ಹೆಣ್ಣುಮಕ್ಕಳ ಆರೈಕೆಗೆ ಗಮನ ಕೊಡಿ
ಮಹಿಳೆಯರು ಆರೋಗ್ಯ ಯೋಜನೆ ಸದುಪಯೋಗಪಡಿಸಿಕೊಳ್ಳಲಿ: ಡಾ| ಗಿರೀಶ್
Team Udayavani, Mar 12, 2020, 6:07 PM IST
ಭರಮಸಾಗರ: ಹದಿಹರೆಯದ ವಯಸ್ಸಿನಲ್ಲೇ ಹೆಣ್ಣುಮಕ್ಕಳಿಗೆ ಉತ್ತಮ ಪೋಷಣೆ ಮತ್ತು ಆರೈಕೆಯ ಅಗತ್ಯವಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಟಿ.ವಿ. ಗಿರೀಶ್ ಹೇಳಿದರು.
ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಪೌಷ್ಟಿಕ ಆಹಾರ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಕಾಲದಲ್ಲಿ ಸೂಕ್ತ ಪರೀಕ್ಷೆಗಳ ಮುಖಾಂತರ ಅವರ ದೈಹಿಕ ಆರೋಗ್ಯವನ್ನು ಕಾಪಾಡುವುದು ಒಳಿತು. ಸದೃಢವಾದ ತಾಯಿಯಾಗಿ ಆರೋಗ್ಯವಂತ ಮಗುವನ್ನು ಹೆರುವ ಭಾರವನ್ನು ಹೆಣ್ಣುಮಕ್ಕಳು ನಿರ್ವಹಿಸಬೇಕಾಗುತ್ತದೆ. ಆರೋಗ್ಯ ಯೋಜನೆಗಳು ದಿನೇ ದಿನೇ ಹೆಚ್ಚುತ್ತಿದ್ದು, ಅವು ಸಾರ್ವಜನಿಕರ ಆರೋಗ್ಯ ಕಾಪಾಡಲು ಸಹಕಾರಿಯಾಗಿವೆ ಎಂದರು.
ಋತುಮಾನಕ್ಕೆ ಅನುಗುಣವಾಗಿ ದೊರೆಯುವ ಹಣ್ಣು ಹಂಪಲು, ತರಕಾರಿ, ಮೊಳಕೆ ಕಾಳುಗಳು, ನುಗ್ಗೆಸೊಪ್ಪು, ನಾರಿನಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬರೂ ವೈಯಕ್ತಿಕ ಮತ್ತು ಪರಿಸರ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ದೂರ ಪ್ರಯಾಣಗಳನ್ನು ಮಾಡದಿರುವುದು ಒಳಿತು. ಜನನಿಬಿಡ ಮತ್ತು ಜಾತ್ರೆ, ಸಭೆ, ಸಮಾರಂಭಗಳಲ್ಲಿ ಸಾಮೂಹಿಕ ಪಾಲ್ಗೊಳ್ಳುವಿಕೆಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕು ಎಂದರು. ಆಗಾಗೆ ಕೈ ತೊಳೆದುಕೊಳ್ಳುವುದು, ಶುದ್ಧ ನೀರು ಕುಡಿಯುವುದು, ಹಸ್ತಲಾಘವ ಮಾಡದೇ ಇರುವುದರಿಂದ ಕೊರೊನಾ ವೈರಸ್ ತಡೆಯಬಹುದು ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾ ಧಿಕಾರಿ ಬಿ. ಮೂಗಪ್ಪ ಮಾತನಾಡಿ, ಗ್ಲಾಕೋಮಾ ಯಾವುದೇ ರೋಗ ಲಕ್ಷಣ ಕಾಣಿಸಿಕೊಳ್ಳದೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ಕಾರಣದಿಂದ ನಿಗದಿತವಾಗಿ ತಜ್ಞ ವೈದ್ಯರಲ್ಲಿ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡು ಕಣ್ಣಿನ ರಕ್ಷಣೆ ಮಾಡಿಕೊಳ್ಳುವುದು ಒಳ್ಳೇಯದು ಎಂದರು.
ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ರಕ್ತದೊತ್ತಡ, ಹೃದಯದ ತೊಂದರೆ, ಮಧುಮೇಹ, ಇತರೆ ಸಾಂಕ್ರಾಮಿಕ ರೋಗಗಳು ಇದ್ದಂತಹ ಹೆಣ್ಣುಮಕ್ಕಳು ಮಕ್ಕಳು ಬೇಡವೆಂದು ನಿರ್ಧರಿಸಿದ ನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಜೀವಕ್ಕೆ ಕುತ್ತು ತಂದುಕೊಳ್ಳುವುದಕ್ಕಿಂತ ಪುರುಷರಿಗೆ ಹೊಸ ವಿಧಾನವಾದ ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಮಾಡಿಸಬಹುದು ಎಂದು ತಿಳಿಸಿದರು.
ಬಳಿಕ ರಕ್ತಹೀನತೆ ತಡೆಗಟ್ಟುವ ನಿಟ್ಟಿನಲ್ಲಿ ಆರು ತಿಂಗಳಿಂದ 5 ವರ್ಷದ ಒಳಗಿನ ಮಕ್ಕಳಿಗೆ ಐರನ್ ಸಿರಪ್ ಕುಡಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, 35ಕ್ಕೂ ಹೆಚ್ಚು ತಾಯಂದಿರು ಇದ್ದರು.