ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
Team Udayavani, Dec 10, 2019, 12:22 PM IST
ವಿಜಯಪುರ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರು ಜಿಪಂ ಸಿಇಒ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಅಹೋರಾತ್ರಿ ಧರಣಿ ಆರಂಭಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಬಾಕಿ ಉಳಿಸಿಕೊಂಡಿರುವ ಬಾಕಿ ವೇತನ ಮರು ಪಾವತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರನ್ನು ತೆಗೆದು ಹಾಕುವಲ್ಲಿ ನಡೆದಿರುವ ಅವ್ಯವಹಾರ ಎಸಗಿದ ವಾರ್ಡನ್ ಮತ್ತು ತಾಲೂಕು ವಿಸ್ತರಣಾಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಸರಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆ ಸ್ವಚ್ಛತೆ ಕಾವಲು ಮೊದಲಾದ ಡಿ ದರ್ಜೆ ಹುದ್ದೆಗಳಲ್ಲಿ ಹೊರಗುತ್ತಿಗೆ ಸೇವೆ ಸಲ್ಲಿಸುತ್ತಿರುವ ಸುಮಾರು 3,000 ಹೊರ ಸಂಪನ್ಮೂಲ ಸಿಬ್ಬಂದಿಗಳಿಗೆ ಕಳೆದ 8-10 ತಿಂಗಳಿಂದ ವೇತನ ಪಾವತಿಸಿಲ್ಲ. ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ವೇತನ ನೀಡತ್ತಿಲ್ಲ ಹಾಗೂ ಹಬ್ಬ ಹರಿ ದಿನಗಳಲ್ಲಿ ಇರುವ ತಮ್ಮ ಮಕ್ಕಳಿಗೆ ಕನಿಷ್ಠ ಊಟ, ಒದಗಿಸಲಾಗದೆ ಕಣ್ಣೀರು ಹಾಕುತ್ತಿದ್ದಾರೆ. ಈ ಬಡಪಾಯಿ ನೌಕರರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇರುವ ಕಾರಣ ಕುಟುಂಬದ ಹೊಣೆ ನಿರ್ವಹಿಸಲು ಸಂಕಷ್ಟ ಎದುರಿಸುವಂತಾಗಿದೆ.
ಕೂಡಲೇ ಬಾಕಿ ವೇತನವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು. ಕೆಲಸದಿಂದ ತೆಗೆದು ಹಾಕುವ ಭೀತಿ ಎದುರಿಸುತ್ತಿದ್ದ ಇವರನ್ನು ಹೊರಗುತ್ತಿಗೆ ಆಧಾರದಲ್ಲಿ ನಿವೃತ್ತಿವರೆಗೆ ಸೇವೆಯಲ್ಲಿ ಮುಂದುವರಿಸಬೇಕು. ಸರಕಾರಕ್ಕೆ
ಹೆಚ್ಚು ಹೊರೆಯಾಗದಂತೆ ಇವರನ್ನು ನಿವೃತ್ತಿವರೆಗೆ ಸೇವೆಯಲ್ಲಿ ಮುಂದುವರಿಸುವ ಪ್ರಸ್ತಾವನೆ ಈಡೇರಿಕೆಗೆ ಇಲಾಖೆಗಳು ಮುಂದಾಗಬೇಕು. ಹೊರಗುತ್ತಿಗೆ ಸಿಬ್ಬಂದಿಗಳಿಗೆ ಕಾನೂನು ಅನ್ವಯ ರಜೆ, ಪಿಎಫ್, ಇಎಸ್ಐ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಸಂಘಟನೆ ಮುಖಂಡರಾದ ಭೀಮಶಿ ಕಲಾದಗಿ, ಕಾಶೀಮ ಅಲಬಾಳ , ಹುಲಿಗೆಪ್ಪ ಚಲವಾದಿ, ಲಕ್ಷ್ಮಣ ಹಂದ್ರಾಳ, ಪವಾಡೆಪ್ಪ ಚಲವಾದಿ, ಅಭಿಷೇಕ ಚಕ್ರವತಿ, ರೂಪಾ ಬಿರಾದಾರ, ಶರಣಮ್ಮ ಜಟ್ಟಗಿ, ರಾಮವ್ವ ಭಜಂತ್ರಿ, ಮಹಾದೇವಿ ಮಹಾಲದಾರ, ರಜನಿ ಬನಸೋಡೆ, ಯಲ್ಲಮ್ಮ ಮಧಭಾವಿ, ಸವಿತಾ ಸವದಿ, ಮಲ್ಲಮ್ಮ ಬೇಂದ್ರೆ, ಬೋರಮ್ಮ ಹಾದಿಮನಿ, ನಸಿಮಾ ಬೈಗಂಪಲ್ಲಿ ಸೇರಿದಂತೆ ಇತರರು ಪ್ರತಿಭಟನೆ ಮುಂಚೂಣಿಯಲ್ಲಿದ್ದರು.