40 ಪರ್ಸೆಂಟ್ ಸರಕಾರದ ಸ್ಥಾನವನ್ನು 40ಕ್ಕಿಳಿಸಿ: Rahul Gandhi
ರಾಮದುರ್ಗದಲ್ಲಿ ರೈತರೊಂದಿಗೆ ಸಂವಾದ; ಕಬ್ಬು ಬೆಳೆಗೆ ಸೂಕ್ತ ದರ
Team Udayavani, Apr 25, 2023, 6:55 AM IST
ಬೆಳಗಾವಿ/ರಾಮದುರ್ಗ: ಭ್ರಷ್ಟಾಚಾರದಲ್ಲಿ ಮುಳುಗಿರುವ 40 ಪರ್ಸೆಂಟ್ ಸರಕಾರವನ್ನು ಈ ಚುನಾವಣೆಯಲ್ಲಿ ಕೇವಲ 40 ಸ್ಥಾನಗಳಿಗೆ ಸೀಮಿತಗೊಳಿಸುವ ಮೂಲಕ ಬಿಜೆಪಿಗೆ ಬಿಸಿ ಮುಟ್ಟಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದರು.
ರಾಮದುರ್ಗದ ರಾಠಿ ರೆಸಾರ್ಟ್ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಐದು ವರ್ಷಗಳಿಂದ 40 ಪರ್ಸೆಂಟ್ ಕಮಿಷನ್ ದಂಧೆಯಲ್ಲಿ ಮುಳುಗಿದೆ. ಹೀಗಾಗಿ ಕಾಂಗ್ರೆಸ್ಗೆ 150 ಸ್ಥಾನಗಳನ್ನು ಗೆಲ್ಲಿಸಿ ಕೊಟ್ಟು ಪೂರ್ಣ ಬಹುಮತದ ಸರಕಾರ ರಚಿಸಲು ಎಲ್ಲರೂ ಸಹಕರಿಸಬೇಕು ಎಂದರು.
ನರೇಂದ್ರ ಮೋದಿ ಸರಕಾರ ಇಬ್ಬರು ಕೋಟ್ಯ ಧೀಶರಿಗಷ್ಟೇ ರತ್ನಗಂಬಳಿ ಹಾಸಿ ದೇಶದ ಸಂಪತ್ತಿನ ಲಾಭ ಮಾಡಿಕೊಡುತ್ತಿದೆ. ಇದರಿಂದ ಸಣ್ಣಪುಟ್ಟ ವ್ಯಾಪಾರಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಬಹುತೇಕ ಸಂಪತ್ತು ಕೆಲವೇ ಕೆಲವು ಜನರ ಕೈ ಸೇರುತ್ತಿದೆ ಎಂದರು.
ಕೋಟ್ಯಧೀಶರ ಸಾಲ ಮನ್ನಾ
ಸರಕಾರ ಬಂಡವಾಳಶಾಹಿಗಳ ಸಾಲವನ್ನು ಮನ್ನಾ ಮಾಡುತ್ತದೆಯೇ ಹೊರತು ರೈತರ ಸಾಲವನ್ನಲ್ಲ. ಬಂಡವಾಳಶಾಹಿಗಳಿಗೆ ವ್ಯವಸ್ಥಿತವಾಗಿ ಸಾಲ ನೀಡಿ ಬಳಿಕ ಮನ್ನಾ ಮಾಡಲಾಗುತ್ತಿದೆ. 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಆದರೆ ರೈತರ ಸಾಲ ಮನ್ನಾ ಮಾಡದೆ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ, ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಕಾರ್ಯದರ್ಶಿ ವಿಶ್ವನಾಥ ಚೌವ್ಹಾಣ್ ಮತ್ತಿತರರು ಉಪಸ್ಥಿತರಿದ್ದರು.
ನಮ್ಮ ಸರಕಾರ ಬಂದರೆ ಜಿಎಸ್ಟಿ ವ್ಯವಸ್ಥೆ ಬದಲು
ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿ ಕಾರಕ್ಕೆ ಬಂದರೆ ಜಿಎಸ್ಟಿಯನ್ನು ಸಂಪೂರ್ಣವಾಗಿ ಬದಲಿಸಿ ಏಕರೂಪದ ತೆರಿಗೆ ಹಾಗೂ ಅತಿ ಕಡಿಮೆ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಈಗಿರುವ ಐದು ರೀತಿಯ ತೆರಿಗೆಯಿಂದ ಜನರಿಗೆ ಅನ್ಯಾಯವಾಗುತ್ತಿದೆ. ಜಿಎಸ್ಟಿ ಎನ್ನುವುದು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುತ್ತಿದೆ ಎಂದು ರಾಹುಲ್ ಹೇಳಿದರು.