ವರ್ಷ ಕಳೆದರೂ ಚಾ.ನಗರಕ್ಕೆ ಬಾರದ ಸಿಎಂ
ಕಳೆದ ಬಾರಿ ಸಿಎಂ ಆಗಿದ್ದಾಗ ಚಾ.ನಗರದತ್ತ ತಲೆ ಹಾಕದ ಬಿಎಸ್ವೈ
Team Udayavani, Nov 23, 2020, 4:27 PM IST
ಚಾಮರಾಜನಗರ: ಮುಖ್ಯಮಂತ್ರಿಯಾದವರು ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡಿದರೆ ಆರು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಗೆ ಜೋತು ಬಿದ್ದು ಕಳೆದ ಸಲ ಮುಖ್ಯಮಂತ್ರಿ ಆಗಿದ್ದಾಗ ಬಿ.ಎಸ್. ಯಡಿಯೂರಪ್ಪ ನಗರಕ್ಕೆ ಭೇಟಿ ನೀಡಲೇ ಇಲ್ಲ. ಸಿಎಂಆಗಿ ಒಂದು ವರ್ಷ ಕಳೆದರೂ ಚಾಮರಾಜನಗರಕ್ಕೆ ಬಂದಿಲ್ಲ. ಈಗ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದು, ಈ ಅವಧಿಯಲ್ಲೂ ಚಾ.ನಗರಕ್ಕೆ ಬರಲಾರರೇನೋ? ಎಂಬ ಸಂಶಯ ಮೂಡಿಸಿದ್ದಾರೆ.
ನ.25-26ರಂದು ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದು 1 ವರ್ಷವಾದರೂ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಯಡಿಯೂರಪ್ಪ ಭೇಟಿ ನೀಡಿಲ್ಲ. ಕಳೆದ ಬಾರಿ ಸಿಎಂ ಆಗಿದ್ದಾಗಲೂ ಬಂದಿರಲಿಲ್ಲ.ಈ ಬಾರಿಯಾದರೂ ಭೇಟಿ ನೀಡುತ್ತಾರೆ ಎಂದು ಜನತೆ ನಿರೀಕ್ಷಿಸಿದ್ದಾರೆ. ಆದರೆ ಮಲೆ ಮಹದೇಶ್ವರ ಬೆಟ್ಟದ ಭೇಟಿ ಪ್ರವಾಸದಲ್ಲಿ ಜಿಲ್ಲಾಕೇಂದ್ರದಲ್ಲಿ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳದಿರುವುದನ್ನು ಗಮನಿಸಿದರೆ ಈಅವಧಿಯಲ್ಲೂ ಅವರು ಚಾ.ನಗರಕ್ಕೆ ಬರುವ ಸಾಧ್ಯತೆ ಕಡಿಮೆಯೆಂದೇ ಪ್ರತಿಪಕ್ಷಗಳು ಟೀಕಿಸುತ್ತಿವೆ.
11 ಬಾರಿ ಸಿದ್ದು ಭೇಟಿ: ಈ ಮೂಢನಂಬಿಕೆಯನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇಸುಳ್ಳಾಗಿಸಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದಾಗ ಚಾಮರಾಜನಗರಕ್ಕೆ ಒಟ್ಟು 11 ಬಾರಿ ಭೇಟಿ ನೀಡಿ,ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಅಲ್ಲದೇ ಮುಖ್ಯಮಂತ್ರಿಯಾಗಿ ತಮ್ಮ ಸಂಪೂರ್ಣ ಅಧಿಕಾರಾವಧಿಯನ್ನು ಸಹ ಅವರುಪೂರೈಸಿದ್ದರು. ತನ್ಮೂಲಕ ಅಧಿಕಾರ ಚ್ಯುತಿಗೆ ಒಂದು ಪಟ್ಟಣವನ್ನು ಹೊಣೆ ದೊಡ್ಡ ಮೂಢನಂಬಿಕೆಯೊಂದು ಕೊನೆಗೊಂಡಂತಾಗಿದೆ ಎಂದೇ ಇಲ್ಲಿನ ಜನರು ಭಾವಿಸಿದ್ದರು.
ಆದರೆಈ ಮೂಢ ನಂಬಿಕೆ ಸುಳ್ಳಾದ ಮೇಲೂ, ಯಡಿಯೂರಪ್ಪನವರು ಚಾಮರಾಜನಗರಕ್ಕೆ ಭೇಟಿ ನೀಡಲುಹಿಂದೇಟು ಹಾಕುತ್ತಿದ್ದಾರೆ. ಹಿಂದಿನ ಅವಧಿಯಲ್ಲಾದಂತೆ ಚಾಮರಾಜನಗರ ಜಿಲ್ಲೆಯ ಇತರೆ ಭಾಗಗಳಿಗೆ ಭೇಟಿ ನೀಡಿ, ಜಿಲ್ಲಾ ಕೇಂದ್ರದತ್ತ ಮುಖ ಮಾಡದಿರುವ ಸಾಧ್ಯತೆಗಳೇ ಹೆಚ್ಚಾಗಿವೆ.
ಮೌಡ್ಯ ಬೇಡ: ಈಗ ಯಡಿಯೂರಪ್ಪನವರೂ ಈ ಮೂಢನಂಬಿಕೆಯನ್ನು ನಂಬದೇ ಚಾಮರಾಜನಗರಕ್ಕೆ ಭೇಟಿ ನೀಡಬೇಕಾಗಿದೆ. ರಾಜ್ಯದ ಮುಖ್ಯಮಂತ್ರಿಯಾದವರು ತಮ್ಮದೇ ಆಡಳಿತದ ಯಾವುದೇ ಊರಿಗೂಹೋಗಲು ಹಿಂಜರಿಯಬಾರದು ಎಂಬುದು ಜಿಲ್ಲೆಯ ನಾಗರಿಕರ ಅನಿಸಿಕೆ. ಸಿದ್ದರಾಮಯ್ಯನವರಿಂದ ದೂರವಾದ ಆತಂಕವನ್ನು ಯಡಿಯೂರಪ್ಪನವರು ಮತ್ತಷ್ಟು ಪುಷ್ಟೀಕರಿಸಬೇಕು. ಚಾಮರಾಜನಗರಕ್ಕೆ ಭೇಟಿ ನೀಡುವ ಮೂಲಕ ವೈಜ್ಞಾನಿಕವಾಗಿ ನಡೆದುಕೊಳ್ಳಬೇಕು ಎಂದು ಚಾಮರಾಜನಗರದ ಜನತೆ ಆಶಿಸುತ್ತಿದ್ದಾರೆ.
ಜಿಲ್ಲೆಯ ಬಿಜೆಪಿ ಮುಖಂಡರು ಶಾಸಕರು ಯಡಿ ಯೂರಪ್ಪನವರ ಮನವೊಲಿಸಿ, ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆಗಾಗಿ ಯಡಿಯೂರಪ್ಪನವರನ್ನು ಕರೆಸಬೇಕೆಂದು ಜನತೆ ಒತ್ತಾಯಿಸಿದ್ದಾರೆ.
ಚಾ.ನಗರಕ್ಕೆ ಬಾರದ ಮುಖ್ಯಮಂತ್ರಿಗಳಿವರು : ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ ಭೇಟಿ ನೀಡಿದರೆ 6 ತಿಂಗಳೊಳಗೆ ಅಧಿಕಾರಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಪ್ರಚಲಿತದಲ್ಲಿತ್ತು. ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು, ಆರ್. ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್. ಆರ್. ಬೊಮ್ಮಾಯಿ ಹಾಗೂ ವೀರೇಂದ್ರ ಪಾಟೀಲ್ ಇಲ್ಲಿಗೆ ಭೇಟಿ ನೀಡಿದ ಆರು ತಿಂಗಳಲ್ಲಿ ಅಧಿಕಾರ ಕಳೆದುಕೊಂಡರು
ಎಂದು ಕೆಲವರು ಕಾಲಹರಣಕ್ಕಾಗಿ ಕಟ್ಟೆಯಲ್ಲಿ ಕುಳಿತು ಮಾತನಾಡಿದ ಹರಟೆ ರಾಜಕೀಯ ವಲಯದಲ್ಲಿ ಹರಡಿ, ಬೆಂಗಳೂರು ತಲುಪಿತು. 1990ರಲ್ಲಿ ವೀರೇಂದ್ರ ಪಾಟೀಲರು ಏಕಾಏಕಿ ಅಧಿಕಾರ ಕಳೆದುಕೊಂಡು ಬಂಗಾರಪ್ಪನವರು ಮುಖ್ಯಮಂತ್ರಿಯಾದ ನಂತರವಂತೂ ಮುಖ್ಯಮಂತ್ರಿಗಳ ಅಧಿಕಾರ ಹೋಗಲು ಚಾಮರಾಜನಗರವೇ ಕಾರಣ ಎಂದು ವಿಲನ್ ಮಾಡಲಾಯಿತು. ಮೂಢನಂಬಿಕೆಗಳಿಗೆ ಬೆಲೆ ಕೊಡುವ ರಾಜಕೀಯ ವಲಯದಲ್ಲಿ ಇದನ್ನು ಬಲವಾಗಿ ನಂಬಲಾಯಿತು. ಅನಂತರ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಸ್. ಎಂ. ಕೃಷ್ಣ, ಧರಂ ಸಿಂಗ್ ಚಾ.ನಗರಕ್ಕೆ ಭೇಟಿ ನೀಡಲಿಲ್ಲ. ಸಮಾಜವಾದಿ ಎನಿಸಿಕೊಂಡ ಪಟೇಲ್ ಅವರು ಸಹ ನೂತನ ಚಾ.ನಗರ ಜಿಲ್ಲೆಯನ್ನು ಮಹದೇಶ್ವರ ಬೆಟ್ಟದಲ್ಲಿ ಉದ್ಘಾಟಿಸಿದರು. 17 ವರ್ಷಗಳ ಬಳಿಕ, ಜೆಡಿಎಸ್, ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಪಟ್ಟಣಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಅಧಿಕಾರ ಹಂಚಿಕೆ ಒಡಂಬಡಿಕೆ
ವಿವಾದದಿಂದ ಅವರು ಅಧಿಕಾರ ಕಳೆದುಕೊಂಡರು. ಬಳಿಕ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಪಟ್ಟಣಕ್ಕೆ ಬರಲೇ ಇಲ್ಲ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ ಕೊನೆಯ ದಿನಗಳಲ್ಲಿ 2 ಬಾರಿ ಭೇಟಿ ನೀಡಿದ್ದರು. ನಂತರ ಸಿದ್ದರಾಮಯ್ಯ 11 ಬಾರಿ ಭೇಟಿ ನೀಡಿದ್ದರು.
ನಾವು 21ನೇ ಶತಮಾನದಲ್ಲಿದ್ದೇವೆ. ಆಡಳಿತಗಾರರಿಗೆ ವೈಜ್ಞಾನಿಕ ಚಿಂತನೆ ಬಹಳ ಮುಖ್ಯ. ಯಾವುದೋ ಮೂಢನಂಬಿಕೆಗೆ ಹೆದರಿ ಯಡಿಯೂರಪ್ಪನವರು ಚಾಮರಾಜನಗರಕ್ಕೆ ಬಾರದೇ ಇರಬಾರದು.ಕಳೆದ ಅವಧಿಯಲ್ಲಿ ಸಿಎಂ ಆಗಿದ್ದಾಗ ಅವರು ಚಾಮ ರಾಜನಗರಕ್ಕೆ ಬರಲಿಲ್ಲ. ಈ ಅವಧಿಯಲ್ಲಾದರೂ ಭೇಟಿ ನೀಡಿ ಅಭಿವೃದ್ದಿಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕು. –ಆರ್. ಧ್ರುವನಾರಾಯಣ, ಮಾಜಿ ಸಂಸದ
ಮಹದೇಶ್ವರ ಬೆಟ್ಟದಲ್ಲಿ ಅಭಿವೃದ್ಧಿಕಾರ್ಯಗಳಿಗೆ ಚಾಲನೆ ನೀಡಲು ಬರುತ್ತಿದ್ದಾರೆ. ಚಾಮರಾಜನಗರಕ್ಕೆ ಬರುವುದಿಲ್ಲ ಎಂದೇನೂ ಅವರು ಹೇಳಿಲ್ಲ. ಸಂದರ್ಭ ಬಂದಾಗ ಅವರು ಖಂಡಿತ ಚಾಮರಾಜನಗರಕ್ಕೆ ಬರುತ್ತಾರೆ. ಅಭಿವೃದ್ಧಿಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾರೆ. -ಸಿ.ಎಸ್. ನಿರಂಜನ್ಕುಮಾರ್, ಶಾಸಕ, ಗುಂಡ್ಲುಪೇಟೆ
–ಕೆ.ಎಸ್.ಬನಶಂಕರಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ