ಸ್ವತ್ಛ ಭಾರತ ಮಹಾತ್ಮ ಗಾಂಧೀಜಿ ಪರಿಕಲ್ಪನೆ
Team Udayavani, Oct 3, 2017, 12:41 PM IST
ಮುದ್ದೇಬಿಹಾಳ: ದೇಶ ಸ್ವತ್ಛಗೊಳ್ಳಬೇಕಾದರೆ ಸ್ವತ್ಛತೆ ಪ್ರತಿಯೊಬ್ಬರ ಮನೆ, ಮನದಲ್ಲಿ ಮೂಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವ ಸ್ವತ್ಛ ಭಾರತ ಪರಿಕಲ್ಪನೆ ಗಾಂಧೀಜಿ ಅವರದ್ದಾಗಿದೆ ಎಂದು ಶಾಸಕ, ರಾಜ್ಯಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್. ನಾಡಗೌಡ ಹೇಳಿದರು.
ಇಲ್ಲಿನ ನೇತಾಜಿ ನಗರದ ಹರಿಜನ ಕೇರಿಯಲ್ಲಿರುವ ಗಡೇದ ದುರ್ಗಾದೇವಿ ದೇವಸ್ಥಾನ ಆವರಣದಲ್ಲಿ ತಾಲೂಕಾಡಳಿತ ಸೋಮವಾರ ಏರ್ಪಡಿಸಿದ್ದ ಮಹಾತ್ಮಾ ಗಾಂಧಿಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂದು ಗಾಂಧಿ ಹೇಳಿದ ಮಾತುಗಳನ್ನು ಇಂದು ನರೇಂದ್ರ ಮೋದಿ ಪಾಲಿಸುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ
ಇದ್ದಾಗ ಸ್ವತ್ಛ ಭಾರತದ ಕನಸು ನನಸಾಗಿಸಲು ಹಲವು ಯೋಜನೆ ಜಾರಿಗೊಳಿಸಿತ್ತು. ಗಾಂಧಿ ಕನಸಾಗಿದ್ದ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದೇಶದೆಲ್ಲೆಡೆ ಅಸ್ಪೃಶ್ಯತೆ ಎನ್ನುವುದು ಹಂತ ಹಂತವಾಗಿ ನಿರ್ಮೂಲನೆ ಆಗುವಂಥದ್ದು. ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸೀಮಿತ ಆಗಬಾರದು. ಮಹಾತ್ಮರ ಆದರ್ಶ, ತತ್ವಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಜಯಂತಿ ಆಚರಣೆಗೆ ಮಹತ್ವ ಬರುತ್ತದೆ ಎಂದರು.
ಗೋವಾ ವಿಮೋಚನಾ ಹೋರಾಟಗಾರ ಬಿ.ಎಚ್. ಮಾಗಿ ಮಾತನಾಡಿ, ಗಾಂಧೀಜಿ, ಶಾಸ್ತ್ರೀಜಿ ಈ ದೇಶದ ಎರಡು
ಮಹಾನ್ ಕೊಡುಗೆ ಎನ್ನಿಸಿಕೊಂಡಿದ್ದಾರೆ. ಇವರು ಅಂದು ಕಂಡ ಕನಸುಗಳು ಇಂದು ನನಸಾಗುತ್ತಿವೆ ಎಂದರು.
ಎಪಿಎಂಸಿ ನಿರ್ದೇಶಕ ವೈ.ಎಚ್.ವಿಜಯಕರ ಮಹಾತ್ಮ ಗಾಂಧೀಜಿ ಜೀವನ, ಅವರು ನಂಬಿದ್ದ ತತ್ವಗಳು, ಪಾಲಿಸಿದ
ನೀತಿಗಳ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದರು.
ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ. ಚಲವಾದಿ ಗಾಂಧೀಜಿ ಕುರಿತು ಉಪನ್ಯಾಸ ನೀಡಿದರು. ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಿ. ನಾವದಗಿ, ಪುರಸಭೆ ಸದಸ್ಯರಾದ ಪಿಂಟು ಸಾಲಿಮನಿ, ಹನುಮಂತ ಭೋವಿ, ಕೃಷ್ಣಾಜಿ ಪವಾರ, ಮಹಿಬೂಬ ಗೊಳಸಂಗಿ, ತಹಶೀಲ್ದಾರ್ ಎಂ.ಎ.ಎಸ್. ಬಾಗವಾನ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ. ಗಾಂಜಿ ವೇದಿಕೆಯಲ್ಲಿದ್ದರು.
ಸಿಪಿಐ ರವಿಕುಮಾರ ಕಪ್ಪತ್ತನ್ನವರ, ಚಲವಾದಿ ಮಹಾಸಭಾ ಅಧ್ಯಕ್ಷ ರೇವಣೆಪ್ಪ ಚಲವಾದಿ, ಪುರಸಭೆ ಮುಖ್ಯಾ ಧಿಕಾರಿ
ಸುರೇಖಾ ಬಾಗಲಕೋಟೆ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘಟನೆಗಳ ಸದಸ್ಯರು, ಸಾರ್ವಜನಿಕರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಮಿನಿ ವಿಧಾನಸೌಧದಿಂದ ಪ್ರಮುಖ ವೃತ್ತ, ರಸ್ತೆಗಳ ಮೂಲಕ ನೇತಾಜಿ ನಗರದವರೆಗೆ
ಗಾಂಧಿ ಹಾಗೂ ಶಾಸ್ತ್ರೀ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದ ಸ್ಥಳದಲ್ಲಿ ಗಾಂಧೀಜಿ ಮತ್ತು
ಲಾಲ್ ಬಹಾದ್ದೂರ್ ಶಾಸ್ತ್ರೀ ಭಾವಚಿತ್ರಗಳಿಗೆ ಗಣ್ಯರು, ಅಧಿಕಾರಿಗಳು ಪುಷ್ಪಾರ್ಚನೆ ಮಾಡಿದರು. ಪಶು ಸಂಗೋಪನೆ
ಇಲಾಖೆ ಸಹಾಯಕ ನಿರ್ದೇಶಕ ಡಾ| ಎಸ್.ಸಿ. ಚೌಧರಿ ಸ್ವಾಗತಿಸಿದರು. ಸಿಆರ್ಪಿ ಟಿ.ಡಿ. ಲಮಾಣಿ ನಿರೂಪಿಸಿದರು.