ಮಾಂಸದಂಗಡಿಯಲ್ಲಿ ಶುಚಿತ್ವ ಕಾಪಾಡಿ: ಸಿಪಿಐ
Team Udayavani, Apr 22, 2020, 4:45 PM IST
ಹಿರಿಯೂರು: ನಗರದ ಮಾಂಸ ಮಾರಾಟ ಅಂಗಡಿಯೊಂದರಲ್ಲಿ ಮಾಂಸ ಮಾರಾಟ ನಡೆದಿರುವುದು
ಹಿರಿಯೂರು: ನಗರದ ನಿಗದಿತ ಮಾರುಕಟ್ಟೆ ಪ್ರದೇಶದಲ್ಲಿ ಪ್ರತಿದಿನ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮೀನು, ಕೋಳಿ, ಕುರಿ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾರಾಟಗಾರರು ಶುಚಿತ್ವ ಮತ್ತು ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಸೂಚಿಸಿದರು.
ನಗರದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ನಡೆದ ಮೀನು, ಕೋಳಿ, ಕುರಿ ಮಾಂಸ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು. ಮಾಂಸ ಮಾರಾಟಗಾರರು ನಗರಸಭೆ ಹಾಗೂ ತಾಲೂಕು ಆಡಳಿತ ಸೂಚಿಸುವ ದರದಲ್ಲೇ ಮಾರಾಟ ಮಾಡಬೇಕು. ಅಲ್ಲದೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಪ್ರಮಾಣೀಕರಿಸಿರಬೇಕು. ಸೇವಿಸಲು ಯೋಗ್ಯವಾದ ಮಾಂಸವನ್ನು ಮಾತ್ರ ಮಾರಾಟ ಮಾಡಬೇಕು. ವ್ಯಾಪಾರ ವಹಿವಾಟಿನ ಸ್ಥಳದಲ್ಲಿ ಗ್ರಾಹಕರಿಗೆ ಕಿರಿಕಿರಿ ಮಾಡುವಂತಿಲ್ಲ ಮತ್ತು ಪರವಾನಗಿ ಪಡೆದವರು ಮಾತ್ರ ಮಾಂಸ ಮಾರಾಟ ಮಾಡಬೇಕು. ನಿಷೇಧದ ದಿನ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು. ಸಭೆಯಲ್ಲಿ ಪಿಎಸ್ಐ ನಾಗರಾಜ್, ಅನುಸೂಯಮ್ಮ ಹಾಗೂ ಕುರಿ, ಮೇಕೆ, ಕೋಳಿ, ಮಾರಾಟಗಾರರು ಭಾಗವಹಿಸಿದ್ದರು.