ಇಂದಿನಿಂದ ಐತಿಹಾಸಿಕ ಚಿತ್ರಾವತಿ ಸುಬ್ರಹ್ಮಣ್ಯೇಶ್ವರ ಜಾತ್ರೆ
Team Udayavani, Jan 29, 2020, 3:00 AM IST
ಬರೋಬ್ಬರಿ 300 ವರ್ಷಗಳ ಭವ್ಯ ಇತಿಹಾಸ ಇರುವ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಪುಣ್ಯ ಕ್ಷೇತ್ರವಾಗಿರುವ ನಗರದ ಹೊರ ವಲಯದ ಚಿತ್ರಾವತಿಯಲ್ಲಿ ನೆಲೆಸಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ವಾರ್ಷಿಕ ರಥೋತ್ಸವಕ್ಕೆ ದಿನಗಣನೆ ಶರುವಾಗಿದೆ. ಷಷ್ಠಿಯಂದು ನಡೆಯುವ ಸ್ವಾಮಿಯ ಜಾತ್ರ ಮಹೋತ್ಸವಕ್ಕೆ ಚಿತ್ರಾವತಿ ಸಿದ್ಧಗೊಳ್ಳುತ್ತಿದೆ. ಚಿತ್ರಾವತಿಯಲ್ಲಿರುವ ಚಕ್ರಾಕಾರದ ಪುಷ್ಕರಣೆ ಭಕ್ತರ ಮನತಣಿಸಲಿದ್ದು, ಬುಧವಾರದಿಂದ ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದೆ.
ಚಿಕ್ಕಬಳ್ಳಾಪುರ: ಒಂದಲ್ಲ ಎರಡಲ್ಲ ಬರೋಬ್ಬರಿ 5 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿರುವ ಕುಕ್ಕೆ, ಘಾಟಿ ಬಳಿಕ ಹೆಚ್ಚು ಧಾರ್ಮಿಕ ಹಾಗೂ ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ನಗರದ ಹೊರ ವಲಯದ ಚಿತ್ರಾವತಿಯ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ವಾರ್ಷಿಕ ಬ್ರಹ್ಮರಥೋತ್ಸವಕ್ಕೆ ನಾಳೆಯಿಂದ ಚಾಲನೆ ದೊರೆಯಲಿದ್ದು, ಮಾಘ ಶುದ್ದ ಷಷ್ಠಿ ಶುಕ್ರವಾರ ರಥೋತ್ಸವ ನಡೆಯಲಿದೆ.
ಪುಷ್ಕರಣಿಯಲ್ಲಿ ಭಕ್ತರು ಸ್ನಾನ: ನಗರದ ರಾಷ್ಟ್ರೀಯ ಹೆದ್ದಾರಿ-7 ರ ಬಾಗೇಪಲ್ಲಿ ರಸ್ತೆಯಲ್ಲಿರುವ ಚಿತ್ರಾವತಿಗೆ ತನ್ನದೇ ಆದ ಮಹತ್ವ ಹೊಂದಿದ್ದು, ಹರಿಹರ ನಿರ್ಮಿಸಿರುವ ಪುರಾಣ ಪ್ರಸಿದ್ಧ ಸ್ಥಳ ಚಿತ್ರಾವತಿ ಎಂಬ ಪ್ರತೀತಿ ಇದೆ. ಇಲ್ಲಿನ ಚಕ್ರಾಕಾರದ ಪುಷ್ಕರಣೆ ನೋಡಲು ರಮಣೀಯವಾಗಿ ಕಾಣಲಿದ್ದು, ರಥೋತ್ಸವದ ವೇಳೆ ಪುಷ್ಕರಣಿಯಲ್ಲಿ ಭಕ್ತರು ಸ್ನಾನ ಮಾಡಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಾರೆ.
ಪುಷ್ಕರಣೆಗೆ 300 ವರ್ಷ ಇತಿಹಾಸ: ಬುಧವಾರದಿಂದ ಆರಂಭಗೊಳ್ಳಲಿರುವ 5 ದಿನಗಳ ಜಾತ್ರಾ ಮಹೋತ್ಸವಕ್ಕೆ ಚಿತ್ರಾವತಿ ಸಿಂಗಾರಗೊಳ್ಳುತ್ತಿದೆ. ಇಡೀ ದೇವಾಲಯವನ್ನು ಸುಣ್ಣ, ಬಣ್ಣಗಳಿಂದ ಅಲಂಕರಿಸಲಾಗಿದ್ದು, ಪುಷ್ಕರಣಿಗೆ ನೀರು ತುಂಬವ ಕಾರ್ಯ ಭರದಿಂದ ಸಾಗಿದೆ. ದೇವಾಲಯದ ಮುಂದೆ ಚಕ್ರಾಕಾರದಲ್ಲಿ ನಿರ್ಮಿಸಿರುವ ಪುಷ್ಕರಣೆಗೆ 300 ವರ್ಷಗಳ ಇತಿಹಾಸ ಇದೆ. ಇಂತಹ ಪುಷ್ಕರಣೆ ರಾಜ್ಯದಲ್ಲಿ ಎಲ್ಲೂ ಕಾಣಿಸುವುದಿಲ್ಲ. ದೇವಾಲಯ ಸ್ಥಾಪನೆಯಾಗಿ 170 ವರ್ಷ ಕಳೆದಿದೆ.
ತಾಪಂ ಉಸ್ತುವಾರಿ: ಇಲ್ಲಿನ ಸುಬ್ರಹ್ಮಣ್ಯೇಶ್ವರಸ್ವಾಮಿ ಉತ್ಸವ ಮೂರ್ತಿ ಮೂಲ ವಿಗ್ರಹವಾಗಿದೆ. ಪ್ರತಿ ವರ್ಷ ಕುಕ್ಕೆ ಹಾಗೂ ಘಾಟಿಯಲ್ಲಿ ಮುಗಿದ ಬಳಿಕ ಚಿತ್ರಾವತಿಯಲ್ಲಿ ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವ ನಡೆಸಲಾಗುತ್ತದೆ. ಒಟ್ಟು ಐದು ದಿನಗಳ ಕಾಲ ರಥೋತ್ಸವ ನಡೆಯಲಿದೆ. ತಾಪಂ ರಥೋತ್ಸವದ ಉಸ್ತುವಾರಿ ನೋಡಿಕೊಳ್ಳಲಿದೆ.
ದೇವರ ಉತ್ಸವ ಮೂರ್ತಿಗಳಿಗೆ ಪ್ರತಿ ವರ್ಷ ನಾವೇ ಧಾರ್ಮಿಕ ಕೈಂಕಾರ್ಯಗಳನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ದೇಗುಲದ ಧರ್ಮದರ್ಶಿ ಹಾಗೂ ಆರ್ಚಕರಾದ ಮಠಮುದ್ರೆ ಎಲ್.ಶಿವಪ್ರಸಾದ್ ಮಂಗಳವಾರ “ಉದಯವಾಣಿ’ಗೆ ತಿಳಿಸಿದರು. ಷಷ್ಠಿ ದಿನವೇ ಸುಬ್ರಹ್ಮಣ್ಯೇಶ್ವರನಿಗೆ ಇಷ್ಠ ಆಗಿರುವುದರಿಂದ ಅಂದೇ ನಾವು ಬ್ರಹ್ಮರಥೋತ್ಸವವನ್ನು ಮೊದಲಿನಿಂದಲೂ ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.
ಜನಸಂಖ್ಯೆ ಹೆಚ್ಚುತ್ತಲಿದೆ: ನಾನು 30 ವರ್ಷಗಳಿಂದ ಚಿತ್ರಾವತಿ ಜಾತ್ರೆಗೆ ಬರುತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಭಕ್ತರ ಆಗಮನದ ಸಂಖ್ಯೆ ಹೆಚ್ಚುತ್ತಲೇ ಇದೆ. ಚಿತ್ರಾವತಿ ಸುಬ್ರಹ್ಮಣ್ಯೇಶ್ವರಸ್ವಾಮಿ ಜಾತ್ರೆಗೆ ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಜಾತ್ರೆಯಲ್ಲಿ ಭಕ್ತರಿಗೆ ಬರಗು, ಬತ್ತಾಸ್ ಮತ್ತಿತರ ತಿಂಡಿ, ತಿನಿಸುಗಳನ್ನು ಮಾರಾಟ ಮಾಡಲು ದೂರದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಿಂದ ಆಗಮಿಸಿ ಮಳಿಗೆ ತೆರೆದಿರುವ ನಂಗಲಿಯ ವರದರಾಜ್ ಹೇಳಿದರು.
ಇಂದಿನ ಕಾರ್ಯಕ್ರಮಗಳೇನು?: ಐತಿಹಾಸಿಕ ಪ್ರಸಿದ್ಧ ಶ್ರೀ ಚಿತ್ರಾವತಿಯ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವ ಜ.29 ರಿಂದ ಆರಂಭಗೊಳ್ಳಲಿದ್ದು, ಇಂದು ಬೆಳಗ್ಗೆ ದೇವರಿಗೆ ರುದ್ರಾಭಿಷೇಕದ ಮೂಲಕ ಐದು ದಿನಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಸಂಜೆ ದೇವರಿಗೆ ಅಂಕುರಾರ್ಪಣೆ, ಕಳಸ ಪ್ರತಿಷ್ಠಾಪನೆ, ಧ್ವಜಾರೋಹಣ ನೆರವೇರಲಿದೆ. ಈಗಾಗಲೇ ದೇವಾಲಯ ಸ್ವತ್ಛತಾ ಕಾರ್ಯ ಸೇರಿದಂತೆ ಅನೇಕ ಕಾರ್ಯಗಳು ಜಾತ್ರಾ ಮಹೋತ್ಸವದ ಪೂರಕವಾಗಿ ಸಿದ್ಧತೆಗಳು ಪೂರ್ಣಗೊಂಡಿದ್ದು, ರಥವನ್ನು ಸಹ ಹೊರ ತೆರೆದು ಸ್ವತ್ಛಗೊಳಿಸಲಾಗಿದೆ.
ಶುಕ್ರವಾರ ಸುಬ್ರಹ್ಮಣ್ಯೇಶ್ವರ ರಥೋತ್ಸವ: ವರ್ಷದಲ್ಲಿ ಬರುವ ಮೂರು ಷಷ್ಠಿಗಳಲ್ಲಿ ಮೊದಲ ಷಷ್ಠಿಯ ದಿನ ರಾಜ್ಯದ ಐತಿಹಾಸಿಕ ದೇವಾಲವಾದ ಕುಕ್ಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ ನಡೆದರೆ ಎರಡನೇ ಷಷ್ಠಿಯೆಂದು ದೊಡ್ಡಬಳ್ಳಾಪುರ ಸಮೀಪ ಇರುವ ಘಾಟಿ ಸುಬ್ರಹ್ಮಣ್ಯೇಶ್ವರಸ್ವಾಮಿಯ ರಥೋತ್ಸವ ನಡೆಯುತ್ತದೆ. ಮೂರನೇ ಷಷ್ಠಿಯಂದು ಜಿಲ್ಲೆಯ ಇತಿಹಾಸ ಪ್ರಸಿದ್ಧ ಚಿತ್ರಾವತಿಯಲ್ಲಿ ನೆಲೆಸಿರುವ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ವಾರ್ಷಿಕ ಬ್ರಹ್ಮರಥೋತ್ಸವ ನಡೆಯಲಿದೆ.
ತಾಪಂ ವತಿಯಿಂದ ರಥೋತ್ಸವ ಉಸ್ತುವಾರಿ: ಸಾಮಾನ್ಯವಾಗಿ ಜನರ ಧಾರ್ಮಿಕ ಶ್ರದ್ಧಾಭಕ್ತಿಯ ದೇಗುಲಗಳನ್ನು ಮುಜರಾಯಿ ಇಲಾಖೆ ಅಥವಾ ಕಂದಾಯ ಇಲಾಖೆ ನಿರ್ವಹಿಸುತ್ತದೆ. ತಪ್ಪಿದರೆ ವ್ಯವಸ್ಥಾಪನಾ ಸಮಿತಿಗಳು ಅಥವಾ ದೇವಾಲಯದ ಹೆಸರಿನಲ್ಲಿ ರಚನೆಯಾಗುವ ಟ್ರಸ್ಟ್ಗಳು ನಡೆಸುತ್ತವೆ. ಆದರೆ ಚಿತ್ರಾವತಿ ದೇಗುಲದ ಸಂಪೂರ್ಣ ಉಸ್ತುವಾರಿಯನ್ನು ಚಿಕ್ಕಬಳ್ಳಾಪುರ ತಾಪಂ ದಶಕಗಳಿಂದಲೂ ನಡೆಸಿಕೊಂಡು ಬರುತ್ತಿದ್ದು, ಇಡೀ ದೇವಾಲಯದ ಅಭಿವೃದ್ಧಿ ಸೇರಿದಂತೆ ಪ್ರತಿ ವರ್ಷ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಉಸ್ತುವಾರಿಯನ್ನು ತಾಪಂ ಶಿಸ್ತುಬದ್ಧವಾಗಿ ನಿರ್ವಹಿಸುತ್ತಿದೆ.
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್