ಚಿಕ್ಕೋಡಿ: ಭಕ್ತರ ಭಾಗ್ಯನಿಧಿ ಯಡೂರು ಶ್ರೀ ವೀರಭದ್ರೇಶ್ವರ
Team Udayavani, Feb 9, 2024, 5:59 PM IST
ಉದಯವಾಣಿ ಸಮಾಚಾರ
ಚಿಕ್ಕೋಡಿ: ತಾಲೂಕಿನ ಶ್ರೀ ಕ್ಷೇತ್ರ ಯಡೂರು ಶ್ರೀ ವೀರಭದ್ರೇಶ್ವರ ದೇವರು, ಶ್ರೀ ಕಾಡಸಿದ್ಧೇಶ್ವರರು ನೆಲೆಸಿರುವ ಪವಿತ್ರ ತಾಣವಾಗಿದೆ. ಶಿವನ ಅರ್ಧಾಂಗಿಯಾದ ಸತಿಯ ತಂದೆ ದಕ್ಷಬ್ರಹ್ಮ ಶಿವನ ವಿರೋಧಕ್ಕಾಗಿ ಕೈಗೊಂಡ ಯಜ್ಞ ಈ ಕ್ಷೇತ್ರದಲ್ಲೇ ನೆರವೇರಿದೆ ಎಂಬುದಾಗಿ ಮತ್ತು ಶಿವನಿಂದೆ ಕೇಳಲಾಗದೆ ಸತಿ ಇಲ್ಲಿಯ ಯಜ್ಞಕುಂಡದಲ್ಲಿ ಆಹುತಿಯಾದಾಗ ಶಿವನ ಜಡೆಯಿಂದ ಅವತರಿಸಿದ ವೀರಭದ್ರನು ದಕ್ಷಬ್ರಹ್ಮನನ್ನು ಸಂಹರಿಸಿ ಶಿವನ ಅಪ್ಪಣೆ ಮೇರೆಗೆ ಶಿವಭಕ್ತರನ್ನು ಅನುಗ್ರಹಿಸಲು ಹಾಗೂ ವಿರೋಧಿ
ಶಕ್ತಿಗಳನ್ನು ನಿಗ್ರಹಿಸಲು ಇಲ್ಲಿಯೇ ಲಿಂಗರೂಪದಿಂದ ನಿತ್ಯ ನಿವಾಸ ಮಾಡಿರುವನೆಂಬುದಾಗಿ ಪೌರಾಣಿಕ ಪ್ರತೀತಿ.
ಇದಕ್ಕೆ ಪುರಾವೆಗಳೆಂಬಂತೆ ಇಲ್ಲಿರುವ ದೇವಾಲಯ ಯಜ್ಞಕುಂಡದ ಆಕೃತಿಯಲ್ಲಿದೆ ಇಲ್ಲಿ ಶ್ರೀ ವೀರಭದ್ರ ಲಿಂಗರೂಪದಿಂದ
ನೆಲೆಸಿದ ಕಾರಣಕ್ಕೆ ಈ ದೇವಸ್ಥಾನಕ್ಕೆ ಶ್ರೀ ವೀರಭದ್ರ ದೇವಾಲಯ ಜತೆಗೆ ವಿರೂಪಾಕ್ಷಲಿಂಗ ದೇವಸ್ಥಾನವೆಂದೂ
ಕರೆಯುವುದುಂಟು. ಶ್ರೀ ವೀರಭದ್ರ ಲಿಂಗ ಕಾಲಾಂತರದಲ್ಲಿ ಭೂಗರ್ಭದಲ್ಲಿ ಮುಚ್ಚಿ ಹೋಗಿತ್ತು. ಕೃಷ್ಣಾ ನದಿ ತಟದಲ್ಲಿ
ಅನುಷ್ಠಾನಕ್ಕೆಂದು ಆಗಮಿಸಿದ ಶ್ರೀ ಕಾಡಸಿದ್ಧೇಶ್ವರರು ಲಿಂಗದ ಮೇಲಿರುವ ಬೂದಿ-ಮಣ್ಣು ಸರಿಸಿ ಮುಚ್ಚಿ ಹೋದ ಲಿಂಗವನ್ನು ಪ್ರಪ್ರಥಮ ಬಾರಿಗೆ ಪ್ರಕಟಗೊಳಿಸುತ್ತಾರೆ.
ರಾಜ-ಮಹಾರಾಜರ ನೆರವು ಪಡೆದು ಭವ್ಯ ದೇವಸ್ಥಾನ ನಿರ್ಮಿಸುತ್ತಾರೆ. ಜತೆಗೆ ಇಲ್ಲಿಯೇ ಶ್ರೀ ಕಾಡದೇವರ ಮಠ ಸ್ಥಾಪಿಸುತ್ತಾರೆ. ಈ ಮಠದ ಮೂಲಪುರುಷ ಶ್ರೀ ಕಾಡಸಿದ್ಧೇಶ್ವರರು ಮತ್ತು ನಂತರ ಬಂದ ಶ್ರೀಗಳು ಕಾಲಕಾಲಕ್ಕೆ ಶ್ರೀ ವೀರಭದ್ರ ದೇವಸ್ಥಾನದ ಜೀರ್ಣೋದ್ಧಾರ ಮಾಡುತ್ತ ಧರ್ಮಾಧಿಕಾರಿಗಳಾಗಿ ಆಡಳಿತ ನಡೆಸುತ್ತ ಬಂದಿದ್ದಾರೆ. ಪ್ರಸ್ತುತ ಶ್ರೀಶೈಲ ಜಗದ್ಗುರು ಡಾ|ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಪೂರ್ವಾಶ್ರಮದಲ್ಲಿ ಯಡೂರಿನ ಶ್ರೀ ವೀರಭದ್ರ ದೇವಸ್ಥಾನ-
ಕಾಡಸಿದ್ದೇಶ್ವರಮಠದ ಧರ್ಮಾಧಿಕಾರ ವಹಿಸಿ ಅಭಿವೃದ್ಧಿ ಮಾಡುತ್ತ ಬಂದಿದ್ದಾರೆ.
ಮಲ್ಲಪ್ಪ ಸಿಂಧೂರ,
ಶಿಕ್ಷಕರು, ಯಡೂರ
ಜುಗುಳು ಗ್ರಾಮದ ದಿ.ಆರ್.ಕೆ. ಪಾಟೀಲರು ಯಡೂರಮಠದ ಸ್ವಾಮೀಜಿಗಳ ನಿಕಟವರ್ತಿಗಳಾಗಿದ್ದರು. ಅಲ್ಲಿಂದ ಇಲ್ಲಿಯವರಿಗೆ
ನಮ್ಮ ಕುಟುಂಬ ವೀರಭದ್ರೇಶ್ವರ ಮತ್ತು ಕಾಡಸಿದ್ದೇಶ್ವರಮಠಕ್ಕೆ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಿದ್ದೇವೆ. ಯಡೂರ ಜಾಗೃತ
ಕ್ಷೇತ್ರವಾಗಲು ಶ್ರೀಶೈಲ ಜಗದ್ಗುರುಗಳ ಕೊಡುಗೆ ಅಪಾರವಾಗಿದೆ.
ಉಮೇಶ ಪಾಟೀಲ, ಗ್ರಾಪಂ ಸದಸ್ಯರು, ಜುಗೂಳ.
ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯುವ ಯಡೂರ ವಿಶಾಳಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಯಡೂರ ಶ್ರದ್ಧಾಕೇಂದ್ರವಾಗಿ ಹೊರಹೊಮ್ಮಿದೆ.
ಕಾಕಾಸಾಹೇಬ ಪಾಟೀಲ,
ಅಧ್ಯಕ್ಷರು, ಗ್ರಾಪಂ ಜುಗೂಳ