ಡಿಕೆಶಿ ಬಳಿ ಕ್ಷಮೆಯಾಚನೆಗೆ ಕಾರಣ ನೀಡಿದ ಶ್ರೀರಾಮುಲು
Team Udayavani, Sep 4, 2019, 10:59 AM IST
ಬಳ್ಳಾರಿ: ನಮ್ಮ ಹೇಳಿಕೆಗಳು ವೈಯಕ್ತಿಕ ಬದುಕಿನಲ್ಲಿ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಇಡಿ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಲ್ಲಿ ಕ್ಷಮೆಯಾಚಿಸಿದ್ದೇನೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇಡಿ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ನಾನು ಕ್ಷಮೆ ಕೇಳಿದ್ದೇನೆ. ಅದಕ್ಕೆ ಕಾರಣವೂ ಇದೆ. ನಮ್ಮ ಹೇಳಿಕೆಗಳು ಅವರ ವೈಯಕ್ತಿಕ ಬದುಕಿನಲ್ಲಿ ಪರಿಣಾಮ ಬೀರಬಾರದು. ಎಲ್ಲರಿಗೂ ಕುಟುಂಬದ ಜತೆಗೆ ವೈಯಕ್ತಿಕ ಬದುಕೂ ಇರುತ್ತದೆ. ಹಾಗಾಗಿ ನನ್ನ ಹೇಳಿಕೆಗಳು ರಾಜಕೀಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಪ್ರಕರಣಕ್ಕೆ ಜನಾರ್ದನ ರೆಡ್ಡಿ ಪ್ರಕರಣ ಲಿಂಕ್ ಮಾಡಲ್ಲ. ನನ್ನ ಹೇಳಿಕೆ ರಾಜಕೀಯಕ್ಕೆ ಮಾತ್ರ ಸೀಮಿತವಾಗಿದೆ. ಡಿಕೆಶಿ ಬಂಧನ ವಿಚಾರದಲ್ಲಿ ಕಾನೂನು ತನ್ನ ಕೆಲಸ ಮಾಡುತ್ತಿದೆ. ಹೆಚ್ಚೇನೂ ಈ ಬಗ್ಗೆ ಮಾತನಾಡಲ್ಲ ಎಂದು ಜಾರಿಕೊಂಡರು.
ಇದೇ ವೇಳೆ ಸಚಿವ ಸ್ಥಾನ ಹಂಚಿಕೆ ಸಂಬಂಧಿಸಿ ಮಾತನಾಡಿದ ಸಚಿವ ರಾಮುಲು, ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ. ಖಾತೆ ವಿಚಾರದಲ್ಲಿ ಯಾವುದೇ ಅಸಮಾಧಾನ ಇಲ್ಲ. ಈ ಹಿಂದೆ ನನಗೆ ಆರೋಗ್ಯ ಖಾತೆ ನಿಭಾಯಿಸಿದ ಅನುಭವ ಇದೆ. ಜನರ ಆರೋಗ್ಯದ ವಿಚಾರದಲ್ಲಿ ಕಾಳಜಿವಹಿಸುವ ಕೆಲಸ ಮಾಡುವೆ. ಸರ್ಕಾರದಿಂದ ಆಸ್ಪತ್ರೆಗಳಲ್ಲಿ ಕ್ಯಾಂಟೀನ್ ಮಾಡಲು ಚಿಂತನೆ ನಡೆಸಲಾಗುತ್ತದೆ. ಮಡಿಲು ಕಿಟ್ ನಿಂತು ಹೋಗಿದೆ. ಇದನ್ನು ಪುನರ್ ನೀಡಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡುವೆ ಎಂದು ಭರವಸೆ ನೀಡಿದರು.