ಪ್ರದೀಪ್ ಈಶ್ವರ್ಗೆ ರಾಜಕೀಯ ಗಂಧ, ಗಾಳಿ ಗೊತ್ತಿಲ್ಲ: ನವೀನ್ಕಿರಣ್
Team Udayavani, Apr 21, 2023, 3:57 PM IST
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರದೀಪ್ ಈಶ್ವರ್ ಅವರು ಸುಧಾಕರ್ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ. ನವೀನ್ ಕಿರಣ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವಾಗ ಸುಧಾಕರ್ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಹೇಳುವ ಪ್ರದೀಪ್ ಈಶ್ವರ್ ಅವರು, 10ವರ್ಷ ಚಿಕ್ಕಬಳ್ಳಾಪುರ ಜನತೆ ಸೇವೆ ಮಾಡಿರುವ ಡಾ.ಕೆ. ಸುಧಾಕರ್ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕೆಂದರು.
ನಗೆಪಾಟಲಿಗೀಡಾಗುತ್ತಿರುವ ಕಾಂಗ್ರೆಸ್: ಪ್ರದೀಪ್ ಈಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಬಲಿಜ ಸಮುದಾಯದ ಮತ ಪಡೆಯುವುದಾಗಿ ಪ್ರಚಾರ ಮಾಡುತ್ತಿರುವುದು ನಗೆಪಾಟಲಾಗಿದೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವವನ್ನೂ ಪಡೆಯದ ವ್ಯಕ್ತಿಗೆ ಟಿಕೆಟ್ ನೀಡುವ ಸ್ಥಿತಿಗೆ ಕಾಂಗ್ರೆಸ್ ಬಂದಿರುವುದು ಆ ಪಕ್ಷದ ದುಸ್ಥಿತಿ ತೋರಿಸುತ್ತದೆ ಎಂದು ದೂರಿದರು.
ಕನಿಷ್ಠ ವಿದ್ಯಾರ್ಹತೆ ಏನು?: ಕಳೆದ ಮಾ.7ರಂದು ರಾಜಕಾರಣದ ಆಸಕ್ತಿಯೇ ಇಲ್ಲ ಎಂದವರು ಒಂದೇ ತಿಂಗಳಿನಲ್ಲಿ ಪಕ್ಷ ಅವಕಾಶ ಕೊಟ್ಟಿದೆ ಎನ್ನುವುದು ಸಮಂಜಸವೇ ಎಂದು ಪ್ರಶ್ನಿಸಿದರು.
ಇವರೇ ಹೇಳಿದಂತೆ ನಾಮಪತ್ರ ಸಲ್ಲಿಸಲು ಎಂ.ಆರ್.ಸೀತಾರಾಂ, ರಮೇಶ್ ಕುಮಾರ್, ಡಿ.ಕೆ. ಶಿವಕುಮಾರ್ ಅವರು ಏಕೆ ಬರಲಿಲ್ಲ. ಇದೇ ಪ್ರದೀಪ್ ನಾಮಪತ್ರದ ಜತೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ವಿದ್ಯಾರ್ಹತೆ ಪಿಯುಸಿ ಎಂದು ಹೇಳಿದ್ದಾರೆ. ಪಿಯುಸಿ ಓದಿದವರು ಉಪನ್ಯಾಸಕರು ಹೇಗೆ ಆದರು, ಮೆಡಿಕಲ್ ಮೇಸ್ಟ್ರೆ ಆಗಬೇಕಾದರೆ ಕನಿಷ್ಠ ವಿದ್ಯಾರ್ಹತೆ ಏನಿರಬೇಕು ಎಂದು ಪ್ರಶ್ನಿಸಿದರು.
ಬಹಿರಂಗ ಸತ್ಯ: ಯೋಗಿನಾರೇಯಣ ಯತೀಂದ್ರರ ಜಯಂತಿಯನ್ನು ಪಿ.ಸಿ. ಮೋಹನ್ ಮತ್ತು ಡಾ.ಕೆ.ಸುಧಾಕರ್ ಮಾಡಿಸಿದರು. ಬಲಿಜ ಸಮುದಾಯದ ಪರ ವಿಧಾನಸೌಧದಲ್ಲಿ ಧ್ವನಿ ಎತ್ತಿದವರು ಸುಧಾಕರ್ ಅವರು ಮಾತ್ರ. ಸಮುದಾಯಕ್ಕೆ ಒಂದು ಎಕರೆ ಜಮೀನು ನೀಡಿದವರು ಸುಧಾಕರ್, ನಿಗಮ ಮಂಡಳಿ ಮಾಡಿಸಿಕೊಟ್ಟಿದ್ದು ಸುಧಾಕರ್ ಎಂಬುದು ಬಹಿರಂಗ ಸತ್ಯ ಎಂದರು.
ರಾಜಕೀಯ ಗಂಧ, ಗಾಳಿ ಗೊತ್ತಿಲ್ಲ: ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಅವರಿಗೆ ರಾಜಕೀಯ ಗಂಧ ಗಾಳಿ ಗೊತ್ತಿಲ್ಲ, ಅಂತಹ ವ್ಯಕ್ತಿಯನ್ನು ಅಭ್ಯರ್ಥಿ ಮಾಡಿರುವುದು ಕಾಂಗ್ರೆಸ್ ದೌರ್ಭಾಗ್ಯ. ಉದ್ಧಟತನದ ಮಾತು ಅಗತ್ಯವಿಲ್ಲ, ಮತ ಕೇಳಿ, ತೀರ್ಮಾನ ಜನರು ಮಾಡುತ್ತಾರೆ. ಕೋವಿಡ್ ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿದ್ದಾಗ ಸಹಾಯ ಮಾಡಿದವರು ಸುಧಾಕರ್, ಕೋವಿಡ್ ಲಸಿಕೆ ನೀಡುವಾಗ ಜಾತಿ ನೋಡಿಲ್ಲ, ಚುನಾವಣೆ ಸಮಯದಲ್ಲಿ ಮಾತ್ರ ಜಾತಿ ಏಕೆ ಎಂದು ಪ್ರಶ್ನಿಸಿದರು.