ಬೀದರದಲ್ಲಿ ಸಹಕಾರ ಸಾಧನೆ ಅಭೂತಪೂರ್ವ
ಜಿಲ್ಲೆಯಲ್ಲಿವೆ ಒಟ್ಟು 1,255 ಸಹಕಾರಿ ಸಂಸ್ಥೆಗಳುಕಾರ್ಯ ನಿರ್ವಹಿಸುತ್ತಿವೆ 957 ಸಹಕಾರಿ ಸಂಸ್ಥೆಗಳು
Team Udayavani, Nov 14, 2019, 11:34 AM IST
ಶಶಿಕಾಂತ ಬಂಬುಳಗೆ
ಬೀದರ: ಗಡಿ ಜಿಲ್ಲೆ ಬೀದರ ಚಿಕ್ಕದಾಗಿದ್ದರೂ ಸಹಕಾರ ಕ್ಷೇತ್ರದಲ್ಲಿನ ಅಭೂತಪೂರ್ವ ಸಾಧನೆಯಿಂದ ರಾಜ್ಯಕ್ಕೆ ಮಾದರಿಯಾಗಿದ್ದು, ವಿಶಿಷ್ಟ ಛಾಪು ಮೂಡಿಸಿದೆ. ಸ್ವ-ಸಹಾಯ ಗುಂಪುಗಳ ಮೌನ ಕ್ರಾಂತಿ ಇಂದು ಬಡ ಮಹಿಳೆಯರ ಆರ್ಥಿಕ ಶಕ್ತಿ ತುಂಬಿಸುವಲ್ಲಿ ಸಹಕಾರಿಯಾಗಿದ್ದು, ಇದರಲ್ಲಿ ಜಿಲ್ಲಾ ಸಹಕಾರ (ಡಿಸಿಸಿ) ಬ್ಯಾಂಕ್ನ ಕೊಡುಗೆ ಮಹತ್ವದ್ದಾಗಿದೆ.
ಹೊಸ ಆರ್ಥಿಕ ನೀತಿ ಮತ್ತು ಜಾಗತೀಕರಣ ಕರಿ ನೆರಳಿನಲ್ಲಿ ಸಹಕಾರ ಕ್ಷೇತ್ರದಿಂದ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನು ಬೀದರ ಜಿಲ್ಲೆ ಸಾಬೀತು ಮಾಡಿದೆ. ಸಹಕಾರ ಚಳವಳಿಯಿಂದ ಬಡ ಕುಟುಂಬಗಳ ಆರ್ಥಿಕ ಸದೃಢತೆ ಜತೆಗೆ, ಸಾಮಾಜಿಕ, ಶೈಕ್ಷಣಿಕ ಪರಿವರ್ತನೆಗೆ ನಾಂದಿ ಹಾಡಿದೆ. ಈ ಬೆಳವಣಿಗೆಯಿಂದ ದೇಶ ಮಾತ್ರವಲ್ಲ ವಿದೇಶಗಳೂ ಸಹ ಜಿಲ್ಲೆಯತ್ತ ತಿರುಗಿ ನೋಡುವಂತಾಗಿದೆ.
ಬೀದರ ಜಿಲ್ಲೆಯಲ್ಲಿ ಒಟ್ಟು 1,255 ಸಹಕಾರಿ ಸಂಸ್ಥೆಗಳಿದ್ದು, ಸುಮಾರು 50 ವಿವಿಧ ಬಗೆಯ ಸಂಘಗಳು ಒಳಗೊಂಡಿವೆ. ಈ ಪೈಕಿ 169 ಸಮಾಪನೆಗೊಂಡಿದ್ದರೆ 129 ಸಂಸ್ಥೆಗಳು ಸ್ಥಗಿತಗೊಂಡಿವೆ. ಸದ್ಯ 957 ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಜಿಲ್ಲಾ ಸಹಕಾರ (ಡಿಸಿಸಿ) ಬ್ಯಾಂಕ್ ಹಾಗೂ 180 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿವೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಖಾಸಗೀಕರಣ ಪ್ರಭಾವದಿಂದ ಕೆಲ ಸಂಘಗಳು ಕಾರ್ಯಾಚರಣೆ ಸ್ಥಗಿತಗೊಳಿದ್ದರೆ, ಇನ್ನೂ ಕೆಲವು ಕುಂಟುತ್ತ ಸಾಗಿವೆ. ಇದರಿಂದ “ಸಹಕಾರ’ಕ್ಕೆ ಕೊಂಚ ಹಿನ್ನಡೆಯಾಗಿದೆ ಎನ್ನಬಹುದು.
ಸಾಲದ ಸುಳಿಯಲ್ಲಿ ಕಾರ್ಖಾನೆಗಳು: ಮುಖ್ಯವಾಗಿ ಜಿಲ್ಲೆಯ ರೈತರ ಜೀವನಾಡಿಯಾಗಬೇಕಿದ್ದ ಸಹಕಾರ ಸಕ್ಕರೆ ಕಾರ್ಖಾನೆಗಳು ಸಾಲದ ಸುಳಿಗೆ ಸಿಲುಕಿ ನಲುಗುತ್ತಿವೆ. ಬಿಎಸ್ಎಸ್ಕೆ, ಎಂಜಿಎಸ್ಎಸ್ಕೆ ಮತ್ತು ಎನ್ಎಸ್ಎಸ್ಕೆ ಸಕ್ಕರೆ ಕಾರ್ಖಾನೆಗಳ ಮೇಲೆ ಡಿಸಿಸಿ ಬ್ಯಾಂಕ್ ಒಂದರಲ್ಲೇ 850 ಕೋಟಿ ರೂ. ಸಾಲ ಇದೆ. ಬಿಎಸ್ಎಸ್ಕೆ ಈ ವರ್ಷ ಬಾಗಿಲು ಮುಚ್ಚುವ ಹಂತಕ್ಕೆ ತಲುಪಿದೆ. ಈ ಮೂರೂ ಕಾರ್ಖಾನೆಗಳನ್ನು ಹರಾಜಿಗೆ ಹಾಕಿದರೂ 300 ಕೋಟಿ ರೂ. ಬರದ ಸ್ಥಿತಿ ಇದೆ.
1922ರಲ್ಲಿ ಎಂ.ಎಸ್. ಪಲನೀಕರ್ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಡಿಸಿಸಿ ಬ್ಯಾಂಕ್ ಕಳೆದೆರಡು ದಶಕಗಳಲ್ಲಿ ಕಾರ್ಯ ಚಟುವಟಿಕೆಯಿಂದ ಎತ್ತರೆತ್ತರಕ್ಕೆ ಬೆಳೆದಿದೆ. 1985ರಲ್ಲಿ ಬ್ಯಾಂಕ್ನ ಮುಂದಾಳತ್ವ ವಹಿಸಿಕೊಂಡಿದ್ದ ಮಾಜಿ ಸಚಿವ ದಿ| ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಕ್ಷೇತ್ರವನ್ನು ಜಿಲ್ಲೆಯಲ್ಲಿ ಹೆಮ್ಮರವಾಗಿ ಬೆಳೆಸಿದರು. ಸಹಕಾರ ಕ್ಷೇತ್ರದ ಪ್ರಗತಿಯಿಂದ ಜಿಲ್ಲೆಯ ಬಡ ಕುಟುಂಬಗಳ ಆರ್ಥಿಕ ಸದೃಢತೆ ಜತೆ ಸಾಮಾಜಿಕ, ಶೈಕ್ಷಣಿಕ ಪರಿವರ್ತನೆಗೆ ನಾಂದಿ ಹಾಡಿತು. ಆದರೆ ಕೃಷಿಯೇತರ ಎನ್ಪಿಎ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಏರುತ್ತಿರುವುದು ಬ್ಯಾಂಕ್ನ ಅಭಿವೃದ್ಧಿಗೆ ತೊಡಕಾಗಿದೆ.
ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ಕೆಲವು ಸಹಕಾರ ಬ್ಯಾಂಕ್ಗಳಲ್ಲಿ ಬೀದರ ಡಿಸಿಸಿ ಸಹ ಒಂದಾಗಿದೆ. ಅದು ತನ್ನ 45 ಶಾಖೆಗಳಲ್ಲಿ ಲಾಕರ್, ಎಟಿಎಂ ಕೇಂದ್ರ, ಮೊಬೈಲ್ ಎಟಿಎಂ ಸೌಲಭ್ಯ, ಆನ್ಲೈನ್, ಕೋರ್ ಬ್ಯಾಂಕಿಂಗ್ ಸೇರಿದಂತೆ ವಿವಿಧ ಹಂತದ ತಂತ್ರಜ್ಞಾನದಲ್ಲಿ ಮುಂದಡಿ ಇರಿಸಿದೆ.
ಕೇಂದ್ರ ಸರ್ಕಾರದ ಬೆಳೆ ವಿಮೆ ಯೋಜನೆಯಡಿ ಬೀದರ ಜಿಲ್ಲೆ ಅತಿ ಹೆಚ್ಚು ರೈತರ ನೋಂದಣಿ ಮತ್ತು ವಿಮೆ ಹಣ ಪಡೆಯುವಲ್ಲಿ ಮುಂಚೂಣಿಯಲ್ಲಿದ್ದು, ಇದರಲ್ಲಿ ಡಿಸಿಸಿ ಬ್ಯಾಂಕ್ ಕೊಡುಗೆ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!