ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆ ಅವಶ್ಯ
Team Udayavani, Jun 17, 2019, 3:00 AM IST
ಚಾಮರಾಜನಗರ: ಜಾಗತೀಕರಣದ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಯುವುದು ಬಹಳ ಅವಶ್ಯಕವಾಗಿದೆ ಎಂದು ನವದೆಹಲಿ ಅಕ್ಕ ಐಎಎಸ್ ಅಕಾಡೆಮಿ ಐಎಎಸ್ ತರಬೇತುದಾರ ಡಾ.ಶಿವಕುಮಾರ್ ಹೇಳಿದರು.
ನಗರದ ಜೆ.ಎಚ್.ಪಟೇಲ್ಸಭಾಂಗಣದಲ್ಲಿ ಬಹುಜನ ವಿದ್ಯಾಥಿ ಸಂಘ (ಬಿವಿಎಸ್)ಜಿಲ್ಲಾ ಘಟಕದ ವತಿಯಿಂದ ಮೈಸೂರು ಪ್ರಾಂತ್ಯದಲ್ಲಿ ಸರ್ವರಿಗೂ ಸಮಾನ ಪ್ರಾತಿನಿಧ್ಯ ನೀಡಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ರ ಜನ್ಮದಿನದ ಅಂಗವಾಗಿ ಚಾಮರಾಜನಗರ ತಾಲೂಕು ಮಟ್ಟದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.80, ಪಿಯುಸಿಯಲ್ಲಿ ಶೇ.75 ಕ್ಕಿಂತ ಹೆಚ್ಚು ಅಂಕಪಡೆದ ಎಲ್ಲಾ ಸಮುದಾಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣಕ್ಕಾಗಿ ಹೋರಾಟ: ಬಹುಜನ ವಿದ್ಯಾರ್ಥಿ ಸಂಘ ಇಡೀ ರಾಜ್ಯಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಜೊತಗೆ ಮಾರ್ಗದರ್ಶನ ನೀಡುತ್ತಿದೆ. 25 ವರ್ಷ ತುಂಬಿದ ಮೇಲೆ ಓದಲು ದೇಹ ಸಹಕರಿಸುವುದಿಲ್ಲ.
ಭಾರತ ದೇಶದ ಸಂವಿಧಾನ ರಚನೆಯಾಗಿ 75 ವರ್ಷಗಳು ಆಗುತ್ತಿದೆ. ಪೆರಿಯಾರ್ ರಾಮಸ್ವಾಮಿ, ಡಾ.ಬಿ.ಆರ್ಅಂಬೇಡ್ಕರ್, ಸಾಹುಮಹಾರಾಜ್, ನಾಲ್ವಡಿಕೃಷ್ಣರಾಜ ಒಡೆಯರ್, ಸಾವಿತ್ರೆಬಾಪುಲೆ ಅವರ ಹೋರಾಟದ ಫಲವಾಗಿ ಎಲ್ಲರೂ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತು ಎಂದರು.
ಜಾಗತೀಕರಣದಿಂದಾಗಿ ದುಡ್ಡುಕೊಟ್ಟು ಓದುವ ಕಾಲದಲ್ಲೂ ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಪುರಂದರ್, ಶಿಕ್ಷಣದಿಂದ ಮಾತ್ರ ದೇಶ ಪ್ರಗತಿ ಸಾಧ್ಯ.
ಸರ್ಕಾರದಿಂದ ದೊರೆಯುವ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಶಿಕ್ಷಣ ಕಲಿಯುವ ಮೂಲಕ ಮುಖ್ಯವಾಹಿನಿಗೆ ಬರಬೇಕೆಂದರು. ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಶಿಸ್ತು ರೂಢಿಸಿಕೊಂಡು ಪ್ರಾಥಮಿಕ ಹಂತದಲ್ಲೇ ಚೆನ್ನಾಗಿ ಓದಿ ಉನ್ನತ ಶಿಕ್ಷಣ ಮಾಡುವ ಗುರಿ ಇಟ್ಟುಕೊಳ್ಳಬೇಕು ಎಂದರು.
ಅರ್ಥಪೂರ್ಣ: ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಮಂಜುನಾಥ ಪ್ರಸನ್ನ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಹಾಗೂ ಗ್ರಂಥಾಲಯಗಳು ಹೆಚ್ಚಾಗಿ ನಿರ್ಮಾಣವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಎಸ್ಸಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಕೇಂದ್ರ ಸರ್ಕಾರ ಹೆಚ್ಚಿನ ವಿದ್ಯಾರ್ಥಿ ವೇತನ ನೀಡುತ್ತದೆ ಎಂದರು.
ಮುಖ್ಯ ಅತಿಥಿ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಮಾತನಾಡಿ, ಬಹುಜನ ವಿದ್ಯಾರ್ಥಿ ಸಂಘ ಪ್ರತಿಭಾವಂತ ಎಲ್ಲಾ ಸಮುದಾಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಅರ್ಥಪೂರ್ಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೂರ್ವ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು. ಆತ್ಮಸ್ಥೆçರ್ಯ, ಎದೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮೈಸೂರು ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಚಾಮರಾಜನಗರ ಜಿಲ್ಲಾ ಸಂಯೋಜಕ ಪರ್ವತ್ರಾಜ್ ಸ್ವಾಗತಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ, ಬಿಎಸ್ಪಿ ಜಿಲ್ಲಾಧ್ಯಕ್ಷ ಮಾದಪ್ಪ, ಮಹಾಲಿಂಗು, ಸಿವಿಲ್ ಎಂಜಿನಿಯರ್ ಮಹರ್ಬೋವಿ, ಜೆಎಸ್ಎಸ್ ವಿದ್ಯಾಸಂಸ್ಥೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್.ಎಂ.ಸ್ವಾಮಿ, ಬಿಎಸ್ಪಿ ತಾಲೂಕು ಅಧ್ಯಕ್ಷ ಆಲೂರುಮಲ್ಲು, ನಗರಸಭಾ ಸದಸ್ಯ ವಿ.ಪ್ರಕಾಶ್, ವರ್ತಕರ ಸಂಘದ ಅಧ್ಯಕ್ಷ ಸಿ.ವಿ.ಶ್ರೀನಿವಾಸ್, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷೆ ನೇತ್ರಾವತಿ, ಶಕುಂತಲಾ, ಕೃಷ್ಣಮೂರ್ತಿ, ಹರಿಣಿ, ಕಾವ್ಯಾ, ಪ್ರವೀಣ್ ಮತ್ತಿತರರಿದ್ದರು.
540 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: 2018-19ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಶೇ.80 ಮತ್ತು ಪಿಯುಸಿಯಲ್ಲಿ ಶೇ.75 ಕ್ಕಿಂತ ಹೆಚ್ಚು ಅಂಕ ಪಡೆದಿದ್ದ 540 ವಿದ್ಯಾರ್ಥಿಗಳಿಗೆ ತಲಾ ಒಂದು ಫೈಲ್, ಒಂದು ಪುಸ್ತಕ, ಪದಕ ಹಾಗೂ ಪ್ರಮಾಣಪತ್ರ ನೀಡುವ ಮೂಲಕ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.