ಕೊಯಿರಾ ಬೆಟ್ಟಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು
Team Udayavani, Mar 16, 2021, 11:12 AM IST
ದೇವನಹಳ್ಳಿ: ಇತಿಹಾಸ ಪ್ರಸಿದ್ಧ ಕೊಯಿರಾ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿಯನ್ನಿಟ್ಟಿದ್ದ ಪರಿಣಾಮ ಅಪಾರ ಸಂಪತ್ತು ನಷ್ಟವಾಗಿದೆ.
ಈ ಕೊಯಿರಾ ಬೆಟ್ಟವು ಇತಿಹಾಸ ಪ್ರಸಿದ್ಧವಾಗಿದ್ದು, ಬೆಂಗಳೂರಿನ ಹೃದಯ ಭಾಗದಲ್ಲಿರುವ ವಿಧಾನಸೌಧಕ್ಕೆ ಇಲ್ಲಿನ ಕಲ್ಲನ್ನೇ ಬಳಸಲಾಗಿತ್ತು. ದೇಶ-ವಿದೇಶಗಳಿಗೆ ಹಾಗೂ ಕಲೆ, ಕೆತ್ತನೆಗಳಿಗೆ ಇಲ್ಲಿನ ಕಲ್ಲುಗಳನ್ನೇ ಬಳಸುತ್ತಿದ್ದಾರೆ. ಆದರೆ, ಈ ಬೆಟ್ಟಕ್ಕೆ ಕಳೆದ 2 ದಿನಗಳಿಂದ ಕಿಡಿಗೇಡಿಗಳು ಬೆಟ್ಟದ ಸುತ್ತಮುತ್ತಲಿನಲ್ಲಿ ಬೆಂಕಿಯನ್ನು ಹಚ್ಚಿ 3 ಎಕರೆಯಷ್ಟು ಬೆಟ್ಟವು ಸುಟ್ಟು ಕರಕಲಾಗಿದೆ. ಪ್ರಾಣಿ-ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದಜೀವ ಸಂಕುಲಕ್ಕೆ ಬೆಟ್ಟವು ಹೇಳಿ ಮಾಡಿಸಿದಂತಿತ್ತು. ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ಬೆಟ್ಟಕ್ಕೆ ಬೆಂಕಿ ಬಿದ್ದಿರುವುದರಿಂದ ಪ್ರಾಣಿ-ಪಕ್ಷಿಗಳು ನಶಿಸಿ ಹೋಗುತ್ತಿವೆ ಎಂದು ಕೊಯಿರಾ ಸುತ್ತಮುತ್ತಲಿನಗ್ರಾಮಸ್ಥರು ಹೇಳುತ್ತಿದ್ದಾರೆ.
ಅರಣ್ಯ ಇಲಾಖೆಗೆ ಹಸ್ತಾಂತರಿಸಿ: ಬೆಂಕಿ ಅನಾಹುತಗಳು ಆಗುತ್ತಿರುವುದರಿಂದ ಹಸುಗಳನ್ನು ಮೇಯಿ ಸಲು ಹೋಗುತ್ತಾರೆ. ಒಂದು ಬಾರಿ ಈ ಪ್ರದೇಶದಲ್ಲಿ ಚಿರತೆ ಕಂಡುಬಂದಿತ್ತು. ಗ್ರಾಮಸ್ಥರಲ್ಲಿ ಆತಂಕವೂ ಸಹ ಮನೆ ಮಾಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಬೋನಿಟ್ಟು ಚಿರತೆ ಬೋನಿಗೆ ಬಿದ್ದಿರುವ ಉದಾಹರಣೆ ಇದೆ. ಈ ಬೆಟ್ಟದಲ್ಲಿ ಅಳಿಲು, ನವಿಲು, ಮೊಲ, ಗಿಳಿ, ಹೀಗೆ ಹತ್ತು ಹಲವಾರು ಪ್ರಭೇದದ ಪ್ರಾಣಿ, ಪಕ್ಷಿಗಳು ಸೇರಿದಂತೆ ಔಷಧ ಗುಣದ ಸಸಿಗಳು ಸಹ ಇದ್ದವು. ಬೆಟ್ಟದ ರಕ್ಷಣೆ ಮಾಡುವುದು ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ, ಕಂದಾಯ ಇಲಾಖೆಗೆಒಳಪಡುವ ಈ ಬೆಟ್ಟವು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.
ಬೆಟ್ಟದ ಸುತ್ತಲೂ ತಡೆಗೋಡೆ ನಿರ್ಮಿಸಿ ಕಿಡಿಗೇಡಿಗಳು ಕಳೆದ ಎರಡು ದಿನಗಳಿಂದಕೊಯಿರಾ ಬೆಟ್ಟದ ಸುತ್ತಲು ಬೆಂಕಿಹಾಕುತ್ತಿದ್ದಾರೆ. ದಟ್ಟ ಹೊಗೆ ಆವರಿಸುತ್ತಿರುವುದರಿಂದ ಸುತ್ತಮುತ್ತಲಿನಗ್ರಾಮಸ್ಥರು ಸಮಸ್ಯೆ ಎದುರಿಸುವಂತೆ ಆಗಿದೆ.ಕೂಡಲೇ ಅರಣ್ಯ ಇಲಾಖೆ ಮತ್ತು ಕಂದಾಯಇಲಾಖೆ ಜತೆಗೂಡಿ ಸರ್ವೆ ಕಾರ್ಯ ಕೈಗೊಂಡುಬೆಟ್ಟದ ಸುತ್ತಲು ತಡೆಗೋಡೆ ನಿರ್ಮಿಸಬೇಕು.ಅರಣ್ಯ ಇಲಾಖೆ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಬೆಟ್ಟ ಮತ್ತು ಕಾಡುಗಳಿಗೆ ಬೆಂಕಿ ತಗುಲದಂತೆ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸ ಬೇಕು. ಬೆಂಕಿಯಿಂದ ಪರಿಸರ ನಾಶವಾದರೆ ಮತ್ತೆ ಅಂತಹ ವಾತಾವರಣಸೃಷ್ಟಿಸುವುದು ಅಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಚಿಕ್ಕೇಗೌಡ ಹೇಳಿದ್ದಾರೆ.
ಕೊಯಿರಾ ಬೆಟ್ಟಕ್ಕೆ ಬೆಂಕಿ ತಗುಲಿದೆ ಎಂಬ ಮಾಹಿತಿ ಬಂದ ತಕ್ಷಣ ಅರಣ್ಯ ಸಿಬ್ಬಂದಿ ಕಳುಹಿಸಿ ರಬ್ಬರ್ ಪ್ಯಾಡ್ ಮೂಲಕ ಬೆಂಕಿಯನ್ನು ನಂದಿಸುವ ಕಾರ್ಯ ಮಾಡಲಾಯಿತು. ಬೇಸಿಗೆ ಸಮಯದಲ್ಲಿ ಬೆಂಕಿ ಅನಾಹುತ ಹೆಚ್ಚು ನಡೆಯುತ್ತದೆ. ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. –ಧನಲಕ್ಷ್ಮೀ, ತಾಲೂಕು ವಲಯ ಅರಣ್ಯಾಧಿಕಾರಿ