ವಿಜಯಪುರ : ಎಸಿಬಿ ಬಲೆಗೆ ಬಿದ್ದ ಕಾರ್ಮಿಕ ಅಧಿಕಾರಿಗಳು
Team Udayavani, Nov 10, 2020, 9:38 PM IST
ಸಾಂದರ್ಭಿಕ ಚಿತ್ರ
ವಿಜಯಪುರ: ಪೆಟ್ರೋಲ್ ಬಂಕ್ ಕಾರ್ಮಿಕರ ಲೈಸೆನ್ಸ್ ನವೀಕರಣ ಮಾಡಲು ಲಂಚ ಪಡೆಯುತ್ತಿದ್ದ ಕಾರ್ಮಿಕ ಇಲಾಖೆಯ ಇಬ್ಬರು ಅಧಿಕಾರಿಗಳು ಎಸಿಬಿ ದಾಳಿಯಲ್ಲಿ ಸೆರೆ ಸಿಕ್ಕಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿರುವ ಕಾರ್ಮಿಕ ಅಧಿಕಾರಿಗಳನ್ನು ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಡೊಂಬರಮತ್ತೂರ, ಕಾರ್ಮಿಕ ನಿರೀಕ್ಷಕಿ ಲಲಿತಾ ರಾಠೋಡ ಎಂದು ಗುರುತಿಸಲಾಗಿದೆ.
ಇಂಡಿ ಪಟ್ಟಣದಲ್ಲಿ ನೀನಾ ಶಹಾ ಎಂಬ ಮಹಿಳೆಗೆ ಸೇರಿದ ಪಾರ್ಶ್ವ ಪೆಟ್ರೋಲ್ ಬಂಕ್ ಇದ್ದು, ಬಂಕ್ ನ ಕಾರ್ಮಿಕರ ಲೈಸೆನ್ಸ್ ನವೀಕರಣ ಮಾಡುವುದು ಇತ್ತು. ಇದಕ್ಕೆ ಕಾರ್ಮಿಕ ಇಲಾಖೆಯ ಈ ಇಬ್ಬರು ಅಧಿಕಾರಿಗಳು ಲೈಸೆನ್ಸ್ ನವೀಕರಣ ಮಾಡಿಕೊಡಲು 10 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ನೀನಾ ಅವರ ಮಗ ರೂಪೇಶ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ಪರಿಣಾಮ 5 ಸಾವಿರ ರೂ. ಪಡೆದಿದ್ದ ಆರೋಪಿ ಅಧಿಕಾರಿಗಳು, ಬಾಕಿ 5 ಸಾವಿರ ರೂ. ಲಂಚದ ಹಣವನ್ನು ಪಡೆಯುವಾಗ ವಿಜಯಪುರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಲಂಚದ ಹಣದ ಸಮೇತ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.