ಜನಾರ್ದನ ರೆಡ್ಡಿ ಮಾವನ ಮನೆಯಲ್ಲಿ ಕಳ್ಳತನ
Team Udayavani, Feb 15, 2018, 6:40 AM IST
ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಾವ ಪರಮೇಶ್ವರ ರೆಡ್ಡಿ ಅವರ ಇನ್ಫ್ಯಾಂಟ್ರಿ ರಸ್ತೆಯ ಇನ್ನಾರೆಡ್ಡಿ ಕಾಲೋನಿಯ ಮನೆಯಲ್ಲಿ ಮಂಗಳವಾರ ರಾತ್ರಿ ಕಳ್ಳತನವಾಗಿದೆ.
ಕಳ್ಳರು ಒಂದು ಲಕ್ಷ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ. ಪರಮೇಶ್ವರ ರೆಡ್ಡಿ ಅವರು ಕುಟುಂಬ ಸಮೇತ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ನಂದ್ಯಾಲ ಪಟ್ಟಣಕ್ಕೆ ತೆರಳಿದ್ದ ವೇಳೆ ಈ ಘಟನೆ ಜರುಗಿದೆ.
ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು, ಮನೆಯ ಬೀಗ ಮುರಿದು ಬೆಡ್ ರೂಮಿನಲ್ಲಿ ಹಣ ಹಾಗೂ ಇತರ ವಸ್ತುಗಳಿಗೆ ಹುಡುಕಾಡಿದ್ದಾರೆ. ಸಿಗದಿದ್ದಾಗ ತಮಗೆ ದೊರೆತ ಬೆಳ್ಳಿ ತಟ್ಟೆ, ಲೋಟ, ಗಣೇಶ ವಿಗ್ರಹಗಳನ್ನು ಕದ್ದು ಪರಾರಿಯಾಗಿದ್ದಾರೆ. ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಕೌಲ್ಬಜಾರ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ