ಚಾಮರಾಜನಗರ ಜಿಲ್ಲೆಯಲ್ಲಿ ಲಾಕ್ಡೌನ್ಗೆ ಉತ್ತಮ ಸ್ಪಂದನೆ
Team Udayavani, Jul 6, 2020, 5:27 AM IST
ಚಾಮರಾಜನಗರ: ಕೋವಿಡ್ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಭಾನುವಾರದ ಲಾಕ್ಡೌನ್ ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಯಾಯಿತು. ಈಗಾಗಲೇ ಜಿಲ್ಲೆಯಲ್ಲಿ ಪ್ರತಿದಿನ ಸಂಜೆ 4ರಿಂದ ಬೆಳಗ್ಗೆ 6 ಗಂಟೆವರೆಗೆ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಭಾನುವಾರ ಸಂಪೂರ್ಣ ಲಾಕ್ ಡೌನ್ ಆಗಿತ್ತು.
ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ, ಎಲ್ಲ ವಹಿವಾಟು ಸ್ಥಗಿತಗೊಂಡಿದ್ದರಿಂದ ಪೇಟೆ ಬೀದಿ ಸೇರಿದಂತೆ ಪ್ರಮುಖ ರಸ್ತೆಗಳು ಭಣಗುಡುತ್ತಿದ್ದವು. ವಸತಿ ಪ್ರದೇಶಗಳಲ್ಲಿ ವಿರಳ ಸಂಖ್ಯೆಯಲ್ಲಿ ಜನ ಓಡಾಡುತ್ತಿದ್ದರು. ಅದೇ ರೀತಿ ಪೇಟೆ ಕಡೆ ವಾಹನಗಳಲ್ಲಿ ಬಂದವರನ್ನು ಪೊಲೀಸರು ತಡೆದು, ವಾಪಸ್ ಕಳುಹಿಸುತ್ತಿದ್ದರು.
ಜಿಲ್ಲಾ ಕೇಂದ್ರವಲ್ಲದೇ ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು, ಹನೂರು ಪಟ್ಟಣ, ಹೋಬಳಿ ಕೇಂದ್ರಗಳಲ್ಲೂ ಲಾಕ್ಡೌನ್ ಯಶಸ್ವಿಯಾಯಿತು. ಜನ ಬೀದಿಗಿಳಿಯದೆ ಕೋವಿಡ್ 19 ನಿಯಂತ್ರಣಕ್ಕೆ ಸರಕಾರವನ್ನು ಬೆಂಬಲಿಸಿದರು. ಭಾನುವಾರ ಬೆಳಗ್ಗೆ ಅಗತ್ಯ ವಸ್ತುಗಳಾದ ಹಾಲು, ಪತ್ರಿಕೆ, ಹಣ್ಣು, ಔಷದಿಗಳಂತಹ ಮಾರಾಟ ಹೊರತು ಇನ್ನಾವುದೇ ಮಾರಾಟಕ್ಕೆ ಅಂಗಡಿ, ಮುಂಗಟ್ಟು ತೆರೆದಿರಲಿಲ್ಲ.
ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಾಲಯಗಳೂ ತೆರೆದಿರಲಿಲ್ಲ. ಮಲೆ ಮಹದೇಶ್ವರಬೆಟ್ಟದಲ್ಲೂ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಈಗಾಗಲೇ ಜಿಲ್ಲೆಯ ಎಲ್ಲ ಪ್ರೇಕ್ಷಣೀಯ ಸ್ಥಳಗಳಲ್ಲೂ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.