ಸಾರ್ವತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಕ್ರಮ: ನಡಹಳ್ಳಿ
Team Udayavani, Sep 14, 2020, 5:01 PM IST
ಮುದ್ದೇಬಿಹಾಳ: ಯುವಜನತೆ ತಮ್ಮೂರಿನ ಸಾರ್ವತ್ರಿಕ ಸಮಸ್ಯೆಗಳ ಪಟ್ಟಿ ಮಾಡಿ ನನಗೆ ಸಲ್ಲಿಸಿದಲ್ಲಿ ಖಂಡಿತವಾಗಿಯೂ ಅವುಗಳ ಪರಿಹಾರಕ್ಕೆ, ಅಂಥ ಊರುಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ಮೆಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದ್ದಾರೆ.
ರವಿವಾರ ಸಂಜೆ ಕಂದಗನೂರ, ಚಿರ್ಚನಕಲ್ ಗ್ರಾಮಗಳಲ್ಲಿ ಪ್ರವಾಹ ಪೀಡಿತ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿ 2.7 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತ್ಯೇಕ ಭೂಮಿಪೂಜೆ ನಡೆಸಿ ನಂತರ ನಡೆದ ಸಾರ್ವಜನಿಕ ಸಭೆಗಳಲ್ಲಿ ಅವರು ಮಾತನಾಡಿದರು.
ಮುದ್ದೇಬಿಹಾಳ ಪಟ್ಟಣದ ವಿಜಯಪುರ ರಸ್ತೆ ಪಕ್ಕದ ಪೊಲೀಸ್ ಠಾಣೆ ಬಳಿ ನನ್ನ ಗೃಹಕಚೇರಿ ದಾಸೋಹ ನಿಲಯ ಇದೆ. ಪ್ರತಿ ದಿನವೂ ಸಾಮಾಜಿಕ ಜಾಲತಾಣದಲ್ಲಿ ನನ್ನ ಪ್ರವಾಸದ ವಿವರ ತಿಳಿಯಪಡಿಸಲಾಗುತ್ತದೆ. ಮತಕ್ಷೇತ್ರದ ಜನತೆ ತಿಂಗಳಿಗೆ ಒಮ್ಮೆಯಾದರೂ ನನ್ನ ಗೃಹಕಚೇರಿಗೆ ಬಂದು ಅಹವಾಲು ಸಲ್ಲಿಸಿಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಕ್ತ ಅವಕಾಶ ನೀಡಲಾಗಿದೆ. ನಾನೂ ಮತಕ್ಷೇತ್ರದಲ್ಲಿದ್ದಾಗ ನಿತ್ಯ ಬೆಳಗ್ಗೆ ಸಾರ್ವಜನಿಕ ಅಹವಾಲು ಆಲಿಸುತ್ತೇನೆ. ತುರ್ತು ಸಂದರ್ಭಗಳಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಅಲ್ಲೇ ಸಮಸ್ಯೆ ಬಗೆಹರಿಸಿ ಕಳುಹಿಸುತ್ತೇನೆ. ಇದನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಮತಕ್ಷೇತ್ರದಲ್ಲಿ 126 ಹಳ್ಳಿಗಳ ಜವಾಬ್ದಾರಿ ನನ್ನ ಮೇಲಿದೆ. ರಾಜ್ಯದ ಮೂರುವರೆ ಕೋಟಿ ಬಡಜನರಿಗೆ ಅನ್ನ ಹಾಕುವ ಆಹಾರ ನಿಗಮದ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಸರ್ಕಾರ ನನಗೆ ಕೊಟ್ಟಿದೆ. ಇಂಥ ಪರಿಸ್ಥಿತಿಯಲ್ಲಿ ಜನರು ನನ್ನ ಸಂಪರ್ಕ ಮಾಡದಿದ್ದರೆ ನನಗೆ ಸಮಸ್ಯೆ ಹೇಗೆ ತಿಳಿಯಬೇಕು. ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಕಳೆದ ಬಾರಿ ಕೃಷ್ಣಾ ನದಿಯ ಪ್ರವಾಹಕ್ಕೆ ನದಿ ತೀರದ ಹಲವು ಗ್ರಾಮಗಳು ತೊಂದರೆಗೊಳಗಾಗಿವೆ. ಅಗತ್ಯ ಪರಿಹಾರವನ್ನೂ ಸರ್ಕಾರ ಕೊಟ್ಟಿದೆ. ಇನ್ನೂ ಪರಿಹಾರ ದೊರೆತಿಲ್ಲದವರು ಪಟ್ಟಿ ಮಾಡಿ ನನಗೆ ಸಲ್ಲಿಸಿದಲ್ಲಿ ಸಂಬಂ ಧಿಸಿದವರೊಂದಿಗೆ ಮಾತನಾಡಿ ಶೀಘ್ರ ಪರಿಹಾರ ದೊರಕುವಂತೆ ಮಾಡುತ್ತೇನೆ ಎಂದರು.
ಮುಂದಿನ ಮೂರು ವರ್ಷಗಳಲ್ಲಿ ಈ ತಾಲೂಕಿನ ಎಲ್ಲ ಹಳ್ಳಿಗಳ ಜನಕ್ಕೆ ನಳದ ಮೂಲಕ ಶುದ್ಧ ಕುಡಿಯುವ ನೀರು ದೊರಕಲಿದೆ. ಆಲಮಟ್ಟಿ, ನಾರಾಯಣಪುರ ಜಲಾಶಯದ ನೀರನ್ನು ಈ ಯೋಜನೆಗಾಗಿ ಬಳಸಿಕೊಳ್ಳಲಾಗುತ್ತದೆ. ಅಲ್ಲೇ ಶುದ್ಧ ನೀರಿನ ಘಟಕ ನಿರ್ಮಿಸಲಾಗುತ್ತದೆ. ಇದಕ್ಕಾಗಿ ವಿಜಯಪುರ ಜಿಲ್ಲೆಗೆ 2,500 ಕೋಟಿ ರೂ. ಮಂಜೂರಾಗಿದ್ದು ಅದರಲ್ಲಿ ಮುದ್ದೇಬಿಹಾಳ ತಾಲೂಕಿಗೆ 700ಕೋಟಿ ರೂ. ಅಂದಾಜು ಪತ್ರಿಕೆ ತಯಾರಾಗಿದೆ. ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಮುಗಿದು ಕೆಲಸ ಪ್ರಾರಂಭಗೊಳ್ಳಲಿದೆ ಎಂದರು.
ತಾಲೂಕಿನ ವಿದ್ಯುತ್ ಸಮಸ್ಯೆಗೂ ಶೀಘ್ರ ಮುಕ್ತಿ ದೊರಕಲಿದ್ದು ರೈತಾಪಿ ವರ್ಗದವರು ನೆಮ್ಮದಿಯ ಜೀವನ ನಡೆಸುವುದು ಸಾಧ್ಯವಾಗಲಿದೆ. ವಿದ್ಯುತ್ ಸಮಸ್ಯೆ ಬಗೆಹರಿದಾಗ ರೈತರು ರಾತ್ರಿಯಿಡೀ ಜಮೀನಿನಲ್ಲೇ ಕಾಲ ಕಳೆದು ಬೆಳೆಗೆ ನೀರು ಹರಿಸುವ ಪರಿಸ್ಥಿತಿಗೆ ಮುಕ್ತಿ ದೊರಕಲಿದೆ. ಹಿಂದಿನ 25 ವರ್ಷದಲ್ಲಿ ಆಗದಅಭಿವೃದ್ಧಿ ಈಗ ಕೇವಲ ಒಂದೆರಡು ವರ್ಷಗಳಲ್ಲೇ ಆಗುತ್ತಿರುವುದು ಸಂತಸ ಪಡುವಂಥದ್ದು. ಜನ ಜಾಗೃತರಾದರೆ ಮಾತ್ರ ಜನಪ್ರತಿನಿಧಿಯೂ ಜಾಗೃತನಾಗುತ್ತಾನೆ ಅನ್ನೋದಕ್ಕೆ ಈಗಿನ ಪರಿಸ್ಥಿತಿ ಉತ್ತಮ ಉದಾಹರಣೆಯಾಗಿದೆ ಎಂದರು.
ಇದೇ ವೇಳೆ ಎರಡೂ ಗ್ರಾಮಗಳಲ್ಲಿ ಗ್ರಾಮಸ್ಥರ ಪರವಾಗಿ ಶಾಸಕರನ್ನು ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಬಿಜೆಪಿ ಧುರೀಣರಾದ ಶಾಂತಗೌಡ ಪಾಟೀಲ ನಡಹಳ್ಳಿ, ಮಲಕೇಂದ್ರಗೌಡ ಪಾಟೀಲ, ಶರಣಯ್ಯ ಬೂದಿಹಾಳಮಠ, ಸಿದ್ರಾಮಪ್ಪ ಶಿವಣಗಿ, ರಾಜಾಭಕ್ಷ ಮಕಾಶಿ, ಸಾಹೇಬಗೌಡ ಪಾಟೀಲ, ಭೀಮಣ್ಣ ಹೂಗಾರ, ಈರನಗೌಡ ಪಾಟೀಲ, ಶಿವನಗೌಡ ಬಿರಾದಾರ, ಮೈಬೂಬ , ಸಿಪಿಐ ಆನಂದ ವಾಗಮೋಡೆ, ಆಯಾ ಗ್ರಾಮಗಳ ಪ್ರಮುಖರು, ಹಿರಿಯರು, ಗ್ರಾಪಂ ಅಧಿಕಾರಿಗಳು ಸೇರಿ ಹಲವರು ಇದ್ದರು. ಇದಕ್ಕೂ ಮುನ್ನ ಶಾಸಕರು ಗ್ರಾಮದಲ್ಲಿ ಸಂಚರಿಸಿ ಮೂಲಸೌಕರ್ಯಗಳ ಮಾಹಿತಿ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ