ಬೆಳಗಾವಿ: ಕೊಳವೆ ಬಾವಿಗೆ ಬಿದ್ದಿದ್ದ ಮಗು ಸಾವು
Team Udayavani, Sep 18, 2021, 9:24 PM IST
ಬೆಳಗಾವಿ: ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಾಪತ್ತೆ ಆಗಿದ್ದ ಎರಡು ವರ್ಷದ ಮಗು ಪಾಳು ಬಿದ್ದ ಕೊಳವೆ ಬಾವಿಯಲ್ಲಿ ಶನಿವಾರ ರಾತ್ರಿ ಮೃತದೇಹವಾಗಿ ಪತ್ತೆ ಆಗಿದೆ.
ಅಲಖನೂರ ಗ್ರಾಮದ ಶರತ್ ಹಸರೆ ಎಂಬ ಎರಡು ವರ್ಷದ ಮಗು ಆಟವಾಡುತ್ತ ನಾಪತ್ತೆ ಆಗಿರುವ ಬಗ್ಗೆ ಶುಕ್ರವಾರ ಮಗುವಿನ ತಂದೆ ಸಿದ್ದಪ್ಪ ಹಸರೆ ಹಾರೂಗೇರಿ ಠಾಣೆಯಲ್ಲಿ ದೂರು ನೀಡಿದ್ದನು. ಇಡೀ ದಿನ ಮನೆ ಸುತ್ತಲೂ ಇರುವ ಬಾವಿ, ಕೃಷಿ ಹೊಂಡದಲ್ಲಿ ಹುಡುಕಾಡಿದರೂ ಮಗು ಪತ್ತೆ ಅಗಿರಲಿಲ್ಲ. ನಂತರ ಪೊಲೀಸರಿಗೆ ಸಂಶಯ ಬಂದು ಕೊಳವೆ ಬಾವಿಯಲ್ಲಿ ನೋಡಿದಾಗ ಮಗು ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು.
ಮಗುವಿನ ಸಾವಿನ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ಸಿಕ್ಕ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಕಾರ್ಯಾಚರಣೆ ನಡೆಸಿ ಮಗುವಿನ ಮೃತದೇಹ ಹೊರ ತೆಗೆಯಲಾಗಿದೆ. ಮಗುವಿನ ಮೃತದೇಹವನ್ನು ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ಮರೋಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಎಸ್ಪಿ ಲಕ್ಷ್ಮ್ಮಣ ನಿಂಬರಗಿ ತಿಳಿಸಿದ್ದಾರೆ.
ತೋಟದ ಮನೆಯಲ್ಲಿ ವಾಸಿಸುತ್ತಿದ್ದ ಸಮೀಪದಲ್ಲಿಯೇ ಕೊಳವೆ ಬಾವಿದೆ ಇದೆ. ಸಿದ್ದಪ್ಪ ಹಸಿರೆ ಅವರ ಚಿಕ್ಕಪ್ಪನಿಗೆ ಸೇರಿದ ಈ ಕೊಳವೆ ಬಾವಿ ಕೆಲ ವರ್ಷಗಳ ಹಿಂದೆ ಕೊರೆಯಲಾಗಿತ್ತು. ಪಾಳು ಬಿದ್ದಿದ್ದರಿಂದ ಇದನ್ನು ಮುಚ್ಚಳದಿಂದ ಮುಚ್ಚಲಾಗಿತ್ತು.