ಪಿತೃಪಕ್ಷ ಮಾಸ: ಹೂವಿನ ವ್ಯಾಪಾರ ಕುಸಿತ
Team Udayavani, Sep 29, 2021, 2:09 PM IST
ದೇವನಹಳ್ಳಿ: ಪಿತೃಪಕ್ಷಗಳ ಮಾಸ ಜಿಲ್ಲೆಯ ಹೂವು ಬೆಳೆಗಾರರ ಬೆವರು ಕಸಿದಿದ್ದು, ಯಾವುದೇ ಶುಭ ಸಮಾರಂಭಗಳಿಲ್ಲದ ಕಾರಣ ಜಿಲ್ಲೆಯಲ್ಲಿ ವಿವಿಧ ಬಗೆಯ ಹೂವು ಕೇಳುವವರೇ ಇಲ್ಲದಂತಾಗಿದೆ.
ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬ ಗಳಿಂದ ಹೂವು ಬೆಳೆಗಾರರಿಗೆ ಉತ್ತಮ ಬೆಲೆ ಸಿಕ್ಕಿತ್ತು. ಆದರೆ,ಈಗ ಪಿತೃಪಕ್ಷದ ದಿನಗಳು ಬಂದ ಕಾರಣಕ್ಕೆ ಹೂ ಮಾರಾಟವಾಗದೆ ಹಾಕಿದ ಬಂಡವಾಳ ಹಾಗೂ ಕೂಲಿಗಾರರ ಕೂಲಿ, ಮಾರುಕಟ್ಟೆಗೆ ಸಾಗಾಣಿಕಾ ವೆಚ್ಚವು ಬೆಳೆಗಾರನ ಕೈಹಿಡಿಯದೆ ಆರ್ಥಿಕ ನಷ್ಟಕ್ಕೆ ಗುರಿಯಾಗುವ ಪರಿಸ್ಥಿತಿ ಬಂದೊದಗಿದೆ.
ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ತಾಲೂಕಿನಲ್ಲಿ ಹೂ ಬೆಳೆಈ ಬಾರಿ ಉತ್ತಮವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಉತ್ತಮ ಮಳೆಯಾಗಿದ್ದು, ಬೆಳೆಯೂ ಕೂಡ ಉತ್ತಮವಾಗಿದೆ. ರೈತರು ವರಲಕ್ಷ್ಮೀಹಬ್ಬ, ಗಣೇಶ ಹಬ್ಬದ ಸಲುವಾಗಿ ಹೂಬೆಳೆದಿದ್ದರೂ, ಆ ವೇಳೆಯಲ್ಲಿ ಬೇಡಿಕೆ ಹೇಳುವಷ್ಟು ಸಿಗಲಿಲ್ಲ. ದರವೂ ಹೇಳಿಕೊಳ್ಳುವಷ್ಟು ಏರಿಕೆಯಾಗಿರಲಿಲ್ಲ. ಕಳೆದ ಬಾರಿಗಿಂತ ಈ ಬಾರಿಉತ್ತಮ ಇಳುವರಿ ಇದ್ದರೂ ಹೂವುಗಳಿಗೆ ಬೆಲೆ ಸಿಗದ ರೈತ ಸಂಕಷ್ಟ ಎದುರಿಸುವಂತಾಗಿದೆ.
ಬಯಲು ಸೀಮೆಯ ಜಿಲ್ಲೆಯಾಗಿರುವುದರಿಂದ ರೈತರು ಇರುವ ಬೋರ್ವೆಲ್ಗಳಲ್ಲಿಇರುವ ಅಲ್ಪಸ್ವಲ್ಪದ ನೀರಿನಲ್ಲಿಯೇ ತರಕಾರಿ, ಹೂವು, ಹಣ್ಣು ಬೆಳೆಯುತ್ತಿದ್ದಾರೆ. ಅಧಿಕಪ್ರಮಾಣದಲ್ಲಿ ಹೂವು ಬೆಳೆಯುತ್ತಾರೆ. ಸೇವಂತಿಗೆತರಹೇವಾರಿ ಗುಲಾಬಿಯ ಬಟನ್ ಹೂವುಗಳು ತಮಿಳುನಾಡು,ಹೈದರಾಬಾದ್, ಮಂಗಳೂರು,ಉಡುಪಿ ಸೇರಿದಂತೆ ದಿನ ಬೆಳಗಾದರೆ ಹೂವುಗಳು ಹೋಗುತ್ತದೆ. ಕೊರೊನಾ ಸಂಕಷ್ಟದಿಂದ ಸುಮಾರು ಒಂದೂವರೆ ವರ್ಷದಿಂದ ಲಾಕ್ಡೌನ್, ಸೀಲ್ಡೌನ್ನಿಂದ ನಲುಗಿದ್ದ ಹೂವು ಬೆಳೆಗಾರರು ಕಳೆದ ಮೂರ್ನಾಲ್ಕು ತಿಂಗಳಿಂದಅಷ್ಟೇ ಸುಧಾರಿಸಿಕೊಳ್ಳುತ್ತಿದ್ದಾರೆ.
ಬಂದ ಬೆಲೆಗೆ ಮಾರಾಟ: ಪಿತೃಪಕ್ಷ ಮಾಸಗಳ ಎಂಬ ಕಾರಣಕ್ಕೆ ಜಿಲ್ಲೆಯ ಮಾರುಕಟ್ಟೆಯಲ್ಲಿಹೂವು ದರ ಕುಸಿತಗೊಂಡಿದ್ದು, ಲಕ್ಷಾಂತರ ರೂ. ಬಂಡವಾಳ ಹಾಕಿದ ಹೂವು ಬೆಳೆಗಾರರು ವಿಧಿಯಿಲ್ಲದೆ ಕೈಗೆಬಂದ ಬೆಲೆಗೆ ಮಾರಾಟ ಮಾಡುವಂತಾಗಿದೆ. ಹೂವುಗಳಿಗೆ ಬೇಡಿ ಕೆ ಯಿ ಲ್ಲದೆ ಗಿಡಗಳಲ್ಲಿಯೇಒಣಗುತ್ತಿವೆ. ಕೆಲ ರೈತರುತೋಟಗಳ ಹತ್ತಿರ ಬರುವ ಜನರಿಗೆ ಹಾಗೂ ವಾಹನಗಳಲ್ಲಿ ಲೋಡ್ ಮಾಡಿಕೊಂಡು ಬಂದು ಅಕ್ಕಪಕ್ಕದ ಮನೆಗಳಿಗೆ ಹಾಗೂ ದೇವಾಲಯ ಮಠಗಳಿಗೆ ಉಚಿತವಾಗಿ ಹೂವುಗಳನ್ನು ನೀಡುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಗ್ರಾಹಕರಿಗೆ ಉಪಯೋಗವಿಲ್ಲ: ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆದ ಹೂವುಗಳಿಗೆ ಪಿತೃಪಕ್ಷದ ಹಿನ್ನೆಲೆ ಬೇಡಿಕೆ ಇಲ್ಲದಂತಾಗಿದೆ. ಯಾವುದೇ ಶುಭ ಸಮಾರಂಭಗಳು ನಡೆಯುತ್ತಿಲ್ಲ. ದೇವಾಲಯಗಳು ವಿಶೇಷ ಪೂಜಾ ಕಾರ್ಯಕ್ರಮಗಳಿಲ್ಲದೆ ಹೂ ಬಳಕೆ ಕಡಿಮೆಯಾಗಿದೆ. ಹೂವು ದರದಲ್ಲಿ ಸತತವಾಗಿ ಇಳಿಕೆ ಕಾಣುತ್ತಿದೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ಹೂವು ಕೈಗೆ ಸೇರುತ್ತಿಲ್ಲ. ಮಾರುಕಟ್ಟೆಯಲ್ಲಿ ಕೆಲ ವರ್ತಕರು ರೈತರಿಂದ ಕಡಿಮೆ ಬೆಲೆಗೆ ಹೂವು ಖರೀದಿಸಿದರೂ ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೆಲೆ ಇಳಿಕೆಯಾದರೂ ಗ್ರಾಹಕರಿಗೆ ಉಪಯೋಗವಿಲ್ಲದಂತಾಗಿದೆ.
ಗುಲಾಬಿಗೆ ಹೆಚ್ಚು ಬೇಡಿಕೆ: ಜಿಲ್ಲೆಯಲ್ಲಿ ಸೇವಂತಿ, ಗುಲಾಬಿಗೆ ಹೆಚ್ಚುಬೇಡಿಕೆಯಿದೆ. ಹೆಕ್ಟೇರ್ಗಟ್ಟಲೇ ಬರೀ ಹೂವುಬೆಳೆಯುವ ರೈತರಿ ದ್ದಾರೆ. ಆದರೆ, ಈಗಹೂವನ್ನು ಕೇಳುವವರು ಇಲ್ಲದೆ ಮಾರುಕಟ್ಟೆಯಲ್ಲಿ ರಾಶಿ ರಾಶಿ ಹೂಗಳು ಮಾರಾಟವಾಗದೇ ಉಳಿಯುತ್ತಿದೆ. ಕೆಲವು ರೈತರು ತೋಟಗಳಲ್ಲಿಯೇ ಹೂವು ಕೀಳದೆ ಹಾಗೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಗೊಂಡ ನಂತರ ಕೆಐಡಿಬಿ, ಬಡಾವಣೆಗಳು ತಲೆ ಎತ್ತುತ್ತಿರುವುದರಿಂದ ಪ್ರತಿವರ್ಷ ಕಳೆದಂತೆ ಹೂವು ಬೆಳೆಗಾರರ ಸಂಖ್ಯೆಕಡಿಮೆಯಾಗುತ್ತಿದೆ. ಆದರೂ ಇರುವಜಮೀನುಗಳಲ್ಲಿಯೇ ಹೂವು ಬೆಳೆದು ತಮ್ಮ ನಿತ್ಯದ ಕಾಯಕ ಮಾಡುತ್ತಿದ್ದಾರೆ
ಶ್ರಾವಣ ಮಾಸದಲ್ಲಿ ಒಂದಿಷ್ಟು ಕೈತುಂಬಾ ಹಣ ಮಾಡಿಕೊಂಡಿದ್ದ ಹೂವು ಬೆಳೆಗಾರರಿಗೆ ಈಗ ಪಿತೃಪಕ್ಷಹಿನ್ನೆಲೆ ಹೂವಿಗೆ ಬೆಲೆ, ಬೇಡಿಕೆ ಕಡಿಮೆಯಾಗಿದೆ. ಉತ್ತಮ ದರ ನಿಗದಿಯಾಗಬೇಕೆಂದರೆ ದಸರಾ, ದೀಪಾವಳಿ ಹಬ್ಬದವರೆಗೂ ಕಾಯಬೇಕಿದೆ. ಹೂವು ಬೆಳೆಗಾರರ ಸಂಕಷ್ಟ ಕೇಳುವವರಿಲ್ಲ. – ಮುನಿಯಪ್ಪ, ಹೂವು ಬೆಳೆಗಾರ
ಹೂವುಗಳು ಉತ್ತಮ ಇಳುವರಿ ಬಂದಿದ್ದರೂ, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ. ಬೆಲೆಏರಿಕೆ ಹೆಚ್ಚಾಗಿದ್ದರೂ ಹೂವು ಬೆಳೆದು ಜೀವನ ಸಾಗಿಸಬೇಕೆಂಬಉದ್ದೇಶದಿಂದ ಸಾಲ ಮಾಡಿ ಇರುವ ನೀರಿನಲ್ಲಿಯೇ ಬೆಳೆ ಬೆಳೆಯುತ್ತಿದ್ದೇವೆ. – ಗೋವಿಂದರಾಜು, ಹೂವು ಬೆಳೆಗಾರ
ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ತಾಲೂಕುಗಳಲ್ಲಿ ವಿವಿಧ ರೀತಿಯ ಹೂವು ಬೆಳೆಯುತ್ತಾರೆ. ಹೂವು ಬೆಳೆಯುವ ರೈತರಿಗೆ ಸಾಕಷ್ಟು ಮಾಹಿತಿಯನ್ನು ತೋಟಗಾರಿಕೆ ಇಲಾಖೆಯಿಂದ ನೀಡುತ್ತಿದ್ದೇವೆ. ಪಿತೃ ಪಕ್ಷ ಇತರೆ ಕಾರಣಗಳಿಂದ ಹೂವಿನ ಬೆಲೆ ಇಳಿಕೆಯಾಗಿದೆ. – ಮಹಾಂತೇಶ್ ಮುರುಗೋಡ್, ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ
ಹೂಗಳ ಖರೀದಿ ಬೆಲೆ ಕಡಿಮೆಯಾಗಿದೆ. ಮಳೆ ಇತರೆ ಕಾರಣಗಳಿಂದ ಹೂವುಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ಹೂವು ವ್ಯಾಪಾರ ಕುಸಿದಿದೆ.– ಗೌರಮ್ಮ, ಹೂವು ಮಾರಾಟಗಾರರು
-ಎಸ್.ಮಹೇಶ್