ಹುಮನಾಬಾದ್ ಇನ್ನು “ಜಯಸಿಂಹ ನಗರ’? ಸಂಕಲ್ಪ ಯಾತ್ರೆಯಲ್ಲಿ ಸುಳಿವು ನೀಡಿದ ಸಿಎಂ ಬೊಮ್ಮಾಯಿ
Team Udayavani, Oct 19, 2022, 6:55 AM IST
ಬೀದರ: ನಿಜಾಮರ ಕಾಲದ ಹೆಸರುಗಳನ್ನು ಬದಲಾಯಿಸಿ, ನಗರಗಳು, ಬೀದಿಗಳಿಗೆ ಹೊಸದಾಗಿ ನಾಮಕರಣ ಮಾಡುವ ಟ್ರೆಂಡ್, ಉತ್ತರಪ್ರದೇಶ, ತೆಲಂಗಾಣದ ಬಳಿಕ ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ.
ಹುಮನಾಬಾದ್ ಪಟ್ಟಣವನ್ನು “ಜಯಸಿಂಹ’ ನಗರ ಎಂದು ಕರೆಯುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮರು ನಾಮಕರಣದ ಮುನ್ಸೂಚನೆಯನ್ನು ನೀಡಿದ್ದಾರೆ.
ಮಂಗಳವಾರ ಜನಸಂಕಲ್ಪ ಯಾತ್ರೆಯ ಪ್ರಯುಕ್ತ ಇಲ್ಲಿ ನಡೆದ ಸಮಾವೇಶದಲ್ಲಿ ಬೊಮ್ಮಾಯಿ ಅವರು ಇಂಥ ಸುಳಿವು ನೀಡಿರುವುದು, ಚರ್ಚೆಗೆ ಕಾರಣವಾಗಿದೆ.
ರಾಜಾ ಜಯಸಿಂಹನ ಅವಧಿಯಲ್ಲಿ ನಿರ್ಮಾಣಗೊಂಡಿದ್ದ “ಜಯಸಿಂಹ ನಗರ’ ಈಗಿನ “ಹುಮನಾಬಾದ್’ ಆಗಿದೆ. ನಂತರ 1800-1900ರ ನಿಜಾಮ್ ಸಂಸ್ಥಾನದ ಅವಧಿಯಲ್ಲಿ ಇಲ್ಲಿ ಹುಮಾಯಿ ಎಂಬಾತ ಆಡಳಿತ ನಡೆಸುತ್ತಿದ್ದುದರಿಂದ “ಹುಮನಾಬಾದ್’ ಎಂಬ ಹೆಸರು ಚಾಲ್ತಿಗೆ ಬಂದಿದೆ ಎಂಬ ಪ್ರತೀತಿ ಇದೆ.
ಹಾಗಾಗಿ ಈ ಪಟ್ಟಣವನ್ನು ಈಗ “ಜಯಸಿಂಹ ನಗರ’ ಎಂದು ಮರು ನಾಮಕರಣ ಮಾಡಬೇಕು ಎಂಬುದು ಆರ್ಎಸ್ಎಸ್ ಸೇರಿದಂತೆ ಹಿಂದೂಪರ ಸಂಘಟನೆಗಳ ಬೇಡಿಕೆಯಾಗಿತ್ತು.
ಮಂಗಳವಾರದ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ, “ಹುಮನಾಬಾದ್’ ಬದಲು “ಜಯಸಿಂಹ ನಗರ’ ಎಂದೇ ಸಂಬೋಧಿಸಿದ್ದಾರೆ. ಹಾಗಾಗಿ ಸರ್ಕಾರ ಈ ಪಟ್ಟಣಕ್ಕೆ ಹಲವರ ಬೇಡಿಕೆಯಂತೆ ಜಯಸಿಂಹ ನಗರ ಎಂದು ಮರು ನಾಮಕರಣ ಮಾಡಲಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಮಾವೇಶ ಆರಂಭಕ್ಕೂ ಮುನ್ನ ಹಿಂದೂ ಜಾಗರಣ ವೇದಿಕೆ ಮುಖಂಡರು ಈ ಸಂಬಂಧ ಮನವಿ ಪತ್ರ ಸಹ ಸಲ್ಲಿಸಿದ್ದರು.
ಏನ್ಮಾಡ್ತಾರೆ ನೋಡೋಣ…
2016ರ ಶಿಕ್ಷಕರ ನೇಮಕಾತಿ ಹಗರಣ, ಪ್ರಾಸಿಕ್ಯೂಟರ್ ಮತ್ತು ಪೊಲೀಸ್ ನೇಮಕಾತಿ ಹಗರಣ ಸೇರಿ ಎಲ್ಲ ದಾಖಲೆಗಳನ್ನು ರಾಹುಲ್ ಗಾಂಧಿಗೆ ಕೊಡಲಿದ್ದೇನೆ. ಅವರು ಏನು ಶಿಕ್ಷೆ ಕೊಡುತ್ತಾರೆ ಕಾದು ನೋಡೋಣ. ಸಿದ್ದರಾಮಯ್ಯ ಕೇವಲ ದೊಡ್ಡ ದೊಡ್ಡ ಮಾತನಾಡುತ್ತಾರಷ್ಟೇ ದಮ್ ಇಲ್ಲ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ