ಆಲಮಟ್ಟಿ: ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ತೋರಿದ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು
Team Udayavani, Feb 6, 2022, 3:47 PM IST
ಆಲಮಟ್ಟಿ: ಇಲ್ಲಿನ ಶಾಸ್ತ್ರಿ ಸಾಗರ ಜಲಾಶಯದ ಭದ್ರತಾ ಹೊಣೆ ಹೊತ್ತಿರುವ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಪೊಲೀಸ್ ಇನ್ಸಪೆಕ್ಟರೊಬ್ಬರು ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ಹಾಗೂ ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ.
ಕರಿಯಪ್ಪ ಮರನೂರ, ಪ್ರಸ್ತುತ ಆಲಮಟ್ಟಿ ಲಾಲ್ ಬಹದ್ದೂರಶಾಸ್ತ್ರಿ ಸಾಗರದ ಭದ್ರತಾ ಕರ್ತವ್ಯನಿರ್ವಹಿಸುತ್ತಿರುವ ಇವರು ಜಲಾಶಯದ ವಿವಿಧ ಕಾಮಗಾರಿಗಳನ್ನು ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರ ಮೇಲೆ ಪೊಲೀಸ್ ದರ್ಪ ತೋರಿ ಅಸಭ್ಯವಾಗಿ ವರ್ತಿಸಿರುವುದು ಮತ್ತು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು.
ಈ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಪೂರ್ವಭಾವಿ ವಿಚಾರಣೆ ನಡೆಸಿದ ವೇಳೆ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿರುವುದರಿಂದ ಪೊಲೀಸ್ ಇನ್ಸಪೆಕ್ಟರ್ ಮರನೂರ ಅಮಾನತು ಮಾಡಲಾಗಿದೆ.