ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ
Team Udayavani, Jul 12, 2021, 10:37 PM IST
ಚಿತ್ರದುರ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ವಿರೋಧಿ ಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಚೇರಿ ಎದುರು ಭಾನುವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಅಡುಗೆ ಅನಿಲ, ಪೆಟ್ರೋಲ್ ಬಂಕ್ ಹಾಗೂ ಅಗತ್ಯ ವಸ್ತುಗಳ ಚಿತ್ರಗಳುಳ್ಳ ಪೋಸ್ಟರ್, ಫ್ಲೆಕ್ಸ್, ಕೈಪಿಡಿ, ಸ್ಟಿಕರ್ ಗಳನ್ನು ಬಿಡುಗಡೆಗೊಳಿಸಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ನಂದಿನಿಗೌಡ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ವಿದ್ಯುತ್ ದರ ಏರಿಸಿ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿವೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಲಾಕ್ಡೌನ್ನಿಂದ ಕೈಗೆ ಕೆಲಸವಿಲ್ಲದೆ ಪರದಾಡುತ್ತಿರುವ ಬಡವರು, ಕೂಲಿ ಕಾರ್ಮಿಕರು, ಮನೆ ಕೆಲಸದವರು, ಶ್ರಮಿಕರು ಹಾಗೂ ದಿನಗೂಲಿ ನೌಕರರ ಕಷ್ಟ ಹೇಳತೀರದಾಗಿದೆ ಎಂದರು.
ಅಡುಗೆ ಅನಿಲದ ಬೆಲೆ ಏರಿಕೆ ಬಿಸಿ ಗೃಹಿಣಿಯರಿಗೆ ಹೊರೆಯಾಗಿದೆ. ಕೇಂದ್ರ ಸರ್ಕಾರ ಕೂಡಲೆ ತೆರಿಗೆ ಇಳಿಸಿ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ, ಎರಡನೇ ಅವ ಧಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಚುನಾವಣಾ ಪೂರ್ವದಲ್ಲಿ ದೇಶದ ಜನರಿಗೆ ನೀಡಿದ್ದ ಯಾವ ಭರವಸೆ ಈಡೇರಿಸಿಲ್ಲ. ಬದಲಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಸಿರುವುದೆ ಬಿಜೆಪಿ ಸಾಧನೆ.
ಕೂಡಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಬೆಲೆ ಕಡಿತಗೊಳಿಸಬೇಕು ಎಂದರು. ಜಿಲ್ಲಾ ಕಾಂಗ್ರೆಸ್ ಪದಾಧಿ ಕಾರಿಗಳಾದ ಡಿ.ಎನ್. ಮೈಲಾರಪ್ಪ, ಕೆ.ಪಿ.ಸಂಪತ್ಕುಮಾರ್, ಜಾನ್ಹವಿ ನಾಗರಾಜ್, ನಜ್ಮಾ, ರುದ್ರಸ್ವಾಮಿ, ಮೋಹನ್ಪೂಜಾರಿ, ಎನ್.ಡಿ.ಕುಮಾರ್, ಮುದಸಿರ್ ನವಾಜ್, ಮಹಡಿ ಶಿವಮೂರ್ತಿ, ಎಂ.ಡಿ. ಹಸನ್ತಾಹೀರ್ ಮತ್ತಿತರರಿದ್ದರು.