ಸ್ವಯಂ ಸ್ಥಳಾಂತರಕ್ಕೆ ಸೂಚನೆ
Team Udayavani, Nov 12, 2019, 2:26 PM IST
ಮುದ್ದೇಬಿಹಾಳ: ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬಸ್ ನಿಲ್ದಾಣ ಮುಂಭಾಗ, ಬಸವೇಶ್ವರ ವೃತ್ತ ಮಾರ್ಗವಾಗಿ ಪಿಲೇಕೆಮ್ಮ ನಗರದವರೆಗೆ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸಿದ್ದು ನಗರ ಸೌಂದಯಿಕರಣಕ್ಕೆ ಚಾಲನೆ ನೀಡಲಾಗುತ್ತಿದೆ.
ಹೀಗಾಗಿ ಈ ರಸ್ತೆ ಇಕ್ಕೆಲಗಳಲ್ಲಿ ಫುಟ್ಪಾಥ್ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳು ಶುಕ್ರವಾರದೊಳಗೆ ಪುಟ್ಪಾಥ್ ತೆರುವುಗೊಳಿಸಿ ಸ್ವಯಂ ಪ್ರೇರಿತರಾಗಿ ತಮ್ಮ ವ್ಯಾಪಾರವನ್ನು ಸ್ಥಳಾಂತರಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿ ಕಾರಿ ಎಂ.ಬಿ. ಮಾಡಗಿ, ಸಿಪಿಐ ಆನಂದ , ಪಿಎಸೈ ಮಲ್ಲಪ್ಪ ಮಡ್ಡಿ ಸೂಚಿಸಿದರು. ಪುರಸಭೆ ಕಾರ್ಯಾಲಯ ಸಭಾಂಗಣದಲ್ಲಿ ಸೋಮವಾರ ಎಲ್ಲ ರೀತಿಯ ಬೀದಿ ಬದಿ
ವ್ಯಾಪಾರಸ್ಥರ ಸಭೆ ನಡೆಸಿದ ಅವರು, ರಸ್ತೆ ಅಗಲೀಕರಣ ಕಾರ್ಯ ಮುಕ್ತಾಯಗೊಂಡಿದ್ದು ಇದೀಗ ಫುಟ್ಪಾಥ್ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುತ್ತಿದೆ. ಬಹಳ ದಿನಗಳಿಂದ ಈ ಕಾರ್ಯ ನನೆಗುದಿಗೆ ಬಿದ್ದಿದ್ದು ಇದರಿಂದ ನಗರ ಸೌಂದಯಿಕರಣಕ್ಕೆ ತೀವ್ರ ಹಿನ್ನೆಡೆ ಆಗತೊಡಗಿದೆ. ಜೊತೆಗೆ ಸಾರ್ವಜನಿಕರ, ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿ ಆತಂಕ ಉಂಟಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದು ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುವ ಸಂಭವ ಇದೆ ಎಂದು ಅಧಿಕಾರಿಗಳು ತಿಳಿ ಹೇಳಿದರು.
ನಗರ ಸೌಂದಯಿಕರಣದ ಭಾಗವಾಗಿರುವ ಮುಖ್ಯ ರಸ್ತೆಗಳು ಸುಂದರವಾಗಿ ಕಾಣಬೇಕು. ಜನರು ಫುಟ್ಪಾಥ್ ಮೇಲೆ ಯಾವುದೇ ಅಂಜಿಕೆ, ಅಳುಕು ಇಲ್ಲದೆ ತಿರುಗಾಡುವಂತಾಗಬೇಕು. ಹೊರಗಿನಿಂದ ಬರುವ ಜನರಿಗೆ ನಮ್ಮೂರಿನ ರಸ್ತೆಗಳನ್ನು ನೋಡಿದರೆ ಹೈಟೆಕ್ ಸಿಟಿಯಲ್ಲಿ ಬಂದಿದ್ದೇವೆ ಎನ್ನುವಂತೆ ಕಾಣಬೇಕು. ಇದರಿಂದ ಊರಿನ ಸೌಂದರ್ಯ, ಮಹತ್ವ ಹೆಚ್ಚುತ್ತದೆ. ಜೊತೆಗೆ ಸುಂದರವಾದ ರಸ್ತೆ, ಫುಟಪಾತ್ನಿಂದ ಈ ಊರಿನ ಜನರಲ್ಲೂ ಹೆಮ್ಮೆ ಮೂಡುತ್ತದೆ ಎಂದು ತಿಳಿವಳಿಕೆ ಹೇಳುವ ಪ್ರಯತ್ನ ನಡೆಸಿದರು.
ಈಗಾಗಲೇ ತರಕಾರಿ ವ್ಯಾಪಾರಕ್ಕಾಗಿ ಇಂದಿರಾ ವೃತ್ತದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಹಲವು ಬಾರಿ ತರಕಾರಿ ವ್ಯಾಪಾರಸ್ಥರಿಗೆ ಮನವಿ ಮಾಡಿದರೂ ಹೊಸ ಮಾರುಕಟ್ಟೆಗೆ ಹೋಗುತ್ತಿಲ್ಲ. ಬಸವೇಶ್ವರ ವೃತ್ತದಲ್ಲೇ ರಸ್ತೆ ಅತಿಕ್ರಮಿಸಿ ವ್ಯಾಪಾರ ನಡೆಸುವುದರಿಂದ ಜನಸಂಚಾರಕ್ಕೆ ಸಾಕಷ್ಟು ತೊಂದರೆ ಆಗತೊಡಗಿದೆ. ಇದಲ್ಲದೆ ಅಳಿದುಳಿದ ತರಕಾರಿಗಳನ್ನು ರಸ್ತೆ ಮೇಲೆ ಬಿಸಾಕುವುದರಿಂದ ಬಿಡಾಡಿ ದನಗಳ ಹಾವಳಿಯೂ ಹೆಚ್ಚಾಗಿ ರಸ್ತೆ ಅಪಘಾತಕ್ಕೆ ಅವಕಾಶ ಹೇರಳವಾಗತೊಡಗಿವೆ. ಇವೆಲ್ಲ ಗಂಭೀರವಾಗಿ ಪರಿಗಣಿಸಿಯೇ ತರಕಾರಿ ವ್ಯಾಪಾರ ಸ್ಥಳಾಂತರಕ್ಕೆ ತೀರ್ಮಾನಿಸಿದ್ದು ಬಸವೇಶ್ವರ ವೃತ್ತದಲ್ಲಿರುವ ಎಲ್ಲ ತರಕಾರಿ ವ್ಯಾಪರಸ್ಥರು ಹೊಸ ಮಾರುಕಟ್ಟೆಯಲ್ಲೇ ಇನ್ನು ಮುಂದೆ ವ್ಯಾಪಾರ ಮಾಡುವುದು ಕಡ್ಡಾಯ. ನಿಯಮ ಉಲ್ಲಂಘಿಸಿದರೆ ಮಾರಾಟಗಾರರ ಮೇಲೆ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಲಾಯಿತು.
ತಳ್ಳುಗಾಡಿಯವರು ಓಣಿ ಓಣಿ ತಿರುಗಾಡಿ ವ್ಯಾಪಾರ ನಡೆಸಬೇಕು. ಇಂಥವರು ಮುಖ್ಯ ರಸ್ತೆಯಲ್ಲಿ ತಮ್ಮ ಗಾಡಿ ನಿಲ್ಲಿಸಿ ವ್ಯಾಪಾರ ಮಾಡುವಂತಿಲ್ಲ. ಹಣ್ಣಿನ ವ್ಯಾಪಾರಸ್ಥರು ಹಳೇ ತಹಶೀಲ್ದಾರ್ ಕಚೇರಿ ಆವರಣಕ್ಕೆ ತಮ್ಮ ವ್ಯಾಪರ ಬದಲಿಸಬೇಕು. ಪಾನಿಪುರಿ, ಭಜಿ ವ್ಯಾಪಾರಸ್ಥರಿಗೆ ಬಸವೇಶ್ವರ ವೃತ್ತದ ಬಳಿ ಎಲ್ಲಿಯಾದರೂ ಒಂದು ಕಡೆ ಖುಲ್ಲಾ ಜಾಗೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಡಬ್ಟಾ ಅಂಗಡಿಯವರು ರಸ್ತೆ ಪಕ್ಕ ಅನಧಿಕೃತವಾಗಿ ಅಂಗಡಿ ಹಾಕಿಕೊಂಡಿದ್ದರೆ ತಕ್ಷಣ ತೆರುವುಗೊಳಿಸಬೇಕು. ಅವರು ಎಲ್ಲಿಯಾದರೂ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಳ್ಳಬೇಕು. ಯಾರೂ ಫುಟ್ಪಾಥ್ ಅತಿಕ್ರಮಿಸಿ ವ್ಯಾಪಾರ ಮಾಡಲು ಅವಕಾಶ ಕೊಡುವುದಿಲ್ಲ ಎಂದು ವ್ಯಾಪಾರಸ್ಥರಿಗೆ ತಿಳಿಸಲಾಯಿತು.
ಅಧಿಕಾರಿಗಳು ಈ ನಿರ್ದೇಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಲವರು ಹಣ್ಣಿನ ವ್ಯಾಪಾರವನ್ನು ಬಸ್ ನಿಲ್ದಾಣದ ಹತ್ತಿರವೇ ಮಾಡಲು ಅವಕಾಶ ಕೊಡಬೇಕು ಎಂದರೆ ಮತ್ತೆ ಕೆಲವರು ತರಕಾರಿ ಮಾರುಕಟ್ಟೆಯಲ್ಲಿ ಕುಡಿವ ನೀರು, ಶೌಚಾಲಯ ಸೇರಿ ಯಾವುದೇ ಮೂಲ ಸೌಕರ್ಯ ಇಲ್ಲ ಮತ್ತು ಅದು ದೂರ ಆಗುವುದರಿಂದ ಜನರು ತರಕಾರಿ ಖರೀದಿಸಲು ಅಲ್ಲಿಗೆ ಬರುವುದಿಲ್ಲ ಎಂದು ವಾದ ಮಂಡಿಸಿದರು. ಪುರಸಭೆಯವರು ಎಲ್ಲ ಅನುಕೂಲ ಮಾಡಿಕೊಟ್ಟಲ್ಲಿ ತಮ್ಮ ವ್ಯಾಪಾರ ಸ್ಥಳಾಂತರಿಸುತ್ತೇವೆ ಎಂದು ನಿಲುವು ಸ್ಪಷ್ಟಪಡಿಸಿದರು.
ಒಟ್ಟಾರೆ ಬಹು ಹೊತ್ತಿನವರೆಗೂ ಚರ್ಚೆ ನಡೆದು ಪುರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ತಮ್ಮ ನಿರ್ಧಾರಕ್ಕೆ ಬದ್ಧರಾಗಿರುವುದನ್ನು ಪ್ರಕಟಿಸಿ ಶುಕ್ರವಾರದೊಳಗೆ ಅತಿಕ್ರಮಣ ತೆರುವುಗೊಳಿಸಿ ವ್ಯಾಪಾರವನ್ನು ಸ್ಥಳಾಂತರಿಸದಿದ್ದರೆ ಬಲಪ್ರಯೋಗ ಅನಿವಾರ್ಯವಾಗುತ್ತದೆ ಎಂದು ತಿಳಿಹೇಳಿ ಸಹಕರಿಸುವಂತೆ ಮನವಿ ಮಾಡಿದರು. ಪುರಸಭೆ ಅಧಿ ಕಾರಿಗಳು, ಸದಸ್ಯರು, ಪೊಲೀಸ್ ಸಿಬ್ಬಂದಿ ಮತ್ತು ವಿವಿಧ ತರಹದ ಬೀದಿ ಬದಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ