ಆಸ್ಪತ್ರೆಗೆ ಆರೋಗ್ಯಾಧಿಕಾರಿಗಳಿಂದ ಬೀಗ! ವೈದ್ಯರ ನೇಮಕಕ್ಕೆ ನಟಿ ಲೀಲಾವತಿ ಮನವಿ
Team Udayavani, May 1, 2020, 4:47 PM IST
ನೆಲಮಂಗಲ: ಕೋವಿಡ್ ಆತಂಕದಲ್ಲಿ ಗ್ರಾಮೀಣರಿಗೆ ವರವಾಗಬೇಕಾಗಿದ್ದ ಆರೋಗ್ಯ ಕೇಂದ್ರದ ವೈದ್ಯರನ್ನು ಇಲಾಖೆ ಅಧಿಕಾರಿಗಳೇ ಬೇರೆ ಆಸ್ಪತ್ರೆಗೆ ನಿಯೋಜಿಸಿದ್ದು, ನೂರಾರು ರೋಗಿಗಳು ಪರದಾಡುವಂತಾಗಿದೆ.
ಒಂದೂವರೆ ತಿಂಗಳಿಂದ ವೈದ್ಯರಿಲ್ಲ:
ತಾಲೂಕಿನ ಸೋಲದೇವನಹಳ್ಳಿ ಡಾ.ಎಂ. ಲೀಲಾವತಿ, ಪ್ರಾಥಮಿಕ ಆರೋಗ್ಯ ಕೇಂದ್ರ 2009ರಲ್ಲಿ ಆರೋಗ್ಯ ಇಲಾಖೆಗೆ
ಹಸ್ತಾಂತರವಾಗಿದೆ. ಅಂದಿನಿಂದ 20ಕ್ಕೂ ಹೆಚ್ಚು ಗಡಿಗ್ರಾಮಗಳಿಗೆ ಆರೋಗ್ಯ ಸೇವೆ ಹಾಗೂ ತುರ್ತುಸೇವೆಗೆ ಬಹಳಷ್ಟು ಸಹಕಾರಿಯಾಗಿತ್ತು. ಆದರೆ ಕೊರೊನಾ ನೆಪ ಮಾಡಿರುವ ಅಧಿಕಾರಿಗಳು ಆಸ್ಪತ್ರೆಗೆ ಬೀಗಹಾಕಿದ್ದಾರೆ. ಸೊಲದೇವನ ಹಳ್ಳಿ ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯೆ ಡಾ.ಮಂಜುಳಾ ಕಾರ್ಯ ನಿರ್ವಹಿಸುತ್ತಿದ್ದರು. ಅವರನ್ನು ಮತ್ತೂಂದು
ಆಸ್ಪತ್ರೆಗೆ ನಿಯೋಜಿಸಿ ಬೀಗ ಹಾಕಿದ್ದಾರೆ.
ಮಾನವೀಯತೆ ಮರೆತ ಅಧಿಕಾರಿಗಳು:
ಆಸ್ಪತ್ರೆಗೆ ಬೀಗ ಹಾಕಿ ಗ್ರಾಮೀಣ ಜನರ ನರಳಾಟ ಕೇಳುತ್ತಿಲ್ಲ. ಗ್ರಾಮಗಳಲ್ಲಿ ಸಮಸ್ಯೆಯಿದೆ ಎಂದು ಬೇಡಿದರೂ ಅಧಿಕಾರಿಗಳು
ಸ್ಪಂದಿಸುತ್ತಿಲ್ಲ. ಜೀವ ನೀಡಬೇಕಾದ ಅಧಿಕಾರಿಗಳೇ ಮಾನವೀಯತೆ ಮರೆತಿದ್ದಾರೆ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದರು.
20ಕ್ಕೂ ಹೆಚ್ಚು ಮಂದಿ ಹಾಗೂ ತಾಲೂಕಿನ ಗಡಿಗ್ರಾಮದ ವೃದ್ಧರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಏಕಾಏಕಿ ಬೀಗ ಹಾಕಿದ್ದರಿಂದ ತಾಲೂಕಿನ ಆಸ್ಪತ್ರೆಗೆ ಹೋಗಲು ವಾಹನ ಸೌಲಭ್ಯವಿಲ್ಲದೆ ಪರದಾಡುತ್ತಿದ್ದು, ನೋವಿನಿಂದ ನರಳುವ ಸ್ಥಿತಿ ಎದುರಾಗಿದೆ. ತಾಲೂಕಿನಲ್ಲಿ ಜ್ವರದ ಪರೀಕ್ಷೆ ನಡೆಸಲಾಗುತ್ತಿದೆ. ವಾರಕ್ಕೆ ಕೆಲವು ಬಾರಿ ವೈದ್ಯರನ್ನು ಕಳುಹಿಸಲಾಗುತ್ತದೆ. ಆದರೆ
ನಾಳೆಯಿಂದ ವೈದ್ಯರನ್ನು ಕಳುಹಿಸಲು ಸಾಧ್ಯವಿಲ್ಲ. ರೋಗಿಗಳನ್ನು ಕರೆದುಕೊಂಡು ಬನ್ನಿ ಎಂದು ತಾಲೂಕು ಆರೋಗ್ಯಾಧಿಕಾರಿ ಹರೀಶ್ ಪ್ರತಿಕ್ರಿಯಿಸಿದ್ದಾರೆ.
ಕಣ್ಣೀರು ಹಾಕಿದ ನಟಿ ಲೀಲಾವತಿ
ಗಡಿ ಗ್ರಾಮಸ್ಥರಿಗಾಗಿ ಆಸ್ಪತ್ರೆ ನಿರ್ಮಿಸಿ ಸರಕಾರಕ್ಕೆ ನೀಡಲಾಗಿದೆ. ಇಂತಹ ಸಂಕಷ್ಟದಲ್ಲಿ ಆಸ್ಪತ್ರೆಗೆ ಬೀಗ ಹಾಗಿದ್ದು, ಸೂಕ್ತವಲ್ಲ. ಜನರಿಗೆ ಅನ್ಯಾಯ ಮಾಡಿದರೆ ದೇವರು ಮೆಚ್ಚುತ್ತಾನೆಯೇ? ವೃದ್ಧರು ನಮ್ಮ ಕಾರಿಗೆ ಅಡ್ಡ ನಿಂತು, ಆಸ್ಪತ್ರೆ ಆರಂಭಿಸಿ ಎಂದು ಕೇಳಿಕೊಳ್ಳುವುದು ಕಂಡರೆ ನೋವಾಗುತ್ತದೆ ಎಂದು ಹಿರಿಯ ನಟಿ ಲೀಲಾವತಿ ಕಣ್ಣೀರಿಟ್ಟರು.
ಮನವಿ: ಗ್ರಾಮೀಣ ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಅಧಿಕಾರಿಗಳು, ಆಸ್ಪತ್ರೆ ಬಾಗಿಲು ಮುಚ್ಚಿದರೆ ಜನರಿಗೆ ಸಮಸ್ಯೆಯಾಗುತ್ತದೆ.
ಕೈಮುಗಿಯುವೆ. ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸಿ ಎಂದು ಮನವಿ ಮಾಡಿದರು.