ನರೇಗಾದಡಿ ಕೆಲಸ ನೀಡಿ ವಲಸೆ ತಡೆಗಟ್ಟಿ
Team Udayavani, Jun 23, 2020, 10:41 AM IST
ಮೊಳಕಾಲ್ಮೂರು: ತಾಲೂಕಿನಲ್ಲಿ ಭೀಕರ ಬರ ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಬಡ ಕುಟುಂಬಗಳ ಜೀವನ ನಿರ್ವಹಣೆಗಾಗಿ ಕಡ್ಡಾಯವಾಗಿ ನರೇಗಾ ಯೋಜನೆ ಕೂಲಿ ಕೆಲಸ ನೀಡಬೇಕು. ನಗರ ಪ್ರದೇಶಗಳಿಗೆ ವಲಸೆ ಹೋಗದಂತೆ ತಡೆಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ತಾಲೂಕಿನ ರಾಂಪುರ ಗ್ರಾಮ ವ್ಯಾಪ್ತಿಯ ಜಮೀನೊಂದರಲ್ಲಿ ನರೇಗಾ ಯೋಜನೆಯಲ್ಲಿ ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನಲ್ಲಿ ಬಹಳಷ್ಟು ಬಡ ಕುಟುಂಬಗಳಿರುವುದರಿಂದ ಯಾವುದೇ ಕಾರಣಕ್ಕೂ ಜೆಸಿಬಿಯಿಂದ ಕೆಲಸ ಮಾಡಿಸದೆ ಜಾಬ್ ಕಾರ್ಡ್ ಹೊಂದಿದವರಿಗೆ ಕಡ್ಡಾಯವಾಗಿ ಕೆಲಸ ನೀಡಬೇಕು. ಬಹುತೇಕ ಕುಟುಂಬಗಳು ಕೆಲಸವಿಲ್ಲದೆ ದೂರದ ನಗರ ಪ್ರದೇಶಗಳಿಗೆ ಗುಳೆ ಹೋಗಿ ಕೆಲಸ ಮಾಡಿ ಜೀವನ ಸಾಗಿಸುವಂತಾಗಿದೆ. ಬಡ ಕುಟುಂಬಗಳ ಜೀವನೋಪಾಯಕ್ಕಾಗಿ ಜಾಬ್ಕಾರ್ಡ್ ಹೊಂದಿದವರಿಗೆ ಕಡ್ಡಾಯವಾಗಿ ಕೂಲಿ ಕೆಲಸ ನೀಡಬೇಕೆಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ದೇವಸಮುದ್ರ ಗ್ರಾಮದ ಬಳಿ ಇರುವ ಶ್ರೀ ಪರಮೇಶ್ವರಪ್ಪ ಚೌಕಿಮಠದ ಸಮೀಪದಲ್ಲಿ ನಿರ್ಮಿಸಲಾಗಿರುವ ಯಾತ್ರಿ ನಿವಾಸ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು. ತಹಶೀಲ್ದಾರ್ ಎಂ.ಬಸವರಾಜ್, ತಾಪಂ ಇಒ ಪ್ರಕಾಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಮೊಳಕಾಲ್ಮೂರು ತಾಲೂಕು ಮಂಡಲಾಧ್ಯಕ್ಷ ಡಾ| ಪಿ.ಎಂ. ಮಂಜುನಾಥ, ನಾಯಕನಹಟ್ಟಿ ಮಂಡಲಾಧ್ಯಕ್ಷ ರಾಮರೆಡ್ಡಿ, ತಾಪಂ ಸದಸ್ಯರಾದ ಎಸ್. ತಿಪ್ಪೇಸ್ವಾಮಿ, ಬಾಬು, ಮುಖಂಡರಾದ ಜಿಂಕಲು ಬಸವರಾಜ್, ಡಿ.ಎಂ. ಈಶ್ವರಪ್ಪ, ಆರ್.ಜಿ. ಗಂಗಾಧರಪ್ಪ, ಎಲ್.ಪರಮೇಶ್ವರಪ್ಪ ಇತರರು ಇದ್ದರು.