ನೆರೆ; ಪ್ರವಾಸಿಗರ ಸಂಖ್ಯೆ ಇಳಿಮುಖ
ಕಳೆದ ವರ್ಷ 55.47 ಲಕ್ಷ ಪ್ರವಾಸಿಗರು•ಈ ವರ್ಷ 48.75 ಲಕ್ಷ ಪ್ರವಾಸಿಗರು ಭೇಟಿ
Team Udayavani, Sep 18, 2019, 4:07 PM IST
ಎಸ್.ಕೆ.ಲಕ್ಷ್ಮೀ ಪ್ರಸಾದ್
ಚಿಕ್ಕಮಗಳೂರು: ಮಳೆಯ ಅಬ್ಬರ ಮತ್ತು ಭೂ ಕುಸಿತ ಉಂಟಾಗಿದ್ದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆಗಸ್ಟ್ ಅಂತ್ಯಕ್ಕೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.
ಕಳೆದ ವರ್ಷ ಶೃಂಗೇರಿ, ಕಳಸಾ, ಹೊರನಾಡು, ಬಾಳೆಹೊನ್ನೂರು ರಂಭಾಪುರಿ ಮಠ, ಇನಾಂ ದತ್ತಾತ್ರೇಯ ಪೀಠ, ಕೆಮ್ಮಣ್ಣು ಗುಂಡಿ ಮತ್ತು ಚಿಕ್ಕಮಗಳೂರು ಸುತ್ತಮುತ್ತಲ ಪ್ರದೇಶಗಳಿಗೆ 55.47 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಈ ವರ್ಷ 48.75 ಲಕ್ಷ ಪ್ರವಾಸಿಗರು ಭೇಟಿ ನೀಡಿ ಯಾತ್ರಾ ಸ್ಥಳ ಮತ್ತು ಹೃನ್ಮನ ತಣಿಸುವ ಹಚ್ಚ ಹಸಿರಿನ ಗಿರಿ ಶ್ರೇಣಿಗಳನ್ನು ವೀಕ್ಷಿಸಿದ್ದಾರೆ.
ಕಳೆದ ವರ್ಷ ಶೃಂಗೇರಿ ಶಾರದಾ ಪೀಠಕ್ಕೆ ಜನವರಿಯಿಂದ ಡಿಸೆಂಬರ್ವರೆಗೆ 27.75 ಲಕ್ಷ ಪ್ರವಾಸಿಗರು, ಕಳಸಕ್ಕೆ 2.70 ಲಕ್ಷ, ಹೊರನಾಡಿಗೆ 17.83 ಲಕ್ಷ, ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ 10.17 ಲಕ್ಷ, ದತ್ತಪೀಠಕ್ಕೆ 2.39 ಲಕ್ಷ, ಕೆಮ್ಮಣ್ಣು ಗುಂಡಿಗೆ 1.21 ಲಕ್ಷ, ಹಿರೇಮಗಳೂರು, ಬೆಳವಾಡಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ 44.975 ಲಕ್ಷ ಹಾಗೂ ಜಿಲ್ಲೆಗೆ ದೇಶೀಯ ಪ್ರವಾಸಿಗರು 62.50 ಲಕ್ಷ ಹಾಗೂ ವಿದೇಶಿಯರು 2057 ಮಂದಿ ಭೇಟಿ ನೀಡಿದ್ದರು.
ಈ ವರ್ಷ ಜನವರಿಯಿಂದ ಆಗಸ್ಟ್ ಅಂತ್ಯದವರೆಗೆ ಶೃಂಗೇರಿಗೆ 32 ಲಕ್ಷ, ಹೊರನಾಡು 13.5 ಲಕ್ಷ, ಕಳಸಕ್ಕೆ 2.10 ಲಕ್ಷ, ದತ್ತಪೀಠಕ್ಕೆ 2.44 ಲಕ್ಷ, ಚಿಕ್ಕಮಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣ ಮತ್ತು ಯಾತ್ರಾ ಸ್ಥಳಗಳಿಗೆ 56,000, ಕೆಮ್ಮಣ್ಣು ಗುಂಡಿಯ ಕೃಷ್ಣರಾಜೇಂದ್ರ ಗಿರಿಧಾಮಕ್ಕೆ 1.02 ಲಕ್ಷ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ.
ಮಳೆಯ ಅಬ್ಬರಕ್ಕೆ ಚಾರ್ಮಾಡಿ ಘಾಟಿಯಲ್ಲಿ ಮಣ್ಣು ಕುಸಿದಿದ್ದರಿಂದ ಕೆಲವು ದಿನಗಳ ಕಾಲ ಈ ಮಾರ್ಗದಲ್ಲಿ ಜಿಲ್ಲಾಡಳಿತ ವಾಹನ ಸಂಚಾರ ನಿಷೇಧಿಸಿತ್ತು. ಬಳಿಕ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಬಿಡುವು ನೀಡಿದ್ದ ಮಳೆ ಮುಂದುವರಿದ ಪರಿಣಾಮ ಮತ್ತೆ ಗುಡ್ಡ ಕುಸಿದಿದ್ದರಿಂದ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಬೆಳಗಿನಿಂದ ಸಂಜೆ ವರೆಗೆ ಅವಕಾಶ ನೀಡಲಾಗಿದೆ. ಆದರೆ, ಭಾರೀ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರಗಳು ಪ್ರವಾಸಿಗರಿಗೆ ಮುದ ನೀಡುವ ಸ್ಥಳಗಳಾಗಿವೆ. ದತ್ತಪೀಠ ಮಾರ್ಗದ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದರಿಂದ ಕೆಲ ದಿನ ಪ್ರವಾಸಿಗರ ಸಂಚಾರ ನಿಷೇಧಿಸಲಾಗಿತ್ತು. ಕಳಸಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಮೇಲೆ ನೀರು ಹರಿದು ಆಗಾಗ ಸಂಪರ್ಕ ಕಡಿತಗೊಂಡಿತ್ತು. ಅನೇಕ ಗ್ರಾಮಗಳಿಗೂ ಸಂಪರ್ಕ ಕಲ್ಪಿಸುವ ರಸ್ತೆ ತುಂಡಾಗಿ ಹಲವರು ಸಂಚಾರಕ್ಕಾಗಿ ಪ್ರಯಾಸ ಪಡಬೇಕಾಗಿತ್ತು.
ಮಲೆನಾಡು ಭಾಗದ ಮೂಡಿಗೆರೆ ತಾಲೂಕಿನಲ್ಲಿ ಹೆಚ್ಚು ಹಾನಿ ಉಂಟಾಗಿದ್ದರೆ, ಬಲ್ಲಾಳರಾಯನ ದುರ್ಗ ಬಿರುಕು ಬಿಟ್ಟಿದೆ. ವರ್ಷಧಾರೆ ಜತೆಗೆ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ಸೇರಿದಂತೆ ಪ್ರಮುಖ ಪ್ರವಾಸಿ ಸ್ಥಳಗಳ ರಸ್ತೆಯಲ್ಲಿ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಹವಾಮಾನ ಪರಿಸ್ಥಿತಿ ಸುಧಾರಿಸಿದರೆ ಮುಂದಿನ ತಿಂಗಳಿಂದ ಪ್ರವಾಸಿಗರ ಆಗಮನ ಹೆಚ್ಚಾಗುವ ನಿರೀಕ್ಷೆ ಇದೆ.