ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವನ ಬಂಧನ
Team Udayavani, Feb 1, 2017, 11:47 AM IST
ನೆಲಮಂಗಲ: ಪರಿಶಿಷ್ಟ ಸಮುದಾಯಕ್ಕೆ ಸೇರಿದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಸೋಂಪುರ ಹೋಬಳಿಯ ನರಸೀಪುರ ಗ್ರಾಮದಲ್ಲಿ ಮಂಗಳವಾರ ನಡೆದಿರುವ ಬಗ್ಗೆ ದಾಬಸಪೇಟೆ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ನರಸೀಪುರ ಬಳಿಯ ಪಾರ್ವತಿಪುರ ಗ್ರಾಮದ ಬಾಲಕಿ ಗ್ರಾಮದ ಸಮೀಪವಿರುವ ಖಾಸಗಿ ಪ್ರೌಡಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಎಂದಿನಂತೆ ಶಾಲೆಗೆ ನಡೆದು ಹೋಗುತ್ತಿದ್ದಾಗ ನೀಲಗಿರಿ ತೋಪೊಂದರ ಬಳಿ ಕೆರೆಪಾಳ್ಯ ಗ್ರಾಮದ ವಿಕಲಚೇತನ ಯುವಕ ಜಯರಾಮ (32) ಎಂಬಾತ ಅಡ್ಡಗಟ್ಟಿದ್ದಾನೆ. ಆಕೆಯನ್ನು ಎಳೆದಾಡಿ, ಮಾನಭಂಗಕ್ಕೆ ಪ್ರಯತ್ನಿಸಿದ್ದಾನೆ.
ಗಾಬರಿಗೊಂಡ ಬಾಲಕಿ ಧೈರ್ಯ ಮಾಡಿ ಅತನಿಂದ ಬಿಡಿಸಿಕೊಂಡು ಶಾಲೆ ಬಳಿಗೆ ಬಂದು ಶಿಕ್ಷಕಿಗೆ ವಿಷಯ ತಿಳಿಸಿದ್ದಾಳೆ. ಶಿಕ್ಷಕಿ ಕೂಡಲೇ ಘಟನಾ ಸ್ಥಳಕ್ಕೆ ಶಾಲೆಯ ಸಿಬ್ಬಂದಿಯನ್ನು ಕಳುಹಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಆತ ಪರಾರಿಯಾಗಿದ್ದ. ಘಟನೆಯ ಸಂದರ್ಭದಲ್ಲಿ ಆತ ತೊಟ್ಟಿದ್ದ ಬಟ್ಟೆ ಮತ್ತು ಮುಖ ಚಹರೆ ಬಗ್ಗೆ ಮಾಹಿತಿ ಪಡೆದು ಬಾಲಕಿಯ ಮನೆಗೆ ತೆರಳಿ ವಿಷಯ ಮುಟ್ಟಿಸಿದ್ದಾರೆ.
ಘಟನೆಯ ವಿವರ ಪಡೆದ ಬಾಲಕಿಯ ಅಜ್ಜಿ, ಮನೆಯ ಬಳಿ ಬರುತ್ತಿದ್ದ ಹುಡುಗನೇ ಈ ಕೃತ್ಯ ಎಸಗಿರಬಹುದು ಎಂದು ಅನುಮಾನ ಪಟ್ಟು ಆತನ ಮಾಹಿತಿ ಮತ್ತು ವಿಳಾಸವನ್ನು ತಿಳಿಸಿದ್ದಾಳೆ. ಘಟನೆಗೆ ಈತನೇ ಕಾರಣ ಎಂಬುದನ್ನು ಖಚಿತಪಡಿಸಿಕೊಂಡು ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಜಯರಾಮನನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.