team Udayavani, Nov 28, 2021, 1:13 PM IST
ದೇವನಹಳ್ಳಿ: ಜಮೀನಿಗೆ ಸಂಬಂಧಿಸಿದಂತೆ ಎರಡು ಕುಟುಂಬಸ್ಥರ ನಡುವೆ ನಡೆದಿರುವ ಗಲಾಟೆಯಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೈಚಾಪುರ ಗ್ರಾಮದಲ್ಲಿ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಅಣ್ಣೇಶ್ವರ ಗ್ರಾಪಂ ವ್ಯಾಪ್ತಿಯ ಬೈಚಾಪುರ ಗ್ರಾಮದ ಸ.ನಂ.17ರಲ್ಲಿ 3 ಎಕರೆ 34 ಗುಂಟೆ ಪೈಕಿ 1 ಎಕರೆ 15 ಗುಂಟೆ ವಿಸ್ತಿ ರ್ಣದ ಜಮೀನು ನಮ್ಮ ತಾಯಿ ಲಕ್ಷ್ಮಮ್ಮ ಎಂಬುವವರ ಹೆಸ ರಿನಲ್ಲಿ ಖಾತೆಯಾಗಿದ್ದು, ಈ ಜಮೀನಿನಲ್ಲಿ ಜೋಳದ ಬೆಳೆ ಬೆಳೆದಿ ದ್ದೇವೆ. ಇತ್ತೀಚಿಗೆ ಬಿದ್ದ ಅಕಾಲಿಕ ಮಳೆಯಿಂದಾಗಿ ಬೆಳೆ ಹಾಳಾ ಗಿದ್ದು, ದನಕರುಗಳಿಗೆ ಕಟಾವು ಮಾಡಿಕೊಂಡು ಹೋಗುವಂತೆ ರೈತರಿಗೆ ಉಚಿತವಾಗಿ ಕೊಟ್ಟಿದ್ದೇವೆ. ದನಕರುಗಳಿಗೆ ಜೋಳ ಕಟಾವು ಮಾಡುವಾಗ ಮುನಿಕೃಷ್ಣಪ್ಪ ಹಾಗೂ ಅವರ ಸಹಚರರು ಏಕಾಏಕಿ ದೊಣ್ಣೆಗಳು ಹಿಡಿದು ಕಟಾವು ಮಾಡುತ್ತಿದ್ದವರನ್ನು ಅವಾಚ್ಯಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಲು ಮುಂದಾಗಿದ್ದರು. ಅವರನ್ನು ತಡೆಯಲು ಹೋದಾಗ ನಮ್ಮ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಶಿಧರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ಗ್ರಾಮದ ಮತ್ತೂಂದು ಗುಂಪಿನ ಬಿ.ಎಂ.ಮುನಿಕೃಷ್ಣಪ್ಪ ಎಂಬುವವರು, ಬೈಚಾಪುರ ಗ್ರಾಮದ ಸ.ನಂ.17ರಲ್ಲಿ 4 ಎಕರೆ ಪೈಕಿ 0.39 ಗುಂಟೆ ಜಮೀನು ನಮಗೆ ದಾಖಲಾತಿಯಾಗಿದ್ದು, ಈ ವಿಚಾ ರವಾಗಿ ಗಲಾಟೆಯಾಗಿದೆ. ನಾನು ಮನೆಗೆ ಹೋಗುವಾಗ ದಾರಿಗೆ ಕಲ್ಲುಹಾಕಿ ಅಡ್ಡಗಟ್ಟಿ ನನ್ನ ಹಾಗೂ ನಮ್ಮ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ. ನಮ್ಮ ಜಮೀನಿನಲ್ಲಿ ಜೋಳದ ಕಡ್ಡಿಗಳು ಕಟಾವು ಮಾಡಲಿಕ್ಕೆ ಸುಮಾರು 200ಕ್ಕೂ ಹೆಚ್ಚು ಮಂದಿಯನ್ನು ಕರೆಯಿಸಿ, ದೌರ್ಜನ್ಯ ಮಾಡಿಸಿ, ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಗಲಾಟೆಯಲ್ಲಿ ಮುನಿಕೃಷ್ಣಪ್ಪ ಮತ್ತು ಶಶಿಧರ್ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.