ಬಯೋಮೆಟ್ರಿಕ್ ಅಳವಡಿಸಬೇಡಿ: ಮನವಿ
Team Udayavani, Oct 30, 2019, 3:00 AM IST
ಚಾಮರಾಜನಗರ: ಆರೋಗ್ಯ ಇಲಾಖೆಯಲ್ಲಿ ವೈದ್ಯರು ಹಾಗೂ ವೈದ್ಯಕೀಯೇತರ ಸಿಬ್ಬಂದಿ ವರ್ಗದವರು ದಿನದ 24 ಗಂಟೆ ಸಮಯ ಕರ್ತವ್ಯ ಮಾಡುತ್ತಿರುವುದರಿಂದ ಕಚೇರಿಯಲ್ಲಿ ಬಯೋ ಮೆಟ್ರಿಕ್ ಯಂತ್ರವನ್ನು ಅಳವಡಿಸದಿರಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಚಂದ್ರಶೇಖರ್ ಜಿಲ್ಲಾಧಿಕಾರಿ ಕಾವೇರಿ ಮನವಿ ಸಲ್ಲಿಸಿದರು.
ಆರೋಗ್ಯ ಇಲಾಖೆಯಲ್ಲಿ ಬಯೋಮೆಟ್ರಿಕ್ ಯಂತ್ರವನ್ನು ಅಳವಡಿಸುವುದರಿಂದ ಸಿಬ್ಬಂದಿ ವರ್ಗದವರು ನಿಗದಿತ ಅವಧಿಯಲ್ಲಿ ಮಾತ್ರ ಸಾರ್ವಜನಿಕರ ಸೇವೆಯನ್ನು ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ ತುರ್ತು ಸೇವೆಯ ಸಂದರ್ಭದಲ್ಲಿ ಕ್ಷೇತ್ರ ಭೇಟಿ ನೀಡುವ ವೇಳೆ ಸಿಬ್ಬಂದಿಗೆ ಹಾಜರಾತಿ ನೀಡುವುದು ಕಷ್ಟವಾಗುತ್ತದೆ ಎಂದರು.
ಸಾಂಕ್ರಮಿಕ ರೋಗ, ಡೆಂಘೀ, ಇಲಿ ಜ್ವರ, ಕಾಲರಾ, ಹಾವು ಕಡಿತ, ಹೆರಿಗೆ ಇತ್ಯಾದಿ ಸಂದರ್ಭದಲ್ಲಿ ನೂತನ ವ್ಯವಸ್ಥೆ ಜಾರಿಗೊಳಿಸುವುದರಿಂದ ತೊಂದರೆ ಉಂಟಾಗುತ್ತದೆ. ಆದ್ದರಿಂದ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬಯೋ ಮೆಟ್ರಿಕ್ ಯಂತ್ರವನ್ನು ಅಳವಡಿಸದಿರಲು ಕ್ರಮ ಕೈಗೂಳ್ಳುವಂತೆ ಮನವಿ ಮಾಡಿದರು.
ಗೌರವ ಅಧ್ಯಕ್ಷ ವಾರೀಶ್ ಸಂಗೋಂದಿ, ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ.ಎಸ್. ಉಪಾಧ್ಯಕ್ಷರಾದ ಶಿವಕುಮಾರ್, ಮಂಜುನಾಥ್, ಪದಾಧಿಕಾರಿಗಳಾದ ನಾಗರಾಜು, ವಿನಯ್, ಶ್ರೀನಿವಾಸ್, ಆದರ್ಶ್ ಕುಮಾರ್, ರವಿಕುಮಾರ್, ವೇಣು ಇತರರು ಇದ್ದರು.