ಬಯಲು ಶೌಚ ಮುಕ್ತ ನಗರಕ್ಕೆ ಕ್ರಮ: ಜಯಂತಿ ಬಲ್ನಾಡು
Team Udayavani, Jan 1, 2018, 2:45 PM IST
ನಗರ: ನಗರಸಭೆ ವ್ಯಾಪ್ತಿಯನ್ನು ಬಯಲು ಶೌಚ ಮುಕ್ತ ಪ್ರದೇಶವನ್ನಾಗಿ ಮಾರ್ಪಾಡಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಸರಕಾರವು ಪುತ್ತೂರು ನಗರವನ್ನು ಬಯಲು ಶೌಚಮುಕ್ತ ಪ್ರದೇಶವೆಂದು ಘೋಷಿಸಿ ಪ್ರಶಸ್ತಿ ನೀಡಿದೆ ಎಂದು ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದರು. ಅವರು 22ನೇ ವಾರ್ಡಿನ ಸಾಮೆತ್ತಡ್ಕ ಅಂಬೇಡ್ಕರ್ ಕಾಲನಿಯಲ್ಲಿ ನಗರಸಭಾ ವತಿಯಿಂದ ನಿರ್ಮಿಸಲಾಗಿರುವ ಸಮುದಾಯ ಶೌಚಾಲಯವನ್ನು ಲೋಕಾರ್ಪಣೆ ಮಾಡಿದರು.
ಸಹಾಯಧನ
ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ಕಾಲನಿಗಳಲ್ಲಿ ವಾಸಿಸುತ್ತಿರುವ ಬಡವರಿಗೆ ಶೌಚಾಲಯ ನಿರ್ಮಿಸಲು ನಗರಸಭಾ ವತಿಯಿಂದ ತಲಾ 15,000 ರೂ. ನಂತೆ ಸಹಾಯಧನವನ್ನು ನೀಡಲಾಗಿದೆ ಎಂದು ಹೇಳಿದರು. ಹಿರಿಯ ಸದಸ್ಯ ಎಚ್. ಮಹಮ್ಮದ್ ಆಲಿ ಮಾತನಾಡಿ, ಪುತ್ತೂರು ನಗರದಲ್ಲಿ ಎಲ್ಲಾ ಶೌಚಾಲಯಗಳನ್ನು ದುರಸ್ತಿ ಪಡಿಸಲಾಗಿರುತ್ತದೆ. ದರ್ಬೆಯಲ್ಲಿರುವ ಶೌಚಾಲಯವನ್ನು ದುರಸ್ತಿಗೊಳಿಸಿ ಅಭಿವೃದ್ಧಿಪಡಿಸಲು ಅನುದಾನ ಮಂಜೂರು ಮಾಡ ಲಾಗಿದೆ ಎಂದು ಹೇಳಿದರು.
ಇ-ಶೌಚಾಲಯ
ನಗರದ ಬಸ್ ಸ್ಟಾಂಡ್ ಬಳಿ ಹಾಗೂ ಬೊಳುವಾರಿನಲ್ಲಿ ಆಧುನಿಕ ತಂತ್ರಜ್ಞಾನದ ಇ-ಶೌಚಾಲಯವನ್ನು ನಿರ್ಮಿಸಲಾಗುತ್ತಿದೆ. ಆವಶ್ಯಕತೆ ಇರುವಲ್ಲಿ ಇ-ಶೌಚಾಲಯವನ್ನು ಅಳವಡಿಸಲು ಚಿಂತಿಸಲಾಗಿದೆ. ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸ್ಥಳೀಯ ನಗರಸಭಾ ಸದಸ್ಯರಾದ ಉಷಾ ಧನಂಜಯ ಆಚಾರ್ಯ, ಮುಖೇಶ್ ಕೆಮ್ಮಿಂಜೆ, ಸ್ಥಳೀಯ ಮುಖಂಡರಾದ ಅಶ್ವಿನಿ ಚಂದ್ರ, ಗುತ್ತಿಗೆದಾರರಾದ ರಿಯಾಜ್, ರಂಜಿತ್, ಉಪಸ್ಥಿತರಿದ್ದರು.