ಕೊರೋನಾ ವೈರಸ್ ಎಫೆಕ್ಟ್: ನಂದಿಗಿರಿಧಾಮ ಪ್ರವೇಶ ನಿರ್ಬಂಧ: ಡಿ.ಸಿ.ಆದೇಶ
Team Udayavani, Mar 13, 2020, 11:01 PM IST
ಚಿಕ್ಕಬಳ್ಳಾಪುರ: ಜಗತ್ತನ್ನು ಬೆಚ್ಚಿಬೀಳಿಸುತ್ತಿರುವ ಕೊರೊನಾ ವೈರಸ್ ರಾಜ್ಯದಲ್ಲಿಯು ಕಾಣಿಸಿಕೊಂಡು ವೃದ್ದರೊಬ್ಬರನ್ನು ಬಲಿ ಪಡೆದ ಬೆನ್ನಲೇ ರಾಜ್ಯ ಸರ್ಕಾರ ವಾರದ ಕಾಲ ಮಾಲ್, ಚಿತ್ರ ಮಂದಿರ, ಮದುವೆ, ನಾಮಕರಣ, ಜಾತ್ರೆ ಹೀಗೆ ಜನ ಸೇರುವ ಸಾರ್ವಜನಿಕ ಸಭೆ, ಸಮಾರಂಭಗಳ ಮೇಲೆ ನಿಷೇದ ಹೇರಿದ ಹಿನ್ನಲೆಯಲ್ಲಿ ಜಿಲ್ಲೆಯ ಐತಿಹಾಸಿಕವಾದ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಶುಕ್ರವಾರ ರಾತ್ರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಈಗಾಗಲೇ ಸರ್ಕಾರ ಪ್ರಾಥಮಿಕ ಶಾಲೆಗಳಿಗೆ ವಾರ್ಷಿಕ ಪರೀಕ್ಷೆಗಳನ್ನು ನಡೆಸದೇ ಇದ್ದರೂ ಬೇಸಿಗೆ ರಜೆಗಳನ್ನು ಘೊಷಿಸುವ ಮೂಲಕ ಕೊರೊನಾ ವೈರಸ್ ಹರಡದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು, ಜಿಲ್ಲೆಯಲ್ಲಿ ನಿತ್ಯ ನೂರಾರು ಪ್ರವಾಸಿಗರು ಬಂದು ಹೋಗುವ ಅದರಲ್ಲೂ ವಿದೇಶಿಗರ ಗಮನ ಸೆಳೆದಿರುವ ನಂದಿಗಿರಿಧಾಮಕ್ಕೆ ಸಾವಿರಾರು ಪ್ರಯಾಣಿಕರು ಗಿರಿಧಾಮಕ್ಕೆ ಆಗಮಿಸುತ್ತಾರೆ. ವಿಶೇಷವಾಗಿ ಶನಿವಾರ ಭಾನುವಾರ ವೀಕೆಂಡ್ನಲ್ಲಿ ಪ್ರವಾಸಿಗರ ದಂಡು ಆಗಮಿಸಲಿದೆ.
ಈಗಾಗಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ನಂದಿಗಿರಿಧಾಮಕ್ಕೆ ಮಾ.14 ರಿಂದ 23 ರ ವರೆಗೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆಂದು ಜಿಲ್ಲೆಯ ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಉದಯವಾಣಿಗೆ ಸ್ಪಷ್ಟಪಡಿಸಿದರು.