ವಿಜಯಪುರ: ರೈತನ ಎಟಿಎಂ ಕಾರ್ಡ್ ಕದ್ದು ಚಿನ್ನ ಖರೀದಿಸಿದ ಖದೀಮ!
Team Udayavani, Jan 30, 2024, 2:33 PM IST
ಉದಯವಾಣಿ ಸಮಾಚಾರ
ವಿಜಯಪುರ: ಸಾರ್ವಜನಿಕರೇ ಬ್ಯಾಂಕ್ ಎಟಿಎಂ ಕಾರ್ಡ್ ಬಳಸುವಾಗ ಎಚ್ಚರವಹಿಸಿ, ಯಾವುದೇ ಕಾರಣಕ್ಕೂ ಅಪರಿಚಿತರಿಗೆ ಎಟಿಎಂ ಕಾರ್ಡ್ ಕೊಟ್ಟು ಮೋಸ ಹೋಗಿ ಹಣಕಳೆದುಕೊಳ್ಳಬೇಡಿ. ಇಲ್ಲೋರ್ವ ರೈತ ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ಕೊಟ್ಟು ಸಾವಿರಾರೂ ಕಳೆದುಕೊಂಡಿದ್ದಾರೆ.
ಭಟ್ರೇನಹಳ್ಳಿ ರಾಜಣ್ಣ ಎಂಬ ರೈತ ಪಟ್ಟಣದ ಹಳೇ ಕೆನರಾ ಬ್ಯಾಂಕ್ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ ಹಣ ಬಿಡಿಸಿಕೊಳ್ಳಲು ಹೋಗಿದ್ದರು. ಎಟಿಎಂನಿಂದ ಹಣ ಡ್ರಾ ಮಾಡಲು ಬಾರದಿದ್ದಾಗ ಸ್ಥಳದಲ್ಲೇ ಇದ್ದ ಅಪರಿಚಿತ ವ್ಯಕ್ತಿಯೊಬ್ಬರಿಗೆ ತನ್ನ ಎಟಿಎಂ ಕಾರ್ಡ್ ಕೊಟ್ಟು ಹಣ ತೆಗೆದು ಕೊಡುವಂತೆ ಕೋರಿಕೊಂಡಿದ್ದಾರೆ.
ಕೂಡಲೇ ಆತ 10 ಸಾವಿರ ರೂ. ನಗದು ಡ್ರಾ ಮಾಡಿಕೊಟ್ಟ ಆತ ಬೇರೆ ಎಟಿಎಂ ಕಾರ್ಡ್ ಕೊಟ್ಟು ತೆರಳಿದ್ದಾನೆ. ಇದನ್ನು ಗಮನಿಸಿದ ರೈತ ರಾಜಣ್ಣ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ಕೊಡಲು ಹೋಗಿದ್ದಾರೆ. ಈ ವೇಳೆ ಪೊಲೀಸರು ಸೂಚನೆ ಮೇರೆಗೆ ಕೆನರಾ ಬ್ಯಾಂಕಿಗೆ ಹೋಗಿ ಎಟಿಎಂ ಕಾರ್ಡ್ ಅನ್ನು ಸ್ಥಗಿತಗೊಳಿ ಸುವಷ್ಟರಲ್ಲಿ ಚಿನ್ನಾಭರಣ ಅಂಗಡಿಯಲ್ಲಿ ಎಟಿಎಂ ಕಾರ್ಡ್ ಬಳಸಿ ಬರೋಬ್ಬರಿ 40,500 ಮೌಲ್ಯದ ಚಿನ್ನ ಖರೀದಿಸಲಾಗಿದೆ ಎಂದು ಗೊತ್ತಾಗಿದೆ. ಘಟನೆ ಸಂಬಂಧ ವಂಚನೆಗೊಳಗಾದ ರೈತ ರಾಜಣ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಗಿದ್ದೇನು?
*ವಿಜಯಪುರ ಪಟ್ಟಣದಲ್ಲಿ ಹಣ ಡ್ರಾಗೆ ಎಟಿಎಂ ತೆರಳಿದ್ದ ರೈತ
*ಎಟಿಎಂನಲ್ಲಿ ಹಣ ಬರದಿದ್ದಾಗ ಅಲ್ಲೇ ಇದ್ದ ವ್ಯಕ್ತಿಗೆ ಕಾರ್ಡ್ ಕೊಟ್ಟಿದ್ದಾರೆ
*ಆ ಅಪರಿಚಿತ ವ್ಯಕ್ತಿ 10 ಸಾವಿರ ರೂ. ಬಿಡಿಸಿಕೊಟ್ಟು ಕಾರ್ಡ್ ಬದಲಿಸಿದ್ದಾನೆ
*ಈ ವೇಳೆ ಕಾರ್ಡ್ ಅದಲು ಬದಲು ಆಗಿರುವುದು ರೈತನಿಗೆ ಗೊತ್ತಾಗಿದೆ
*ಕೂಡಲೇ ಕೆನರಾ ಬ್ಯಾಂಕ್ಗೆ ಹೋಗಿ ಕಾರ್ಡ್ ಲಾಕ್ ಮಾಡಿಸಿದ್ದಾರೆ
* ಅಷ್ಟರೊಳಗೆ ಅಪರಿಚಿತ ವ್ಯಕ್ತಿ ಕಾರ್ಡ್ ಬಳಸಿ ಚಿನ್ನ ಖರೀದಿಸಿದ್ದಾನೆ
*ಜ್ಯುವೆಲ್ಲರಿಯಲ್ಲಿ 40,500 ಮೌಲ್ಯದ ಚಿನ್ನಾಭರಣ ಖರೀದಿಸಿದ ಅಪರಿಚಿತ