ಬಾಂದಾರಗೆ ನೀರು: ಪಾಟೀಲ ಚಾಲನೆ
Team Udayavani, Apr 25, 2020, 2:00 PM IST
ಬಸವನಬಾಗೇವಾಡಿ: ಹೋರಿಮಟ್ಟಿ ಗುಡ್ಡದ ಹತ್ತಿರದ ಉಪ ಕಾಲುವೆಯಿಂದ ಪೈಪ್ ಮೂಲಕ ಬಾಂದಾರಕ್ಕೆ ನೀರು ಹರಿಸುವ ಕಾರ್ಯಕ್ಕೆ ಶಾಸಕ ಶಿವಾನಂದ ಪಾಟೀಲ ಚಾಲನೆ ನೀಡಿದರು
ಬಸವನಬಾಗೇವಾಡಿ: ಪಟ್ಟಣದ ಹೊರ ವಲಯದಲ್ಲಿರುವ ಹೋರಿಮಟ್ಟಿ ಗುಡ್ಡದ ಹತ್ತಿರದ ಉಪ ಕಾಲವೆಯಿಂದ ಪೈಪ್ ಮೂಲಕ ಬಾಂದಾರಕ್ಕೆ ನೀರು ಹರಿಸುವ ಕಾರ್ಯಕ್ಕೆ ಗುರುವಾರ ಶಾಸಕ ಶಿವಾನಂದ ಪಾಟೀಲ ಗಂಗಾಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುದರಿಸಾಲವಾಡಗಿ ಉಪ ಕಾಲುವೆ ಮೂಲಕ ಬಾಂದಾರಗೆ ನೀರು ಹರಿಯುತ್ತಿರುವುದರಿಂದ ಜನ, ಜಾನುವಾರ ಸೇರಿದಂತೆ ಸುತ್ತ ಮುತ್ತಲಿನ ನೂರಾರು ರೈತರು ವಸತಿ ತೋಟದಲ್ಲಿರುವ ರೈತರಿಗೆ ಹಾಗೂ ಜನ ಜಾನುವಾರಗಳು, ಪಕ್ಷಿ ಪ್ರಾಣಿಗಳಿಗೆ ಕುಡಿಯುವ ನೀರು ಮತ್ತು ತೆರೆದ ಬಾವಿ, ಕೊಳವೆ ಬಾವಿಗಳಿಗೆ ಅಂತರ್ಜಲ ಹೆಚ್ಚಳವಾಗುವ ಸಾಧ್ಯತೆಯಿಂದ ಈ ಕಾರ್ಯ ಮಾಡಲಾಗಿದೆ ಎಂದರು.
ಕೂಡಗಿ ಬಳಿಯಿರುವ ಮುಳವಾಡ ಏತ ನೀರಾವರಿ ಯೋಜನೆಯ ಹಂತ-3ರ ವಿಜಯಪುರ ಮುಖ್ಯ ಹಾಗೂ ಬಸವನಬಾಗೇವಾಡಿ ಕಾಲುವೆಗೆ ಏ. 20ರಂದು ನೀರು ಹರಿಸಲಾಗಿದೆ. ಈ ಕಾಲುವೆಗಳ ಮೂಲಕ ಜಿಲ್ಲೆಯ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಯಿಂದ 97 ಕೆರೆಗಳಿಗೆ ನೀರನ್ನು ತುಂಬಿಸುವ ಮೂಲಕ ಬೇಸಿಗೆಯಲ್ಲಿ ಆ ಭಾಗದ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಪೂರಕವಾಗುವದರೊಂದಿಗೆ ಜನ, ಜಾನುವಾರುಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ವಿರಕ್ತಮಠದ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಈ ಭಾಗದ ರೈತರು ಅಂತರ ಕಾಯ್ದುಕೊಂಡು ಕುದರಿಸಾಲವಾಡಗಿ ಉಪ ಕಾಲುವೆಯಿಂದ ಸುಮಾರು 600 ಮೀ.ವರೆಗೆ ಪೈಪ್ಲೈನ್ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅವರ ಶ್ರಮದ ಫಲವಾಗಿ ಎರಡು ಬಾಂದಾರಗಳಿಗೆ ನೀರು ಹರಿಸಲಾಗುತ್ತಿದೆ. ಈ ನೀರು ಹಿರೇಹಳ್ಳದ ಮಾರ್ಗವಾಗಿ ಆರೇಡಿಶಂಕರ ಕೆರೆಗೆ ಹೋಗಿ ತಲುಪಲಿದೆ ಎಂದರು.
ಈ ವೇಳೆ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀ, ಗಂಗಯ್ಯ ಕಾಳಹಸ್ತೇಶ್ವರಮಠ, ಈರಣ್ಣ ಪಟ್ಟಣಶೆಟ್ಟಿ, ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ, ಬಸಣ್ಣ ದೇಸಾಯಿ, ಬಸವರಾಜ ಹಾರಿವಾಳ, ಭರತಕುಮಾರ ಅಗರವಾಲ, ಅರವಿಂದ ಕುಲಕರ್ಣಿ, ಬಸವರಾಜ ಗೊಳಸಂಗಿ, ಹರೀಶ ಅಗರವಾಲ, ಇದ್ದರು.