ಬಿಜೆಪಿ ತೊಲಗಿಸಲು ಹೋರಾಟ ಅನಿವಾರ್ಯ: ನಲಪಾಡ್
Team Udayavani, Feb 27, 2022, 2:50 PM IST
ಶಿಡ್ಲಘಟ್ಟ: ಬಿಜೆಪಿಯನ್ನು ತೊಲಗಿಸಲು ಹೋರಾಟ ನಡೆಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶವನ್ನು ಉಳಿಸಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಯುವಕರು ಶ್ರಮಿಸಬೇಕು ಎಂದು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹ್ಮದ್ ಹ್ಯಾರೀಸ್ ನಲಪಾಡ್ ಹೇಳಿದರು. ನಗರದ
ನೆಹರು ಕ್ರೀಡಾಂಗಣದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಕಾಂಗ್ರೆಸ್ ಮುಖಂಡ ಎಚ್.ಎ.ಎಲ್ ದೇವರಾಜ್ ಅಭಿಮಾನಿಗಳ ಬಳಗದಿಂದ ನಡೆದ ವಿ.ಎಂ. ಕಾಂಗ್ರೆಸ್ ಕಪ್ ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿ, ಯುವಕರು ಸಂಘಟಿತರಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಇಳಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಲು ಪಣತೊಡಬೇಕು. ಶಿಡ್ಲಘಟ್ಟ ವಿಧಾಸಭಾ ಕ್ಷೇತ್ರದಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಯುವಕರು ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಮುಖ್ಯಗುರಿಯಾಗಿದೆ. ನಾವು ಯಾರಿಗೆ ಟಿಕೆಟ್ ಕೊಡಿಸಲು ಮತ್ತು ನಿರಾಕರಿಸುವ ಕೆಲಸವನ್ನು ಮಾಡುವುದಿಲ್ಲ. ಅದು ನಮ್ಮ ಕೆಲಸವಲ್ಲ. ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡುವುದು ನಮ್ಮ ಕೆಲಸ. ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ನೀಡುತ್ತದೆ. ಅವರ ಪರವಾಗಿ ಕೆಲಸ ಮಾಡುವುದು ನಮ್ಮ ಕೆಲಸ ಎಂದು ಸ್ಪಷ್ಟಪಡಿಸಿದರು.
ಕ್ರೀಡೆಗಳ ಟೂರ್ನಮೆಂಟ್ ಆಯೋಜಕ ಕಾಂಗ್ರೆಸ್ ಮುಖಂಡ ಎಚ್.ಎ.ಎಲ್ ದೇವ ರಾಜ್ ಮಾತನಾಡಿದರು. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುದಾಸಿರ್ ದಾವೂದ್, ನಗರಸಭೆ ಸದಸ್ಯ ಕೃಷ್ಣಮೂರ್ತಿ, ಮಾಜಿ ಸದಸ್ಯ ಅಬ್ದುಲ್ ಗಫೂರ್, ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಶಿಡ್ಲಘಟ್ಟತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಚರಣ್ರೆಡ್ಡಿ, ಜಿಲ್ಲಾಪ್ರಧಾನ ಕಾರ್ಯದರ್ಶಿ ಗಿರೀಶ್, ಹಮೀಮ್, ಆಫ್ರೀದ್, ಮುತ್ತುರು ವೆಂಕಟೇಶ್ ಉಪಸ್ಥಿತರಿದ್ದರು.