ಭರವಸೆಯಂತೆ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಲಿ
Team Udayavani, Aug 4, 2018, 5:12 PM IST
ಚಿತ್ರದುರ್ಗ: ಯಾವ ರೈತರಿಗೆ ಸಾಲ ಮನ್ನಾ ಯೋಜನೆ ದೊರೆಯುತ್ತದೆ ಎನ್ನುವ ವಿಚಾರದಲ್ಲಿ ರಾಜ್ಯ ಸರ್ಕಾರದ ಕಾರ್ಯ ವೈಖರಿ ಪ್ರಶ್ನಿಸುವಂತಾಗಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಅನ್ನೇಹಾಳ್ ಗ್ರಾಮದ ಹಳೇ ವಿದ್ಯಾರ್ಥಿಗಳ ಸಂಘದಿಂದ ಶಾಸಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಹಾಗೂ ಕೃಷಿ, ತೋಟಗಾರಿಕೆ, ಬೆಸ್ಕಾಂ ಇಲಾಖೆ ಮುಖ್ಯಸ್ಥರೊಂದಿಗೆ ನಡೆದ ಸಂವಾದದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರೈತರ ಸಾಲ ಮನ್ನಾ ಕುರಿತ ಸ್ಪಷ್ಟ ಮೂಡಿಸಬೇಕು. ಚುನಾವಣೆ ಪೂರ್ವದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದಂತೆ ಎಲ್ಲ ರೈತರ ಸಾಲ ಮನ್ನಾ ಮಾಡಲಿ ಎಂದು ಒತ್ತಾಯಿಸಿದರು.
ನನ್ನ ರಾಜಕೀಯ ಜೀವನದಲ್ಲಿ ಯಾರಿಗೂ ತೊಂದರೆ ನೀಡಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಒಳ್ಳೆಯದನ್ನೇ ಮಾಡಿದ್ದೇನೆ. ಯಾರ ವಿರುದ್ಧವೂ ಪೊಲೀಸ್ಗೆ ದೂರು ನೀಡಿ ತೊಂದರೆ ನೀಡುವಂತೆ ಹೇಳಿಲ್ಲ. ಮುಂದೆಯೂ ಯಾರಿಗೂ
ತೊಂದರೆ ನೀಡುವುದಿಲ್ಲ ಎಂದರು.
ಅನ್ನೆಹಾಳ್ ಭಾಗದಲ್ಲಿ ವಿದ್ಯುತ್ ತೊಂದರೆಯಾಗಿದ್ದು ಸಬ್ ಸ್ಟೇಷನ್ ನಿರ್ಮಾಣ ಮಾಡಲು ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಈಗಾಗಲೇ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಮುಂದಿನ ಮಾರ್ಚಿ ಒಳಗಾಗಿ ಕಾಮಗಾರಿ ಮುಗಿಯುವ ನೀರೀಕ್ಷೆ ಇದೆ ಎಂದು ತಿಳಿಸಿದರು.
ಈ ಭಾಗ ತಾಲೂಕಿನ ಗಡಿ ಪ್ರದೇಶವಾಗಿದ್ದು, ಶಾಲಾ ಕೊಠಡಿಗಳ ಕೊರೆತೆ ಇದ್ದು ಸಮಸ್ಯೆ ಇದ್ದು ಶಾಸಕರ ಅನುದಾನದಲ್ಲಿ ಕೊಠಡಿ ನಿರ್ಮಿಸಲಾಗುವುದು. ವಾಣಿ ವಿಲಾಸ ಸಾಗರಕ್ಕೆ ಶೀಘ್ರ ನೀರು ತರುವ ಕಾರ್ಯ ಆಗಲಿದೆ.
ಮುಂದಿನ ದಿನಗಳಲ್ಲಿ ಚಿತ್ರದುರ್ಗ ತಾಲೂಕಿಗೆ ನೀರು ಬರಲಿದೆ ಎಂದು ಹೇಳಿದರು.
ವಿಧಾನಸಭೆ ಇತಿಹಾಸದಲ್ಲೇ 104 ಶಾಸಕ ಬಲಹೊಂದಿ ವಿರೋಧ ಪಕ್ಷವಾಗಿದೆ. ವಿರೋಧ ಪಕ್ಷ ಬಲಿಷ್ಠವಾಗಿದ್ದು, ಸರ್ಕಾರ ಅಷ್ಟು ಸುಲಭವಾಗಿ ಜನತೆಯನ್ನು ಮೋಸ ಮಾಡಲು ಬಿಡುವುದಿಲ್ಲ. ಜನತೆಯ ಪರವಾಗಿ ಬಿಜೆಪಿ
ಹೋರಾಟ ಮಾಡುತ್ತದೆ ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆ ಮತ್ತು ನಿವೇಶನ ಇಲ್ಲದವರ ಪಟ್ಟಿ ತಯಾರು ಮಾಡುವಂತೆ ಸೂಚನೆ ನೀಡಲಾಗಿದೆ. ಪಿಡಿಒಗಳು ಪೂರ್ಣ ಪ್ರಮಾಣದ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ರವಾನೆ ಮಾಡಲಿದ್ದು ಕೇಂದ್ರ ಸರ್ಕಾರ ಪ್ರತಿಯೊಬ್ಬರಿಗೂ ನಿವೇಶನ, ಮನೆ ನೀಡಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 24 ಲೋಕಸಭಾ ಸೀಟು ಗೆಲುವ ಗುರಿ ಇಟ್ಟುಕೊಳ್ಳಲಾಗಿದೆ. ಮತದಾರರು ಸಹಕಾರ ನೀಡಿ ಮೋದಿ ಮತ್ತೇ ದೇಶದ ಪ್ರಧಾನಮಂತ್ರಿ ಆಗಬೇಕು. ಲೋಕಸಭಾ ಚುನಾವಣೆ ವೇಳೆಗೆ ಸರ್ಕಾರ ಬಿದ್ದರೂ ಆಶ್ಚರ್ಯ ಇಲ್ಲ. ಆಕಸ್ಮಾತ್ ಸರ್ಕಾರ ಬೀಳದಿದ್ದರೆ ಎಂ.ಪಿ ಚುನಾವಣೆಯ ನಂತರ ಸರ್ಕಾರ ಬೀಳಲಿದ್ದು ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗಿ ರೈತರ
ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.
ಬೆಸ್ಕಾಂ ಎಇಇ ರಮೇಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದೇವರಾಜ್, ಕೃಷಿ ಅಧಿಕಾರಿ ತಿಪ್ಪೇಸ್ವಾಮಿ, ಅನ್ನೇಹಾಳ್ ಗ್ರಾಪಂ ಅಧ್ಯಕ್ಷ ವರದ, ಸದಸ್ಯರಾದ ಪ್ರಕಾಶ, ಶಿಮಮೂರ್ತಿ, ಮಂಜಣ್ಣ, ಮಹಾಲಿಂಗಪ್ಪ ಹಳೆ
ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಿದ್ದಪ್ಪ, ಮಾಜಿ ಸದಸ್ಯ ಕೆಂಗಣ್ಣ ಇತರರು ಇದ್ದರು.