Sankeshwara: ಅದ್ದೂರಿಯಾಗಿ ಜರಗಿದ ರಥೋತ್ಸವ : ಮಹಾಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿ
Team Udayavani, Feb 20, 2024, 1:02 PM IST
ಸಂಕೇಶ್ವರ : ಪಟ್ಟಣದ ಆರಾಧ್ಯ ದೈವ ಹಾಗೂ ಎರಡನೇ ದಕ್ಷಿಣ ಕಾಶಿ ಎಂದು ಕರೆಯಲಾಗುವ ಸಂಕೇಶ್ವರದ ಶ್ರೀ ಶಂಕರಾಚಾರ್ಯ ಸಂಸ್ಥಾನ ಮಠದ ಮಹಾಯಾತ್ರೆ ಅಂಗವಾಗಿ ಸೋಮವಾರ ಸಂಜೆ ನಡೆದ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಶ್ರೀಮಠದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಇದೇ ಫೆಬ್ರವರಿ.15ರಂದು 10 ಗಂಟೆಗೆ ಉದಕ ಶಾಂತಿ, ರಾತ್ರಿ 9ಕ್ಕೆ ಅನ್ನಪೂರ್ಣೇಶ್ವರಿ ಕೋಠಿ ಪೂಜೆಯೊಂದಿಗೆ ಜಾತ್ರೆಯು ಪ್ರಾರಂಭಗೊಂಡಿತ್ತು.
16 ರಂದು ಮುಂಜಾನೆ 9 ಗಂಟೆಗೆ ಶ್ರೀ ರಥದ ಪೂಜೆ, ನವಗ್ರಹ ಹೋಮ, ಬಲಿದಾನ, ಮೈರಾಳ ಬ್ರಹ್ಮಪೂಜೆ ಮಹಾನೈವೇದ್ಯ ನಡೆದಿತ್ತು. 17ರಂದು ಮಧ್ಯಾಹ್ನ 2 ಗಂಟೆಗೆ ಶ್ರೀ ರಥ ಯಾತ್ರೆ ಶ್ರೀ ನಾರಾಯಣೆಶ್ವರ ಮಂದಿರಕ್ಕೆ ಕೊಂಡೊಯ್ಯಲಾಗಿತ್ತು. ದಿ.18ರಂದು ಶ್ರೀ ರಥವು ಶ್ರೀ ಬನಶಂಕರಿ ಗುಡಿಯ ಹತ್ತಿರ ಮಾಡಲಾಯಿತು.
ಮಾಹಾಯಾತ್ರೆ ನಿಮಿತ್ಯ ಸೋಮವಾರ 19 ರಂದು ಮುಂಜಾನೆ ಆದ್ಯ ಶ್ರೀ ಶಂಕರಾಚಾರ್ಯ ವಿದ್ಯಾಶಂಕರಭಾರತಿ (ದೇವಗೋಸಾವಿ) ಶ್ರೀಗಳ ಸಮಾಧಿ ಪೂಜೆ ಬಳಿಕ ಆರಾಧನಾಂಗವಾಗಿ ಸಂಜೆ ಅದ್ದೂರಿಯಾಗಿ ರಥೋತ್ಸವ ನೇರವೇರುವ ಮೂಲಕ ಶ್ರೀ ಶಂಕರಾಚಾರ್ಯ ಮಠಕ್ಕೆ ರಥದ ಆಗಮನವಾಯಿತು.
ಮಹಾಯಾತ್ರೆಯ ಹಿನ್ನೆಲೆಯಲ್ಲಿ ಗಡಿಭಾಗಕ್ಕೆ ಹೊಂದಿಕೊಂಡಿರುವ ಸಂಕೇಶ್ವರದ ಪಟ್ಟದ ಈ ಯಾತ್ರೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಮತ್ತು ಗೋವಾ ರಾಜ್ಯಗಳ ಲಕ್ಷಾಂತರ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಪುಣ್ಯತರಾದರು.
ಅದೇ ರೀತಿಯಾಗಿ ಫೆ. 20 ರಿಂದ 24ರ ವರೆಗೆ ರುದ್ರಾಭಿಷೇಕ, ರುದ್ರ ಪಂಚಾಯತನ ಹೋಮ, ಶ್ರೀಸೂಕ್ತ ಹೋಮವನ್ನು ಆಯೋಜಿಸಲಾಗಿದೆ ಎಂದು ಶ್ರೀಮಠದ ಪ್ರಕಟನೆ ತಿಳಿಸಿದೆ.