G.P. ಸದಸ್ಯನನ್ನು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು,ದೈಹಿಕ ಹಲ್ಲೆ ಮಾಡಿದ ಪೊಲೀಸರು
Team Udayavani, Oct 17, 2023, 3:23 PM IST
ಭರಮಸಾಗರ (ಚಿತ್ರದುರ್ಗ): ಗ್ರಾಮ ಪಂಚಾಯತ್ ಸದಸ್ಯನನ್ನು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು ಭರಮಸಾಗರ ಪೊಲೀಸರು ದೈಹಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆ.16ರ ಸೋಮವಾರ ಅಡವಿಗೊಲ್ಲರಹಳ್ಳಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ರಹಮತ್ ಉಲ್ಲಾ ಎಂಬುವರು ತಮ್ಮದೇ ಜಮೀನಿನಲ್ಲಿ ಹಾದು ಹೋಗಿರುವ ರಿನ್ಯೂ ವಿಂಡ್ ಟರ್ಬನ್ ಮಿಲ್ಸ್ ನವರು ನಿರ್ಮಿಸಿರುವ ವಿದ್ಯುತ್ ತಂತಿ ಹರಿದು ಬಿದ್ದು ಮರವೊಂದು ಸುಟ್ಟಿರುತ್ತದೆ.
ವಿದ್ಯುತ್ ತಂತಿ ಹರಿದು ಬಿದ್ದರೆ ಪ್ರಾಣಾಪಾಯಗಳು ಜನರು ಮತ್ತು ಜಾನುವಾರುಗಳಿಗೆ ಕಟ್ಟಿಟ್ಟ ಬುತ್ತಿ. ಅಲ್ಲದೆ ವಿಂಡ್ ಕಂಪನಿಯವರು ಯಳಗೋಡು ಗ್ರಾಮದ ಕೆರೆ ಮತ್ತು ಇತರೆಡೆ ಕೂಡ ಕಂಬಗಳನ್ನು ಹಾಕಲಾಗಿದೆ. ಈ ಕುರಿತು ಸ್ಥಳೀಯ ಗ್ರಾಮ ಪಂಚಾಯತ್ ಅನುಮತಿ ಪಡೆದಿಲ್ಲ.
ಇದರ ಕುರಿತು ಡಿಸಿ , ಎಸ್ ಪಿ, ಸಿಎಸ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಪ್ರಕರಣದ ಬಗ್ಗೆ ರೆಹಮತ್ ಉಲ್ಲಾ ಭರಮಸಾಗರ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದರು.
ಈ ನಡುವೆ ವಿದ್ಯುತ್ ಕಂಬಗಳಿಂದ ಆಗುವ ಅನಾಹುತಗಳಿಗೆ ವಿಂಡ್ ಕಂಪನಿಯೇ ನೇರ ಹೊಣೆ. ಈ ಕುರಿತು ಒಂದು ಒಡಂಬಡಿಕೆ ಮಾಡುವವರೆಗೆ ಯಾವುದೇ ರೀತಿಯ ಕಾಮಗಾರಿ ತಮ್ಮ ಜಮೀನಿನಲ್ಲಿ ನಡೆಸುವಂತಿಲ್ಲ ಎಂದು ತಡೆಹಿಡಿಯಲಾಗಿತ್ತು.
ಸೋಮವಾರ ಏಕಾಏಕಿ ಭರಮಸಾಗರ ಠಾಣೆಯ ಆರು ಜನ ಪೊಲೀಸ್ ರೊಂದಿಗೆ ರೆಹಮತ್ ಉಲ್ಲಾ ಜಮೀನಿಗೆ ರಿನ್ಯೂ ಕಂಪನಿಯ ಸಿಬ್ಬಂದಿ ಆಗಮಿಸಿ ತುಂಡಾದ ವಿದ್ಯುತ್ ತಂತಿ ರಿಪೇರಿಯನ್ನು ನಡೆಸಲು ಬಂದು ದೌರ್ಜನ್ಯದಿಂದ ವಿಂಡ್ ಕಂಪನಿಯವರ ಪರವಾಗಿ ಪೊಲೀಸರು ತಮ್ಮ ಸಹೋದರ, ತಾಯಿ ಮತ್ತು ತಮ್ಮನ ಮೇಲೆ ಅವಾಚ್ಯ ಶಬ್ದಗಳಿಂದ ಬೈಯ್ದು ಪಿಎಸ್ಐ ರವಿ ನಾಯಕ್, ಪಿಸಿಗಳಾದ ಶ್ರೀನಿವಾಸ್, ಕೃಷ್ಣ ನಾಯ್ಕ್, ಅಣ್ಣಪ್ಪ ಎಂಬುವರು ದೈಹಿಕ ಹಲ್ಲೆ ನಡೆಸಿದ್ದಾರೆ.
ಸದ್ಯ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ರೆಹಮತ್ ಉಲ್ಲಾ ಮತ್ತು ಸಹೋದರರು ದಾಖಲಾಗಿದ್ದಾರೆ. ಈ ಕುರಿತು ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗುತ್ತದೆ ಎಂದು ರೆಹಮತ್ ಉಲ್ಲಾ ಪತ್ರಿಕೆಗೆ ತಿಳಿಸಿದರು.