ಕಾಲುವೆಗೆ ನೀರು ಹರಿಸಲು ಆಗ್ರಹ
ಕರಿಮಸೂತಿ ಏತ ನೀರಾವರಿ ಯೋಜನೆ ಕಾಲುವೆ ಬಳಿ ರೈತರ ಪ್ರತಿಭಟನೆ
Team Udayavani, Jul 8, 2022, 4:03 PM IST
ಐಗಳಿ: ಐಗಳಿ, ಯಲ್ಲಮ್ಮವಾಡಿ, ಕೊಕಟನೂರ, ಬಾಡಗಿ, ಅರಟಾಳ, ಖೋತನಟ್ಟಿ, ದೇಸಾಯರಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ತಮ್ಮ ಜಮೀನುಗಳಿಗೆ ಕರಿಮಸೂತಿ ಏತ ನಿರಾವರಿ ಕಾಲುವೆಯ ನೀರು ಹರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಬಾಡಗಿ, ಯಲ್ಲಮ್ಮವಾಡಿ ಕಾಲುವೆ ಮೇಲೆ ನೂರಾರು ರೈತರು ಸಭೆ ನಡೆಸಿ, ನೀರು ಸಿಗುವವರೆಗೂ ಹೋರಾಟ ಮಾಡುವ ನಿರ್ಣಯ ಕೈಗೊಂಡರು. ಈ ವೇಳೆ ರೈತ ಮುಖಂಡ ಮನೋಹರ ಜಂಬಗಿ ಮಾತನಾಡಿ, ಅಥಣಿ ತಾಲೂಕಿನ ಹಿಪ್ಪರಗಿ ಆಣೆಕಟ್ಟಿನ ಯೋಜನೆಯ ಕರಿ ಮಸೂತಿ ಕಾಲುವೆಯಿಂದ ನೀರು ಹರಿ ಬಿಟ್ಟು ಒಂದು ತಿಂಗಳು ಗತಿಸುತ್ತಾ ಬಂದರೂ ಒಂದು ಹನಿ ನೀರು ಸಹ ನಮಗೆ ಬಂದಿಲ್ಲ. ಕಾಲುವೆಯ ನೀರನ್ನೇ ನಂಬಿ ಅರಿಷಿಣ, ಕಬ್ಬು, ಮಕ್ಕೆಜೋಳ ನಾಟಿ ಮಾಡಿದ್ದು, ಮಳೆ, ಕಾಲುವೆಯ ನೀರಿಲ್ಲದೇ ಬೆಳೆ ಒಣಗುತ್ತಿವೆ. ಹಾಕಿದ ಗೊಬ್ಬರ, ಬೀಜದ ನಷ್ಟವನ್ನು ಭರಿಸುವವರು ಯಾರು ಎಂಬ ದುಗುಡ ಮನೆ ಮಾಡಿದೆ. ಸಮರ್ಪಕವಾಗಿ ಕಾಲುವೆ ನಿರ್ವಹಣೆ ಮಾಡದೇ ಕಳೆದ ಮತ್ತು ಪ್ರಸಕ್ತ ಸಾಲಿನಲ್ಲಿಯೂ ನೀರಾವರಿ ಇಲಾಖೆ ಅಧಿಕಾರಿಗಳು ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಲಿಖೀತ ಹಾಗೂ ಮೌಖೀಕವಾಗಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬರುವ ಜು. 9 ರೊಳಗೆ ಕಾಲುವೆ ನೀರು ಕೊನೆಯ ಗ್ರಾಮದ ಜಮೀನುಗಳಿಗೆ ಬರದಿದ್ದರೆ ಐಗಳಿ ಕ್ರಾಸ್ನಲ್ಲಿ ವಿಜಯಪುರ-ಸಂಕೇಶ್ವರ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಸದಾಶಿವ ಏಳೂರ, ಮಹಾಂತೇಶ ಹಲವಾಯಿ, ಸಿದರಾಯ್ ಹುದ್ದಾರ, ರಘುನಾಥ ತಳವಾರ, ಈರಪ್ಪ ನೇಮಗೌಡ, ಮಲ್ಲಿಕಾರ್ಜುನ ಮಮದಾಪುರ, ಶಂಕರ ತೆಲಸಂಗ, ಬಸವರಾಜ ಹುದ್ದಾರ, ಶಿವಾನಂದ ನೇಮಗೌಡ, ಪಿಂಟು ನೇಮಗೌಡ, ಈರಪ್ಪ ಮಮದಾಪುರ, ಅಡಿವೆಪ್ಪಾ ಮಾಳಿ, ಬಸವರಾಜ ಮಮದಾಪುರ ಸೇರಿದಂತೆ ಹಲವಾರು ಗ್ರಾಮಗಳ ರೈತರು ಇದ್ದರು.