ಆಧಾರ್ ಅದಾಲತ್
Team Udayavani, Dec 8, 2017, 10:07 AM IST
ಪುರಭವನ: ಜಿಲ್ಲಾಡಳಿತ ಹಾಗೂ ಇ ಆಡಳಿತ ಕೇಂದ್ರ ಬೆಂಗಳೂರು ಸಹಯೋಗದಲ್ಲಿ ಆಧಾರ್ ನೋಂದಣಿ, ತಿದ್ದುಪಡಿಗಾಗಿ ಪುರಭವನದ ಮಿನಿ ವಿಧಾನ ಸೌಧದಲ್ಲಿ ಆಯೋಜಿಸಲಾದ ಆಧಾರ್ ಅದಾಲತ್ನಲ್ಲಿ 1000 ಮಂದಿಗೆ ಆಧಾರ್ ವಿತರಿಸಲಾಗಿದ್ದು, 2,849 ಮಂದಿಗೆ ಟೋಕನ್ ನೀಡಲಾಗಿದೆ.
ಡಿ.4ರಿಂದ 7ರ ವರೆಗೆ ಆಯೋಜಿಸಲಾದ ಅದಾಲತ್ನಲ್ಲಿ ಮೊದಲ ದಿನ 98 ಮಂದಿಯ ಆಧಾರ್ ನೋಂದಣಿಯಾಗಿದ್ದು, 152 ಮಂದಿಯ ಆಧಾರ್ ತಿದ್ದುಪಡಿ ಮಾಡಲಾಗಿದೆ. ಎರಡನೇ ದಿನ 101 ಮಂದಿ ನೋಂದಣಿ ಮಾಡಿದ್ದು, 149 ತಿದ್ದುಪಡಿ, ಮೂರನೇ ದಿನ 76 ಮಂದಿ ನೋಂದಣಿ ಹಾಗೂ 174 ತಿದ್ದುಪಡಿ, ಕೊನೆಯ ದಿನ 252 ಮಂದಿಗೆ ಆಧಾರ್ ನೀಡಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಕೌಂಟರ್
ಆಧಾರ್ ಅದಾಲತ್ನಲ್ಲಿ ಟೋಕನ್ ನೀಡಿದವರಿಗೆ ನಿಗದಿಪಡಿಸಲಾದ ದಿನಾಂಕದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಕೌಂಟರ್ ತೆರೆದು ನೋಂದಣಿ ಪ್ರಕ್ರಿಯೆ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಬೇರೆ ರಾಜ್ಯಗಳ ಜನರಿಂದ ಗೊಂದಲ
ಕಳೆದ ಮೂರು ದಿನಗಳಿಂದ ಆಧಾರ್ ಆದಾಲತ್ ಆಯೋಜಿಸಲಾಗಿದ್ದು, ಬೇರೆ ರಾಜ್ಯಗಳಿಂದ ಸೂಕ್ತ ದಾಖಲೆಗಳಿಲ್ಲದ ಕೂಲಿ ಕಾರ್ಮಿಕರು ಆಗಮಿಸಿದ್ದರಿಂದ ಗೊಂದಲಗಳು ಉಂಟಾಗಿವೆ. ಟೋಕನ್ ನೀಡಲಾದ ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡಲಾದ ವಿಶೇಷ ಕೌಂಟರ್ನಲ್ಲಿ ಆಧಾರ್ ವಿತರಿಸಲಾಗುವುದು ಎಂದು ಆಧಾರ್ ಸಂಯೋಜಕರು ತಿಳಿಸಿದ್ದಾರೆ.
ಶೇ.96 ಆಧಾರ್ ವಿತರಣೆ
2017ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 22,11,587 ಜನಸಂಖ್ಯೆ ಇದ್ದು, ಇದರಲ್ಲಿ 21,30,024 ಮಂದಿಗೆ ಆಧಾರ್ ವಿತರಿಸಲಾಗಿದೆ. ಪ್ರಸ್ತುತ ಶೇ.96 ಮಂದಿಗೆ ಆಧಾರ್ ನೀಡಲಾಗಿದ್ದು, ಶೇ.3 ಮಂದಿಗೆ ವಿತರಣೆ ಬಾಕಿ ಇದೆ.