ಪೊಲೀಸ್ ಇಲಾಖೆ ರೀತಿ ಅರಣ್ಯ ಇಲಾಖೆಯಲ್ಲೂ ಮೀಸಲು ಪಡೆ
Team Udayavani, Oct 28, 2020, 1:29 PM IST
ಚಾಮರಾಜನಗರ: ಪೊಲೀಸ್ ಇಲಾಖೆಯಲ್ಲಿ ಮೀಸಲು ಪಡೆ ಇರುವಂತೆ ಜಿಲ್ಲೆಯ ಅರಣ್ಯ ಇಲಾಖೆಯಲ್ಲೂ ತುರ್ತು ಸಂದರ್ಭಗಳನ್ನು ಎದುರಿಸಲು ಡಿಆರ್ಎಫ್ಓಗಳನ್ನೊಳಗೊಂಡ ಮೀಸಲು ಪಡೆಯನ್ನು ರಚಿಸಲಾಗಿದೆ.
ಆರು ಮಂದಿ ಉಪ ವಲಯ ಅರಣ್ಯಾಧಿಕಾರಿ (ಡಿಆರ್ ಎಫ್ಓ) ಗಳನ್ನೊಳಗೊಂಡ ಮೀಸಲು ತಂಡವೊಂದನ್ನು ಪ್ರಸ್ತುತ ಬಿಳಿಗಿರಿ ರಂಗನಾಥಸ್ವಾಮಿ ಅರಣ್ಯದಲ್ಲಿ ನಿಯೋಜಿಸಲಾಗಿದೆ. ಈ ತಂಡ ಬಿಆರ್ಟಿ ಮಾತ್ರವಲ್ಲದೇ ಮಲೆ ಮಹದೇಶ್ವರ, ಕಾವೇರಿ ವನ್ಯಧಾಮಗಳಲ್ಲೂ ಅಗತ್ಯ ಬಿದ್ದಾಗ ಕಾರ್ಯ ನಿರ್ವಹಿಸಲಿದೆ. ಈ ಮೀಸಲು ತಂಡ ರಚನೆ ಮುಖ್ಯ ಅರಣ್ಯ
ಸಂರಕ್ಷಣಾಧಿಕಾರಿ ಮನೋಜ್ಕುಮಾರ್ ಅವರ ಪರಿಕಲ್ಪನೆಯಲ್ಲಿ ಮೂಡಿಬಂದದ್ದು. ಜಿಲ್ಲೆಯ ಅರಣ್ಯಗಳಲ್ಲಿ ಇಲಾಖಾ ಸಿಬ್ಬಂದಿ ವಿವಿಧ ಕರ್ತವ್ಯಗಳಲ್ಲಿ ನಿರತರಾಗಿರುತ್ತಾರೆ. ಇಂಥ ಸಂದರ್ಭದಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದಾಗ, ಅರಣ್ಯಗಳಲ್ಲಿ ಮರಗಳ್ಳತನ, ಕಳ್ಳಬೇಟೆ ನಡೆದಾಗ ತಕ್ಷಣ ಧಾವಿಸಿ ಕಾರ್ಯಾಚರಣೆಯಲ್ಲಿ ತೊಡಗಲು ಒಂದು ಪ್ರತ್ಯೇಕ ಮೀಸಲು ಪಡೆ ಇರುವುದು ಅಗತ್ಯ ಎಂದು ಮನಗಂಡು ಅವರು ಈ ತಂಡವನ್ನು ರಚಿಸಿದ್ದಾರೆ. ಜತೆಗೆ ಚಾ.ನಗರ ವೃತ್ತಕ್ಕೆ ಹೆಚ್ಚುವರಿಯಾಗಿ 90 ಉಪ ವಲಯ ಅರಣ್ಯಾಧಿಕಾರಿಗಳ ಹುದ್ದೆಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ.
……………………………………………………………………………………………………………………………………………………………..
ಬೈಕ್ ಷೋರೂಂನಲ್ಲಿ ಕಳ್ಳತನ :
ಯಳಂದೂರು: ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಎಸ್ ಜಿಎಂ ಬಜಾಜ್ ಬೈಕ್ ಷೋ ರೂಂನಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದೆ. ಮಹದೇಶ್ವರ ಚಿತ್ರಮಂದಿರದ ಮುಂಭಾಗದಲ್ಲಿರುವ ಈ ಷೋ ರೂಂನಲ್ಲಿ ರೊಲಿಂಗ್ ಶಟರ್ನ ಬಾಗಿಲು ತೆರೆದು ಕಳ್ಳತನ ಮಾಡಲಾಗಿದೆ. ಇಲ್ಲಿನ ಕ್ಯಾಶ್ ಕೌಂಟರ್ನಲ್ಲಿದ್ದ 2 ಲಕ್ಷ ರೂ. ಕದ್ದಿದ್ದಾರೆ ಎಂದು ಮಾಲೀಕರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಿಂಗಳಲ್ಲಿ 3ನೇ ಕಳ್ಳತನ: ಅ.20ರಂದು ಪಟ್ಟಣದ ಕೆ.ಕೆ. ರಸ್ತೆಯಲ್ಲಿರುವ ಯುಆರ್ಎಸ್ ಹೀರೊ ಬೈಕ್ಷೋರೂಂನಲ್ಲೂ ಇದೇ ತರಹ ಕಳ್ಳನತ ನಡೆದಿತ್ತು. ಇಲ್ಲೂ ಕೂಡ ಹಣವನ್ನು ಮಾತ್ರ ದೋಚಿಕೊಂಡು ಹೋಗಲಾಗಿತ್ತು. ಅಲ್ಲದೇ ಅ.13ರ ರಾತ್ರಿ ಪಟ್ಟಣದ ವರಾಹಸ್ವಾಮಿ ದೇಗುಲದಲ್ಲಿ ಗಂಧದ ಮರವನ್ನು ಕಳ್ಳತನ ಮಾಡಲಾಗಿದೆ. ಇತ್ತೀಚೆಗೆ ಪಟ್ಟಣದಲ್ಲಿ ನಿರಂತರವಾಗಿ ಕಳ್ಳತನ ನಡೆಯುತ್ತಿದ್ದು,
ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕಿದೆ. ಅಲ್ಲದೆ ರಾತ್ರಿ ಪಾಳಿಯ ಗಸ್ತು ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಬೇಕು. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.