ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸ್
Team Udayavani, Nov 6, 2019, 3:00 AM IST
ದೇವನಹಳ್ಳಿ: ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿ ಗ್ರಾಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದೆ. ಗ್ರಾಮಗಳ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಜನರಿಗೆ ಅನುಕೂಲ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದು ಕಾರಹಳ್ಳಿ ಗ್ರಾಪಂ ಅಧ್ಯಕ್ಷ ಕಾರಹಳ್ಳಿ ಎ ದೇವರಾಜ್ ತಿಳಿಸಿದರು.
ತಾಲೂಕಿನ ಕಾರಹಳ್ಳಿ ಗ್ರಾಪಂ ಆವರಣದಲ್ಲಿ ಗ್ರಾಪಂ ವತಿಯಿಂದ 2019-20 ನೇ ಸಾಲಿನ ಗ್ರಾಮ ಪಂಚಾಯಿತಿ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳು (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಉಸ್ತವಾರಿ ಸಚಿವರು, ಜಿಲ್ಲಾ ಮಟ್ಟದಲ್ಲಿ ಜಿಪಂ ಅಧ್ಯಕ್ಷರು, ತಾಲೂಕು ಮಟ್ಟದಲ್ಲಿ ಶಾಸಕರು, ತಾಪಂ ಹಂತದಲ್ಲಿ ತಾಪಂ ಅಧ್ಯಕ್ಷರು ಪ್ರಗತಿ ಪರಿಶೀಲನಾ ಸಭೆಯನ್ನು ಮಾಡುತ್ತಾರೆ.
ಅದೇ ಮಾದರಿಯಲ್ಲಿ ಸರ್ಕಾರವು ಗ್ರಾಮಗಳಲ್ಲಿ ಯಾವ ರೀತಿ ಅಭಿವೃದ್ಧಿಯಾಗಿದೆ. ಸರ್ಕಾರದ ಯೋಜನೆಗಳು ಜಾರಿ ಯಾಗಿದೆಯೇ ಅಧಿಕಾರಿಗಳು ಯಾವ ರೀತಿ ಅನುಷ್ಠಾನ ಮಾಡುತ್ತಿದ್ದಾರೆ ಎಂಬುವುದರ ಬಗ್ಗೆ ಮಾಹಿತಿ ಪಡೆಯುವ ಉದ್ದೇಶದಿಂದ ಪ್ರಗತಿ ಪರಿಶೀಲನಾ ಸಭೆಯನ್ನು ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲಾ ಮತ್ತು ಅಂಗನವಾಡಿ ಗಳಿಗೆ ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳಿಗೆ ಒಂದು ಕ್ಯಾನ್ ಶುದ್ಧ ಕುಡಿಯುವ ನೀರು ಹಾಗೂ ಹೆಚ್ಚು ಮಕ್ಕಳು ಇರುವ ಕಡೆಗಳಲ್ಲಿ ತಲಾ 2 ಕ್ಯಾನ್ ಗಳಂತೆ ಶುದ್ಧ ಕುಡಿಯುವ ನೀರನ್ನು ಗ್ರಾಪಂ ಸಿಬ್ಬಂದಿಗಳು ಒದಗಿಸುತ್ತಾರೆ. ಇದರಲ್ಲಿ ಸರಿಯಾದ ರೀತಿ ಗ್ರಾಪಂ ಸಿಬ್ಬಂದಿ ನೀಡದಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದರು.
ಕಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಗಸ್ಟ್ ನಲ್ಲಿ ಬಿಸಿ ಊಟಕ್ಕೆ ನೀಡುವ ಅಕ್ಕಿ ಮತ್ತು ಇನ್ನಿತರೆ ಸಾಮಾಗ್ರಿಗಳನ್ನು ನೀಡದಿದ್ದರೆ ಮಕ್ಕಳಿಗೆ ಯಾವ ರೀತಿ ಊಟ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರ ಶೆ„ಕ್ಷಣಿಕ ಪ್ರಗತಿಗಾಗಿ ಬಿಸಿ ಊಟ ಯೋಜನೆಯನ್ನು ಜಾರಿಗೆ ತಂದಿದೆ. ಇರುವ ಅಕ್ಕಿ ಮತ್ತು ಇನ್ನಿತರೆ ಸಾಮಾಗ್ರಿಗಳನ್ನು ಬಳಸಿ ಬಿಸಿ ಊಟ ಯೋಜನೆ ಮುಂದುವರೆಸಿದ್ದಾರೆ.
ಈ ಸಮಸ್ಯೆಗಳ ಬಗ್ಗೆ ಶಿಕ್ಷಕರು ಕೆಡಿಪಿ ಸಭೆಯಲ್ಲಿ ಗಮನಕ್ಕೆ ತಂದಿರುವುದರಿಂದ ಈ ಸಭೆಯಲ್ಲಿ ತೀರ್ಮಾನ ಮಾಡಿ ಸಂಬಂಧಿಸಿದ ಇಲಾಖೆ ಗೆ ಸಮರ್ಪಕವಾಗಿ ಬಿಸಿ ಊಟ ಯೋಜನೆ ಅಕ್ಕಿ ನೀಡುವಂತೆ ಮನವಿ ಪತ್ರ ಬರೆಯಲಾಗುವುದು. ನೆರಗಾ ಯೋಜನೆ ಅಡಿಯಲ್ಲಿ ಶಾಲೆಗೆ ಕಾಂಪೌಂಡ್ ವ್ಯವಸ್ಥೆ ಮಾಡಲಾಗುವುದು. ಕಾರಹಳ್ಳಿ ಫ್ರೌಡಶಾಲೆಗೆ ಹೆ„ಟೆಕ್ ಶೌಚಾಯಲ ನಿರ್ಮಾಣವನ್ನು ನೆರಗಾ ಯೋಜನೆ ಅಡಿಯಲ್ಲಿ ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು.
ತಾಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ ಕಾರಹಳ್ಳಿ ಸರ್ಕಾರಿ ಫ್ರೌಡಶಾಲೆ ಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಖಾಸಗಿ ಯಾಗಿ ಪರೀಕ್ಷೆಯನ್ನು ಕಟ್ಟಲು ಬರುವವರಿಗೆ ಈ ಹಿಂದಿನ ಮುಖ್ಯ ಶಿಕ್ಷಕಿ ಪಾಸ್ ವರ್ಡ್ ನೀಡದೆ ವರ್ಗಾವಣೆ ಆಗಿರುವುದರಿಂದ ಪರೀಕ್ಷೆ ಕಟ್ಟಲು ಬರುವ ವಿಧ್ಯಾರ್ಥಿಗಳು ವಾಪಸ್ ಹೋಗುವಂತೆ ಆಗಿದೆ. ವಿಧ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ವಾಡುತ್ತಿದ್ದಾರೆ ಈ ಕೂಡಲೇ ಶಿಕ್ಷಣ ಇಲಾಖೆಯಿಂದ ಸೂಕ್ತ ಕ್ರಮ ಕೈ ಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮುಖ್ಯ ಶಿಕ್ಷಕ ವಿರೂಪಾಕ್ಷಯ್ಯ ಮಾತನಾಡಿ ಆಗಸ್ಟ್ ನಲ್ಲಿ ಬಿಸಿ ಊಟಕ್ಕೆ ನೀಡುವ ಅಕ್ಕಿ ಮತ್ತು ಇನ್ನಿತರೆ ಸಾಮಾಗ್ರಿಗಳು ಸಮರ್ಪಕವಾಗಿ ನೀಡುತ್ತಿಲ್ಲ. ಶಾಲೆಯಲ್ಲಿ 170 ಮಕ್ಕಳು ಇದ್ದಾರೆ. ದಿನಕ್ಕೆ 20 ರಿಂದ 25 ಕೆ.ಜಿ ಅಕ್ಕಿ ಬೇಕಾಗುವುದು. ಇರುವ ಅಕ್ಕಿ ಮತ್ತು ಇನ್ನಿತರೆ ಸಾಮಾಗ್ರಿಗಳನ್ನು ಬಳಸಿಕೊಂಡು ಮಕ್ಕಳಿಗೆ ತೊಂದರೆ ಆಗದಂತೆ ಬಿಸಿ ಊಟವನ್ನು ಮಧ್ಯಾಹ್ನದ ವೇಳೆಯಲ್ಲಿ ನೀಡಲಾಗುತ್ತಿದೆ. ಈ ಸಮಸ್ಯೆ ಕಾಡುತ್ತಿದೆ.
ಇನ್ನೂ ಕೆಲವು ಶಾಲೆಗಳಲ್ಲಿ ಬಿಸಿ ಊಟ ತಯಾರಿಸುವ ವ್ಯಕ್ತಿಗಳಿಗೆ ಸಂಬಳವನ್ನೂ ಸಹ ನೀಡಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಯಬ್ರಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಮಿಲನ ಮಾತನಾಡಿ ಬೋರ್ ವೆಲ್ ಕೊರೆಸುವುದಕ್ಕೆ ತಡೆ ಗೋಡೆ ಇಲ್ಲದಾಗಿದೆ. ಕೂಡಲೇ ನಿರ್ಮಾಣವಾಗಬೇಕು ಎಂದರು. ಈ ವೇಳೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಆನಂದಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವಿತಾ, ಕಾರ್ಯದರ್ಶಿ ರಾಜೇಶ್, ಮತ್ತಿತರರು ಇದ್ದರು.