ಎಎಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿ ಸಾಧ್ಯ
Team Udayavani, Jul 3, 2022, 2:44 PM IST
ದೇವನಹಳ್ಳಿ: ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ದೇಶ ಹಾಗೂ ರಾಜ್ಯದ ಜನಸಾಮಾನ್ಯರ ಅಭಿವೃದ್ಧಿ ಸಾಧ್ಯ ಎಂದು ಆಮ್ ಆದ್ಮಿ ಪಕ್ಷದ ವಲಯ ಸಂಯೋಜಕ ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ ಎಂ. ರವಿಶಂಕರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಆಮ್ ಆದ್ಮಿ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಉಸ್ತುವಾರಿ ಬಿ.ಕೆ.ಶಿವಪ್ಪ ರವರ ನೇತೃತ್ವದಲ್ಲಿ ಏರ್ಪಡಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪದಾಧಿಕಾರಿಗಳ ಸಭೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ದುರಾಡಳಿತವನ್ನು, ಅದರಲ್ಲೂ ಬಿಜೆಪಿ ಪಕ್ಷದ 40 ಪರ್ಸೆಂಟ್ ಸರ್ಕಾರದ ಆಡಳಿತವನ್ನು ನೋಡಿ ಜನ ಬೇಸತ್ತಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರವರ ನೇತೃತ್ವದ ಆಡಳಿತ ಮೆಚ್ಚಿ ಈಗಾಗಲೇ ಪಂಜಾಬ್ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ರಚಿಸಿದ್ದು, ಈ ಎರಡೂ ರಾಜ್ಯಗಳಲ್ಲಿ ಆಗುತ್ತಿರುವ ಜನಪರವಾದ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಕರ್ನಾಟಕದಲ್ಲಿ ಹೊಸ ಬದಲಾವಣೆಗಾಗಿ ಎಎಪಿಗೆ ಹೆಚ್ಚು ಜನ ಸೇರ್ಪಡೆಯಾಗುತ್ತಿರುವುದು ಸಂತಸದ ವಿಷಯ ಎಂದರು.
ಪ್ರಧಾನಿ ಶೋಕಿಗೇನು ಕಡಿಮೆಯಿಲ್ಲ: ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಡಾ. ವೆಂಕಟೇಶ್ ಮಾತನಾಡಿ, ದೇಶದಲ್ಲಿ ಒಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ನಿರುದ್ಯೋಗ, ಬಡತನ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆದರೂ ಪ್ರಧಾನಿ ಶೋಕಿಗೇನು ಕಡಿಮೆಯಿಲ್ಲ. ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಎರಡೂ ದುಬಾರಿಯಾಗಿದ್ದು, ಇವುಗಳನ್ನು ಪಡೆಯಲು ಜನ ದುಡಿದಿದ್ದೆಲ್ಲಾ ಚೆಲ್ಲಿದರೂ ಸಾಕಾಗುತ್ತಿಲ್ಲ ಎಂದರು.
ಆಮ್ ಆದ್ಮಿ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಆಮ್ ಆದ್ಮಿ ಪಕ್ಷದ ಜಿಲ್ಲಾ ಉಸ್ತುವಾರಿ ಬಿ.ಕೆ. ಶಿವಪ್ಪ, ದೊಡ್ಡಬಳ್ಳಾಪುರ ಉಸ್ತುವಾರಿ ಪುರುಶೋತ್ತಮ್, ನೆಲಮಂಗಲ ಉಸ್ತುವಾರಿ ಗಂಗಬೈಲಪ್ಪ, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ತಾಲೂಕು ಅಲ್ಪ ಸಂಖ್ಯಾತರ ಮಹಿಳಾ ಘಟಕದ ಅಧ್ಯಕ್ಷೆ ನಸ್ರತ್, ದೇವನಹಳ್ಳಿ ಟೌನ್ ಅಧ್ಯಕ್ಷ ಬಿ.ಕೆ. ಲೋಕೇಶ್ ಕುಮಾರ್, ವಿಜಯಪುರ ಹೋಬಳಿ ಅಧ್ಯಕ್ಷ ದೇವರಾಜ್, ವಿಜಯಪುರ ಟೌನ್ ಅಧ್ಯಕ್ಷ ಮಂಜುನಾಥ್, ಚನ್ನರಾಯಪಟ್ಟಣ ಹೋಬಳಿ ಅಧ್ಯಕ್ಷ ಬಿ.ಕೆ.ದೇವರಾಜ್, ವಿಜಯಪುರ ಟೌನ್ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ದೇವನಹಳ್ಳಿ ಟೌನ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಆದಿಲ್, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷೆ ರೂಪ, ವಿಜಯಪುರ ಟೌನ್ ಅಲ್ಪ ಸಂಖ್ಯಾತರ ಮಹಿಳಾ ಘಟಕದ ಅಧ್ಯಕ್ಷೆ ನಗೀನ, ಕ್ರೀಡಾ ವಿಭಾಗದ ಅಧ್ಯಕ್ಷ ಇಮ್ರಾನ್ ಹಾಗೂ ಮತ್ತಿತರರು ಇದ್ದರು.