ಕೃಷಿ ಡಿಪ್ಲೋಮಾ ಉತ್ತೀರ್ಣರಾದವರಿಗೆ ಉದ್ಯೋಗ ಭಾಗ್ಯ: ಸಚಿವ ಬಿ.ಸಿ ಪಾಟೀಲ್
Team Udayavani, Feb 19, 2021, 10:30 PM IST
ಬೀದರ್: ಕೃಷಿ ಇಲಾಖೆಯಲ್ಲಿ ಸೇವೆಗಾಗಿ ರಾಜ್ಯದಲ್ಲಿ 3 ಸಾವಿರ ಕೃಷಿ ಡಿಪ್ಲೋಮಾದಲ್ಲಿ ತೇರ್ಗಡೆಯಾಗಿರುವವರನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಚಿಂತನೆ ನಡೆದಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.
ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆಯಡಿ ಎರಡು ಗ್ರಾಮ ಪಂಚಾಯತಗೆ ಒಬ್ಬರಂತೆ ಈ ನೇಮಕಾತಿ ಮಾಡಿಕೊಳ್ಳಲಾಗುವುದು. ವರ್ಷದಲ್ಲಿ 10 ತಿಂಗಳು ಇವರನ್ನು ಸೇವೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಕೃಷಿ ಡಿಪ್ಲೊಮಾ ವಿದ್ಯಾರ್ಥಿಗಳು ತಾಂತ್ರಿಕವಾಗಿ ಪರಿಣಿತರಾಗಿರುವ ಹಿನ್ನಲೆ ಅವರನ್ನು 3 ತಿಂಗಳು ಬೆಳೆ ಸಮೀಕ್ಷೆಗಾಗಿ ನಂತರ ಉಳಿದ 7 ತಿಂಗಳು ಕೃಷಿ ಇಲಾಖೆಯ ಸೇವೆಗೆ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ ಸಚಿವ ಪಾಟೀಲ, ಕೃಷಿ ಇಲಾಖೆಯಲ್ಲಿ ಶೇ. 55 ರಷ್ಟು ಹುದ್ದೆಗಳು ಖಾಲಿ ಇದ್ದು, ಇದರಿಂದ ಕೆಳ ಹಂತದಲ್ಲಿ ಇಲಾಖೆಯ ಕಾರ್ಯಕ್ರಮಗಳನ್ನು ಮುಟ್ಟಿಸಲು ಸಾಧ್ಯವಾಗುತ್ತಿಲ್ಲ. ಕೋವಿಡ್.ನಿಂದ ಎದುರಾಗಿರುವ ಆರ್ಥಿಕ ಸ್ಥಿತಿ ಸುಧಾರಣೆ ಬಳಿಕ ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಕಾರ್ಕಳ: ಮಾಟ, ಮಂತ್ರ, ದೋಷ ಎಂದೇಳಿ ವ್ಯಕ್ತಿಗೆ 30 ಲಕ್ಷ ವಂಚಿಸಿದ ಮಹಿಳೆ !
ಕೃಷಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ ರೈತರ ಮಕ್ಕಳಿಗೆ ಈಗಿರುವ ಶೇ. 40ರಷ್ಟು ಮೀಸಲಾತಿಯನ್ನು ಶೇ. 50ಕ್ಕೆ ಹೆಚ್ಚಿಸಲು ಮತ್ತು ಕೃಷಿ ನೀರಾವರಿ ಪಂಪ್ ಸೆಟ್ಗಳಿಗೆ ಸಧ್ಯ ನೀಡಲಾಗುತ್ತಿರುವ ಸಬ್ಸಿಡಿ ಪ್ರಮಾಣವನ್ನು ಶೇ. 25 ರಿಂದ ಶೇ. 40ಕ್ಕೆ ಹೆಚ್ಚಿಸುವ ಚಿಂತನೆ ನಡೆದಿದ್ದು, ಬಜೆಟ್ ನಲ್ಲಿ ಘೋಷಿಸಲು ಸಿಎಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಅಕಸ್ಮಿಕವಾಗಿ ಸಾವನ್ನಪ್ಪುವ ರೈತರ ಪರಿಹಾರ ಮೊತ್ತವನ್ನು 2 ರಿಂದ 5 ಲಕ್ಷ ರೂ. ಗಳಿಗೆ ಹೆಚ್ಚಿಸುವುದು ಹಾಗೂ ಹುಲ್ಲಿನ ಬಣಮಗೆ ಬೆಂಕಿ ನಷ್ಟದ ಪರಿಹಾರ ಮೊತ್ತ ಹೆಚ್ಚಳ ಕುರಿತು ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯವರು ಕೂಲಿ ಕಾರ್ಮಿಕರ ವಿರೋಧಿಗಳು: 2 ವರ್ಷದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಸಿದ್ದು