ಬಾರದ ಮಳೆ, ಬಿತ್ತನೆಗೆ ಹಿನ್ನಡೆ
Team Udayavani, Jun 5, 2018, 11:15 AM IST
ಬಸವಕಲ್ಯಾಣ: ಮುಂಗಾರು ಬಿತ್ತನೆ ಸಿದ್ಧತೆಯಲ್ಲಿರುವ ರೈತ ಸಮುದಾಯ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ತಾಲೂಕಿನಲ್ಲಿ ಬಿತ್ತನೆಗೆ ಅಗತ್ಯವಿರುವಷ್ಟು ಮಳೆ ಇಲ್ಲದೆ ರೈತರ ಮೊಗದಲ್ಲಿ ನಿರಾಸೆ ಮೂಡಿದೆ.
ವಾಡಿಕೆಯಂತೆ ಜೂನ್ ಮೊದಲ ವಾರದಲ್ಲಿ ಉತ್ತಮ ಮಳೆಯಾಗುವ ಭರವಸೆಯೊಂದಿಗೆ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದವು. ಆದರೆ ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಅಬ್ಬರಿಸುತ್ತಿರುವ ಮುಂಗಾರು ಪೂರ್ವ ಮಳೆ ತಾಲೂಕಿನ ವಿವಿಧೆಡೆ ಸುರಿದರೂ
ಬಿತ್ತನೆಗೆ ಬೇಕಾದಷ್ಟು ಮಳೆ ಬಂದಿಲ್ಲ. ಹೀಗಾಗಿ ಅನ್ನದಾತ ಮಳೆಗಾಗಿ ಆಕಾಶದತ್ತ ಮುಖ ಮಾಡುವಂತಾಗಿದೆ.
ಮುಂಗಾರು ಹಂಗಾಮಿನ ಬಿತ್ತನೆಗಾಗಿ ತಮ್ಮ ಜಮೀನು ಹದಗೊಳಿಸಿಕೊಂಡು ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಕೆಲವೆಡೆ ಬಿದ್ದ ಮಳೆ ಭರವಸೆ ಮೂಡಿಸಿದರೆ, ಮತ್ತೆ ಕೆಲವೆಡೆ ನಿರಾಸೆ ತಂದಿದೆ. ಜೂ. 1ರಿಂದ 4ರ ವರೆಗೆ ತಾಲೂಕಿನಲ್ಲಿ ಸರಾಸರಿ 27 ಮಿಮೀ ಮಳೆಯಾಗಿದ್ದು, ಕೋಹಿನೂರ ಹಾಗೂ ಬಸವಕಲ್ಯಾಣ ಹೋಬಳಿ ವ್ಯಾಪ್ತಿಯಲ್ಲಿ ಅಧಿಕ ಮಳೆ ದಾಖಲಾಗಿದೆ.
ಕೋಹಿನೂರನಲ್ಲಿ 50 ಮಿಮೀ, ಬಸವಕಲ್ಯಾಣನಲ್ಲಿ 47 ಮಿಮೀ ಮಳೆ ಪ್ರಮಾಣ ದಾಖಲಾಗಿದ್ದು, ಮಠಾಳನಲ್ಲಿ 28 ಮಿಮೀ, ರಾಜೇಶ್ವರನಲ್ಲಿ 24.3 ಮಿಮೀ, ಹುಲಸೂರ 10.20 ಮಿಮೀ,
ಮುಡಬಿಯಲ್ಲಿ ಕೇವಲ 3 ಮಿಮೀ ಮಳೆ ದಾಖಲಾಗಿದೆ.
ಬಿತ್ತನೆ ಗುರಿ: ತಾಲೂಕಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 73247 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಮುಂಗಾರು ಹಂಗಾಮಿನ ಮುಖ್ಯ ಬೆಳೆಗಳಾದ ಸೋಯಾಬಿನ್, ತೊಗರಿ, ಉದ್ದು, ಹೆಸರು ಮತ್ತು ಮುಂಗಾರು ಜೋಳ ಬೆಳೆಗಳು ಹೆಚ್ಚಿನ ಕ್ಷೇತ್ರವನ್ನು ಆವರಿಸಿರುತ್ತವೆ.
ಸೋಯಾಬಿನ್ 29600 ಹೆಕ್ಟೇರ್, ತೊಗರಿ 12700 ಹೆಕ್ಟೇರ್, ಹೆಸರು 4550 ಹೆಕ್ಟೇರ್, ಮುಂಗಾರು ಜೋಳ 7500 ಹೆಕ್ಟೇರ್, ಉದ್ದು 4000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಹೊಸಾಳೆ ತಿಳಿಸಿದ್ದಾರೆ.
ಬೀಜ ವಿತರಣೆ: ಮುಂಗಾರು ಬಿತ್ತನೆಗಾಗಿ ತಾಲೂಕಿನ ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಈಗಾಗಲೇ ಒಂದೆರಡು ಕಡೆ ಬೀಜ ವಿತರಣೆಗೆ ಚಾಲನೆ ನೀಡಲಾಗಿದೆ. ಉಳಿದ ಕಡೆಯು ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಬಿತ್ತನೆಗಾಗಿ ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ವಿತರಿಸಲಾಗುತ್ತಿದ್ದು, ಸೋಯಾಬಿನ್, ತೊಗರಿ, ಉದ್ದು ಹಾಗೂ ಹೆಸರು ಬೀಜಗಳಿಗೆ ಸಾಮಾನ್ಯ ರೈತರಿಗೆ ಪ್ರತಿ ಕೆಜಿಗೆ 25 ರೂ. ಹಾಗೂ ಪಜಾ, ಪಪಂ ರೈತರಿಗೆ ಪ್ರತಿ ಕೆಜಿಗೆ 37.50 ರೂ. ರಿಯಾಯಿತಿ ದರ ನಿಗದಿಪಡಿಸಲಾಗಿದೆ. ಸರ್ಕಾರದ ಆದೇಶದಂತೆ ರೈತರು ಪಹಣಿ ಪ್ರತಿ ನೀಡಿದರೆ ಬೀಜ, ಗೊಬ್ಬರ ನೀಡಲಾಗುವುದು ಎಂದು ಧೂಳಪ್ಪ ಹೊಸಾಳೆ ತಿಳಿಸಿದ್ದಾರೆ
ಯಾವುದೇ ಕ್ಷಣದಲ್ಲಿ ಉತ್ತಮ ಮಳೆ ಸುರಿದು ಬಿತ್ತನೆ ಕಾರ್ಯ ಶುರುವಾಗಬಹುದು. ಮುಂಗಾರು ಬಿತ್ತನೆ ಕಾರ್ಯಕ್ಕೆ ಅಗತ್ಯವಿರುವ ಬೀಜ-ಗೊಬ್ಬರದ ಕೊರತೆಯಾಗದಂತೆ ಕೃಷಿ ಇಲಾಖೆ ಎಚ್ಚರಿಕೆ ವಹಿಸಬೇಕು. ಇಲಾಖೆಯಿಂದ ಸಿಗುವ ಸಹಾಯ-ಸೌಲಭ್ಯವನ್ನು ರೈತರಿಗೆ ಸಕಾಲದಲ್ಲಿ ಕಲ್ಪಿಸಬೇಕು.
ಶಿವರುದ್ರಪ್ಪ ತಾಟೆ, ರೈತ ಮುಖಂಡ
ಮುಂಗಾರು ಬಿತ್ತನೆಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಅಗತ್ಯವಾದ ಮಳೆ ಇನ್ನೂ ಆಗಿಲ್ಲ. ಮುಂಗಾರು ಪೂರ್ವ ಹೆಚ್ಚಿನ ಮಳೆ ನಿರೀಕ್ಷಿಸಲಾಗಿತ್ತು. ಆದರೆ ಮಳೆ ಆಗದಿರುವುದು ನಿರಾಸೆ ಮೂಡಿಸಿದೆ.
ಚನ್ನಯ್ಯ ಸ್ವಾಮಿ ಮಂಠಾಳ, ಪ್ರಗತಿಪರ ರೈತ
ಉದಯಕುಮಾರ ಮುಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ