ವಿಶ್ವದಲ್ಲಿಯೇ ಶ್ರೀಮಂತ ಪರಂಪರೆ ನಮ್ಮದು
Team Udayavani, Aug 22, 2017, 3:03 PM IST
ಇಂಡಿ: ಭಾರತ ದೇಶ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಶ್ರೀಮಂತ ಪರಂಪರೆ ಹೊಂದಿದ್ದು, ಬೇರೆ ದೇಶಗಳು ನಮ್ಮ ಆಚಾರ ವಿಚಾರಗನ್ನು ಅನುಕರಣಿಸುತ್ತಿವೆ ಎಂದು ಶಾಸಕ ಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ ತಡವಲಗಾ ಗ್ರಾಮದಲ್ಲಿ ನೂತನವಾಗಿ ಮಹಾಲಕ್ಷ್ಮೀ ದೇವಸ್ಥಾನದ ಕಳಸಾರೋಹಣ ಮತ್ತು ಮಲ್ಲಿಕಾರ್ಜುನ ದೇವಾಲಯದ ಕಳಸಾರೋಹಣ ಹಾಗೂ ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಭಾರತ ದೇಶ ಭಾವೈಕ್ಯ ದೇಶವಾಗಿದ್ದು ನಾಡಿನ ಪುಣ್ಯ ಪುರುಷರ ಧಾರ್ಮಿಕ ಆಧ್ಯಾತ್ಮಿಕ ಕಾರ್ಯಕ್ರಮಗಳು ನಿರಂತವಾಗಿ ನಡೆಯುವ ಮೂಲಕ ಧರ್ಮವನ್ನು ರಕ್ಷಿಸುವ ಕಾರ್ಯಮಾಡುತ್ತಿರುವುದು ಶ್ಲಾಘನೀಯವಾಗಿದೆ. ಮನುಷ್ಯ ಜೀವನ ಸಾರ್ಥಕವಾಗಬೇಕಾದರೆ ಧರ್ಮದ ದಾರಿಯಲ್ಲಿ ನಡೆಯಬೇಕು. ಧರ್ಮವನ್ನು ಯಾರು ರಕ್ಷಿಸುತ್ತಾರೆಯೂ ಅಂತಹವರಿಗೆ ದೇವರು ಕಾಪಾಡುತ್ತಾನೆ ಎಂದು ಹೇಳಿದರು. ಇಂದು ಅತ್ಯಂತ ಕಷ್ಟದಲ್ಲಿರುವರೆಂದರೆ ರೈತಾಪಿ ವರ್ಗ. ಸರಕಾರಗಳು ಮಾಡುವ ಯೋಜನೆಗಳು ಶಾಶ್ವತವಲ್ಲ. ಭಗವಂತ ಇಂದು ರೈತರಿಗೆ ಮಳೆಯನ್ನು ಕರುಣಿಸಲಿ. ಈಗ ಮೇಘರಾಜನ ಅವಕೃಪೆಯಿಂದಾಗಿ ಈ ಭಾಗದ ರೈತರ ಗೋಳು ಹೇಳತೀರದಾಗಿದೆ. ಇದನ್ನು ಅರಿತು ಭೀಕರಬರ ಎಂದು ಸರಕಾರದ ಮಟ್ಟದಲ್ಲಿ ಇಂಡಿ ಗುರುತಿಸುವ ಕೆಲಸ ಮಾಡಿದ್ದೇನೆ ಅಲ್ಲದೆ ಇಂದು ರೈತರ ಅನುಕೂಲಕ್ಕಾಗಿ ನಿಂಬೆ ಅಭಿವೃದ್ಧಿ ಮಂಡಳಿ ಮತ್ತು ಕೃಷಿ ವಿಜ್ಞಾನ ಕೇಂದ್ರ ತಾಲೂಕಿನಲ್ಲಿ ಸ್ಥಾಪಿಸಲಾಗಿದೆ. ಬಹುದಿನಗಳಿಂದ ನನೆಗುದಿಗೆ ಬಿದ್ದ ಭೀಮಾಶಂಕರ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲಾಗಿದೆ. ತಾಲೂಕಿನ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ, ಕರೆತುಂಬವ ಯೋಜನೆ ಮತ್ತು ಕಾಲುವೆಗಳ ನಿರ್ಮಾಣ ಕಾರ್ಯ ಬರದಿಂದ ನಡೆದಿದೆ. ರಾಜಕೀಯ ಶಾಶ್ವತ ಅಲ್ಲ ಇಷ್ಟೆಲ್ಲಾ ಕೆಲಸ ಕಾರ್ಯಗಳಿಗೆ ತಾಲೂಕಿನ ಮತದಾರರು ನೀಡಿರುವ ಶಕ್ತಿಯೇ ಕಾರಣ ಎಂದರು. ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾತನಾಡಿ, ಶಾಸಕರು ತಾಲೂಕಿನಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ತಾವೇ ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದರೆ ತಾಲೂಕಿನ ಕೃಷಿ ವಿಜ್ಞಾನ ಕೇಂದ್ರ, ರೈಲ್ವೆ ಓವರ್ ಬ್ರಿಡ್ಜ್, ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಗಳನ್ನು ಬಿಜೆಪಿ ಸರ್ಕಾರದ ಕೇಂದ್ರ ಸಚಿವ ರಮೇಶ ಜಿಗಜಿಣಗಿಯವರು ಮಾಡಿದ್ದಾರೆ. ಆದರೆ ಶಾಸಕರು ನಾನೇ ಮಾಡಿದ್ದೇನೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಶಾಸಕರು ಚುನಾವಣೆ ಸಮೀಪಿಸುತ್ತಿದ್ದುದನ್ನು ಮನಗಂಡು ಪ್ರಚಾರ ಗಿಟ್ಟಿಸಿಕೊಳ್ಳಲು ಎಲ್ಲ ಕಾಮಗಾರಿ ಮಾಡಿದ್ದೇನೆಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಶಿವಾನಂದ ಶಾಸ್ತ್ರೀಗಳು ಮಾತನಾಡಿದರು.
ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ತಮ್ಮಣ್ಣ ಪೂಜಾರಿ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ
ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಪುರಸಭೆ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ತಾಪಂ ಅಧ್ಯಕ್ಷ ರುಕ್ಮದ್ದಿನ್ ತದ್ದೇವಾಡಿ, ಬಿ.ಡಿ. ಪಾಟೀಲ, ಎಸ್.ಎ. ಪಾಟೀಲ, ಎಂ.ಎಸ್. ಬ್ಯಾಳಿ, ರಾಜಶೇಖರ ಪೂಜಾರಿ, ಡಾ|ಕಾಂತು ಇಂಡಿ, ಯಲ್ಲವ್ವ ಬ್ಯಾಳಿ, ಮಹಾದೇವ ಪೂಜಾರಿ, ಭೀಮಣ್ಣ ಕೌಲಗಿ, ಸುಭಾಷ್ ಕಲ್ಲೂರ, ಅಶೋಕ ಮಿರ್ಜಿ, ಮತ್ತಪ್ಪ ಪೋತೆ, ದಯಾಸಾಗರ ಸಂಗೋಗಿ ವೇದಿಕೆಯಲ್ಲಿದ್ದರು. ಬಾಹುರಾಜ ತಲಗಟ್ಟಿ ಸ್ವಾಗತಿಸಿದರು. ಸಿದ್ದಣ್ಣ ಮಸಳಿ ನಿರೂಪಿಸಿದರು. ತಮ್ಮಣ್ಣ ಪೂಜಾರಿ ವಂದಿಸಿದರು.