ಕೃಷ್ಣೆಗೆ ಬಾಗಿನ ಅರ್ಪಣೆ ಯಾವಾಗ? ಕಾವೇರಿಗೆ ಕೊಡುವ ಮಹತ್ವ ಕೃಷ್ಣೆಗೇಕಿಲ್ಲ
6 ಗಂಟೆ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮ ರದ್ದು ಎಂದು ಘೋಷಣೆ ಮಾಡಿದ್ದರು.
Team Udayavani, Aug 6, 2021, 6:28 PM IST
ಆಲಮಟ್ಟಿ: ರಾಜ್ಯದ ಶೇ.60 ಭೂಮಿ ನೀರಾವರಿಗೊಳಪಡಿಸುವ ಬೃಹತ್ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸ್ಥಾನ ಆಲಮಟ್ಟಿಯಲ್ಲಿ ಕೃಷ್ಣೆಗೆ ಅಡ್ಡಲಾಗಿರುವ ಲಾಲ ಬಹದ್ದೂರ್ ಶಾಸ್ತ್ರಿ ಜಲಾಶಯ ತುಂಬಿ ನಿಂತಿದೆ. ಆದರೆ ತುಂಬಿದ ಕೃಷ್ಣೆಗೆ ಮುಖ್ಯಮಂತ್ರಿ ಯಾವಾಗ ಬಾಗಿನ ಅರ್ಪಿಸುತ್ತಾರೆ ಎಂದು ಕೃಷ್ಣೆಯ ಒಡಲ ಮಕ್ಕಳು ಕಾತರದಿಂದ ಕಾಯುತ್ತಿದ್ದಾರೆ.
ಶಾಸ್ತ್ರಿ ಜಲಾಶಯಕ್ಕೆ ಮಹಾಪೂರ ಬಂದು ತಿಂಗಳುಗಟ್ಟಲೇ ಲಕ್ಷಾಂತರ ಕ್ಯೂಸೆಕ್ ನೀರು ಜಲಾಶಯದಿಂದ ಹೊರಬಿಡಲಾಗಿತ್ತು. ಇದೀಗ ಕೃಷ್ಣೆ ಒಡಲು ತುಂಬಿದೆ. ಸರ್ಕಾರ ಕೃಷ್ಣೆಗೆ ಸರ್ಕಾರದಿಂದ ಬಾಗಿನ ಅರ್ಪಿಸಲು ಮೀನಮೇಷ ಎಣಿಸುವುದು ಪ್ರತಿ ಬಾರಿಯೂ ನಡೆಯುತ್ತದೆ. ಆದರೆ ದಕ್ಷಿಣದಲ್ಲಿ ಹರಿದಿರುವ ಕಾವೇರಿ ನದಿ ತುಂಬುವ ವೇಳೆಯಲ್ಲಿ ಜಲಾಶಯಕ್ಕೆ ಹಿಂದಿನ ಎಲ್ಲ ಸರ್ಕಾರಗಳು ಬಾಗಿನ ಅರ್ಪಿಸುತ್ತಲೇ ಬಂದಿವೆ. ಕೃಷ್ಣೆ ತುಂಬಿದ್ದರೂ ಬಾಗಿನ ಅರ್ಪಿಸಲು ಇಲ್ಲಸಲ್ಲದ ನೆಪಗಳು ಬರುತ್ತವೆ. ಇದರಿಂದ ಕೃಷ್ಣೆಯ ಒಡಲ ಮಕ್ಕಳು ಸರ್ಕಾರಗಳು ಕಾವೇರಿಗೆ ಕೊಡುವ ಮಹತ್ವ ಕೃಷ್ಣೆಗೇಕಿಲ್ಲ? ಎಂದು ಪ್ರಶ್ನಿಸುತ್ತಿದ್ದಾರೆ.
ಬರದ ನಾಡಿನ ದಾಹ ನೀಗಿಸಲು ಲಾಲ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಆಗಿನ ಪ್ರಧಾನಮಂತ್ರಿ ಶಾಸ್ತ್ರೀಜಿ 1964 ಮೇ 22ರಂದು ಜಲಾಶಯಕ್ಕೆ ಭೂಮಿಪೂಜೆ
ನೆರವೇರಿಸಿದ್ದರು. ನಂತರ ಕಟ್ಟಡದ ಕಾಮಗಾರಿ ಹಾಗೂ ಭೂಸ್ವಾ ಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಯೋಜನೆಗಳು ಆಮೆಗತಿಯಲ್ಲಿ ಸಾಗಿದ್ದರ ಪರಿಣಾಮ ಜಲಾಶಯ ಕಟ್ಟಡ ನಿರ್ಮಾಣ ಕಾಮಗಾರಿಗಳು 2000ನೇ ಸಾಲಿನಲ್ಲಿ ಪೂರ್ಣಗೊಂಡಿದ್ದರೂ 2002ರಿಂದ ನೀರು ಸಂಗ್ರಹಿಸಲು ಆರಂಭಿಸಲಾಯಿತು.
2006ರಲ್ಲಿ ಆ.21ರಂದು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್ .ಡಿ. ಕುಮಾರಸ್ವಾಮಿಯವರು ರಾಷ್ಟ್ರಪತಿಯಾಗಿದ್ದ ಡಾ| ಎ.ಪಿ.ಜೆ. ಅಬ್ದುಲ ಕಲಾಂ ಅವರಿಂದ ಜಲಾಶಯ ಲೋಕಾರ್ಪಣೆಗೊಳಿಸಿದ್ದರು.
ಕಳೆದ 17 ವರ್ಷಗಳಲ್ಲಿ ನೀರಿನ ಭರ್ತಿ: 519.60 ಗರಿಷ್ಠ ಎತ್ತರದಲ್ಲಿ ಗರಿಷ್ಠ 123.081 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 2002ರಲ್ಲಿ ಸೆ.18ರಲ್ಲಿ ಸಂಪೂರ್ಣ ತುಂಬಿದ ಜಲಾಶಯ ನಂತರ 2003ರಲ್ಲಿ ಸೆ.19, 2004ರಲ್ಲಿ ಸೆ.9, 2005 ನ.2, 2006ರಲ್ಲಿ ಸೆ.20, 2007ರಲ್ಲಿ ಆ.31, 2008ರಲ್ಲಿ ಸೆ.5, 2009ರಲ್ಲಿ ಆ.25, 2010ರಲ್ಲಿ ಸೆ.16, 2011ರಲ್ಲಿ ಸೆ.14, 2012ರಲ್ಲಿ ಸೆ.13, 2013ರ ಆ.9, 2014ರಲ್ಲಿ ಆ.18, 2016ರಲ್ಲಿ ಸೆ.2, 2017ರಲ್ಲಿ ಆ.1, 2018ರಲ್ಲಿ ಆ.2 ಹಾಗೂ 2019ರಲ್ಲಿ ಆ.23ರಂದು ಸಂಪೂರ್ಣ ಭರ್ತಿಯಾಗಿದೆ. 2015ರಲ್ಲಿ ಜಲಾಶಯವು ಸಂಪೂರ್ಣ ಭರ್ತಿಯಾಗದೇ ಗರಿಷ್ಠವಾಗಿ ಸೆ.25ರಂದು ಗರಿಷ್ಠ 519.60 ಮೀ ಎತ್ತರದ ಜಲಾಶಯದಲ್ಲಿ 515.82 ಮೀ. ಸಂಗ್ರಹವಾಗಿ ಜಲಾಶಯದಲ್ಲಿ 71.806 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. 2002ರಿಂದ ಜಲಾಶಯದಲ್ಲಿ ಗರಿಷ್ಠ ನೀರು ಸಂಗ್ರಹ ಆರಂಭಿಸಿದಾಗಿನಿಂದ ಜಲಾಶಯಕ್ಕೆ 2002ರಿಂದ 2004ರವರೆಗೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ, 2005ರಲ್ಲಿ ದಿ. ಧರ್ಮಸಿಂಗ್, 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ, 2007ರಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ,
2008ರಿಂದ 2010ರವರೆಗೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ, 2011ರಲ್ಲಿ ಮುಖ್ಯಮಂತ್ರಿ ಸದಾನಂದಗೌಡ, 2012ರಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, 2013 ಹಾಗೂ 2014ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಗಿನ ಅರ್ಪಿಸಿದ್ದರು.
ಆದರೆ 2015ರಲ್ಲಿ ಜಲಾಶಯ ತುಂಬದಿರುವುದರಿಂದ ಬಾಗಿನ ಅರ್ಪಣೆಯಾಗಲಿಲ್ಲ, 2016ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಮಗ ರಾಕೇಶ ಅಕಾಲಿಕ ನಿಧನದಿಂದ ಬಾಗಿನ ಅರ್ಪಣೆಗೆ ಆಗಮಿಸಲಿಲ್ಲ. 2017ರಲ್ಲಿ ಸಿದ್ದರಾಮಯ್ಯನವರು ಕೃಷ್ಣೆಗೆ ಬಾಗಿನ ಅರ್ಪಿಸಿದ್ದರು.
ಮಳೆ ನೆಪ ಹೇಳಿ ರದ್ದು: 2018ರಲ್ಲಿ ಬಾಗಿನ ಅರ್ಪಣೆಗೆ ದಿನಾಂಕ ನಿಗದಿಯಾಗಿದ್ದರೂ ಹುಬ್ಬಳ್ಳಿಯಲ್ಲಿ ಮಳೆಯಾಗಿದ್ದರಿಂದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹಾಗೂ ನೀರಾವರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ ಬಾಗಿನ ಅರ್ಪಿಸಲು ಆಗಮಿಸುತ್ತಾರೆ ಎಂದು ವಿಜೃಂಭಣೆ ಸ್ವಾಗತಕ್ಕಾಗಿ ಇಡೀ ಪ್ರದೇಶವನ್ನು ಅಲಂಕರಿಸಲಾಗಿತ್ತು. ಸಮಾರಂಭಕ್ಕೆ ಬರದೇ ಮಳೆ ನೆಪ ಹೇಳಿ ರದ್ದುಗೊಳಿಸಿದ್ದರಿಂದ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧಿಧೀಶರು ಹಾಗೂ ರೈತರು ಮುಖ್ಯಮಂತ್ರಿಗಳ ನಡೆ ತೀವ್ರವಾಗಿ ಖಂಡಿಸಿದ್ದರು.
2019ರ ಅ.5ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತುಂಬಿದ ಕೃಷ್ಣೆಯ ಜಲನಿಧಿಗೆ ಬಾಗಿನ ಅರ್ಪಿಸಿದ್ದರು. 2020 ಅ.22ರಂದು ತುಂಬಿದ ಕೃಷ್ಣೆಗೆ ನಿಗದಿಯಾಗಿದ್ದ ಬಾಗಿನ ಅರ್ಪಣೆ ಹವಾಮಾನ ವೈಪರೀತ್ಯದಿಂದ ನೆರೆ ಹಾವಳಿಗೆ ತುತ್ತಾಗಿದ್ದ ಪ್ರದೇಶ ವೀಕ್ಷಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆಲಮಟ್ಟಿಗೆ ಆಗಮಿಸಿ ಬಾಗಿನ ಅರ್ಪಿಸಲಿದ್ದಾರೆ ಎಂದು ಜಿಲ್ಲೆಯ ಶಾಸಕರುಗಳು, ರೈತರು, ಮಠಾಧೀಶರು, ಅಭಿಮಾನಿಗಳು ಆಗಮಿಸಿದ್ದರು. ಆದರೆ ಸಂಜೆ 6 ಗಂಟೆ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮ ರದ್ದು ಎಂದು ಘೋಷಣೆ ಮಾಡಿದ್ದರು. ಇದರಿಂದ ಕೃಷ್ಣೆಯ ಒಡಲ ಮಕ್ಕಳಿಗೆ ನಿರಾಶೆಯಾಗುವಂತಾಗಿತ್ತು.
ರಾಜ್ಯದಲ್ಲಿ ಉದ್ದವಾಗಿ ಹರಿದು 6.59 ಲಕ್ಷ ಎಕರೆ ಜಮೀನಿಗೆ ಹಾಗೂ 12 ಜಿಲ್ಲೆಗಳಿಗೆ ಕುಡಿವ ನೀರು ಪೂರೈಕೆ, ಜಲವಿದ್ಯುತ್ ಘಟಕಗಳಿಗೆ, ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರ ಹಾಗೂ ವಿವಿಧ ಕಾರ್ಖಾನೆಗಳಿಗೆ ಸೇರಿದಂತೆ ರಾಜ್ಯದ ಬಹುಭಾಗ ನೀರಿನ ದಾಹ ನೀಗಿಸುವ ಕೃಷ್ಣೆಗೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಲಮಟ್ಟಿಗೆ ಬಾಗಿನ ಅರ್ಪಿಸುವರೋ? ಎಂಬುದನ್ನು ಕಾದು ನೋಡಬೇಕು.
ಜಲಾಶಯ ಭರ್ತಿಯಾಗುತ್ತಿದ್ದು, ಭರ್ತಿಯಾದ ನಂತರ ಮುಖ್ಯಮಂತ್ರಿಗಳು ದಿನ ನಿಗದಿ ಮಾಡಲಿದ್ದಾರೆ.
ಎಚ್. ಸುರೇಶ, ಮುಖ್ಯ ಅಭಿಯಂತರ,
ಕೆಬಿಜೆಎನ್ನೆಲ್ ಆಲಮಟ್ಟಿ ವಲಯ
ಜಲಾಶಯದಿಂದ ನೀರು ಹೊರಬಿಡದಿದ್ದರೆ ಜಲಾಶಯ ಭರ್ತಿಯಾಗುತ್ತದೆ. ಶೀಘ್ರ ಮುಖ್ಯಮಂತ್ರಿಗಳು ಕೃಷ್ಣೆಗೆ ಬಾಗಿನ ಅರ್ಪಿಸಬೇಕು.
ಅರವಿಂದ ಕುಲಕರ್ಣಿ, ಜಿಲ್ಲಾ ಪ್ರಧಾನ
ಕಾರ್ಯದರ್ಶಿ, ಅಖಂಡ ಕರ್ನಾಟಕ ರೈತ ಸಂಘ
*ಶಂಕರ ಜಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್