ಭರಮಸಾಗರ: ಭಾರಿ ಮಳೆ; ಎರಡು ಗ್ರಾಮಗಳ ಸಂಪರ್ಕ ಕಡಿತ
Team Udayavani, Oct 11, 2022, 1:12 PM IST
ಭರಮಸಾಗರ: ಧಾರಾಕಾರ ಮಳೆಯಿಂದಾಗಿ ಸಮೀಪದ ಕೋಗುಂಡೆ ಗ್ರಾಮದ ಬಳಿ ನದಿಯಂತೆ ಹರಿಯುತ್ತಿರುವ ದೊಡ್ಡಹಳ್ಳದ ಕಾರಣ ಕೋಗುಂಡೆ ಮತ್ತು ಕೋಡಿಹಳ್ಳಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಅ. 11ರ ಸೋಮವಾರ ಸುರಿದ ಧಾರಾಕಾರ ಮಳೆಯಿಂದಾಗಿ ಭರಮಸಾಗರ ದೊಡ್ಡಕೆರೆ ಕೊಡಿ ಬಿದ್ದು ನೀರು ಹರಿಯುವುದರ ಜೊತೆಗೆ ಕೆರೆಯ ಸುರಕ್ಷತೆ ದೃಷ್ಟಿಯಿಂದ ಸೋಮವಾರ ಸಂಜೆ ದೊಡ್ಡಕೆರೆ ಏರಿ ಅಗೆಯಲಾಗಿತ್ತು. ಇದರೊಂದಿಗೆ ನಂದಿಹಳ್ಳಿ, ಚೌಲಿಹಳ್ಳಿ ಗ್ರಾಮಗಳ ಸುತ್ತಮುತ್ತ ವಿಪರೀತ ಮಳೆ ಸುರಿದ ಕಾರಣ ಈ ಎಲ್ಲಾ ನೀರು ದೊಡ್ಡಹಳ್ಳದ ಮೂಲಕ ಹರಿದು ಸಾಗುವ ಮಾರ್ಗದಲ್ಲಿ ಕೋಗುಂಡೆ ಮತ್ತು ಕೋಡಿಹಳ್ಳಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಸೇತುವೆ ಮೇಲೆ ಹತ್ತಾರು ಅಡಿ ಎತ್ತರದವರೆಗೆ ಮಂಗಳವಾರ ಹರಿಯುತ್ತಿರುವ ಕಾರಣ ಎರಡು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ.
ಎರಡು ಹಳ್ಳಿಗಳ ಜನರು ಹಳ್ಳದ ಎರಡು ಕಡೆಗಳ ಬಳಿ ಬಂದು ನೀರು ಹರಿಯುವ ದೃಶ್ಯ ಕಣ್ತುಂಬಿಕೊಂಡರು. ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ಎರಡು ಹಳ್ಳಿಯ ಜನರು ಹಳ್ಳದ ಎರಡು ದಂಡೆಗಳ ಮೇಲೆ ನಿಂತಿದ್ದರು. ಹಳ್ಳದ ಎರಡು ಬದಿಯಲ್ಲಿನ ಹೊಲ -ತೋಟಗಳಿಗೆ ನೀರು ನುಗ್ಗಿದ್ದು, ಅಪಾರ ಬೆಳೆ ನಷ್ಟ ಸಂಭವಿಸಿದೆ ಎಂದು ಹಳ್ಳಿಗರು ಅಳಲು ವ್ಯಕ್ತಪಡಿಸಿದರು.